ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್ 18 ರಂದು ನಡೆಯಬೇಕಿದ್ದ ಚುನಾವಣೆ ಹೈಕೋರ್ಟ್ನ ತಡೆಯಾಜ್ಞೆಯಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮೀಸಲಾತಿ ಗೊತ್ತುಪಡಿಸಲಾಗಿತ್ತು. ಅದರಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್ 18ರಂದು ಚುನಾವಣೆ ನಿಗದಿ ಮಾಡಿ ತಹಶೀಲ್ದಾರ ಶಂಶಾಲಂ ಪುರಸಭೆ ಸದಸ್ಯರಿಗೆ ನೋಟಿಸ್ ನೀಡಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಫಾತಿಮಾ ಮೌಲಾ ಸಾಬ್, ಪ್ರಮೋದ್ ಕುಮಾರ್, ಮೌಲಾ ಸಾಬಾ ಛೋಟುಸಾಬ್, ಶರಣಪ್ಪ ಬಸಪ್ಪ ಈ ನಾಲ್ಕು ಜನರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದೇ ಕೆಆರ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷಾಂತರ ಕಾಯ್ದೆಯ ಅಡಿಯಲ್ಲಿ ಈ ನಾಲ್ಕು ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಈ ನಾಲ್ಕು ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಸದಸ್ಯತ್ವ ಅನರ್ಹಗೊಳಿಸಿದ್ದಾರೆಂದು ಜಿಲ್ಲಾಧಿಕಾರಿಗಳ ಆದೇಶ ವಿರುದ್ಧ ಈ ನಾಲ್ವರು ಸದಸ್ಯರು ಕಲುಬುರಗಿ ಹೈಕೋರ್ಟ್ನ ಮೊರೆ ಹೋಗಿದ್ದರು.
ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿ, ಸೆಪ್ಟೆಂಬರ್ 19ಕ್ಕೆ ವಿಚಾರಣೆ ಮುಂದೂಡಿದೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಹಾಲಿನ ದರ ಹೆಚ್ಚಿಸುವ ನಿರ್ಧಾರ ಸ್ವಾಗತಾರ್ಹ: ರೈತ ಸಂಘ
ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದ ಸದಸ್ಯರು:
ಪುರಸಭೆಯಲ್ಲಿ ಬಹುಮತ ಇರುವ ಕಾಂಗ್ರೆಸ್ ಪಕ್ಷವು ತನ್ನ ಸದಸ್ಯರನ್ನು ಬೇರೆ ಪಕ್ಷದವರು ತಮ್ಮತ್ತ ಸೆಳೆಯದಂತೆ ಕಾಂಗ್ರೆಸ್ನ ಸದಸ್ಯರನ್ನು ಕಳೆದ 15 ದಿನಗಳ ಹಿಂದೆಯೇ ಪ್ರವಾಸಕ್ಕೆ ಕಳಿಸಿತ್ತು. ಆದರೆ ಚುನಾವಣೆ ಮುಂದೂಡಿದ್ದರಿಂದ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದ್ದಾರೆ.
ಮತ ಚಲಾವಣೆ ಅವಕಾಶ ನೀಡಲು ಮನವಿ:
ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ದಿಸಲು ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮತ ಹಾಕಲು ಅವಕಾಶ ನೀಡಬೇಕೆಂದು ಅನರ್ಹಗೊಂಡಿದ್ದ ನಾಲ್ಕು ಜನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸೆ.18ರಂದು ದಿನ ನಿಗದಿ ಮಾಡಲಾಗಿತ್ತು. ಆದರೆ ಕಲುಬುರಗಿ ಹೈಕೋರ್ಟ್ ಪೀಠ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸೆಪ್ಟೆಂಬರ್ 19ರವರಿಗೆ ತಡೆಯಾಜ್ಞೆ ನೀಡಿದ್ದರಿಂದ ಸೆ.19ರಂದು ವಿಚಾರಣೆ ನಂತರ ನ್ಯಾಯಾಲಯದ ಆದೇಶದಂತೆ ಮುಂದಿನ ದಿನಾಂಕ ನಿಗದಿ ಮಾಡಲಾಗುವುದು ಎಂದು ತಹಶೀಲ್ದಾರ್ ಶಂಶಾಲಂ ತಿಳಿಸಿದ್ದಾರೆ.
