ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ರಾಯಚೂರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತರು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, “ಅಂಬೇಡ್ಕರ್ ಅವರ ಕುರಿತು ಸಂಸತ್ತಿನಲ್ಲಿ ಮಾತನಾಡುವಾಗ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅಂಬೇಡ್ಕರ್ ಅವರ ಹೆಸರು ಹೇಳುವುದು ವ್ಯಸನವಾಗಿದೆಯೆಂದು ಹೇಳಿರುವುದು ಖಂಡನಾರ್ಹ” ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಎಸ್ ಮಾರೆಪ್ಪ ಮಾತನಾಡಿ, “ಕೇಂದ್ರ ಮಂತ್ರಿ ಅಮಿತ್ ಶಾ, ʼಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಒಂದು ವ್ಯಸನವಾಗಿದೆ. ಅಷ್ಟು ಬಾರಿ ದೇವರ ಸ್ಮರಣೆ ಮಾಡಿದ್ದರೆ ಏಳು ಜನ್ಮಕ್ಕೆ ಸ್ವರ್ಗವಾದರೂ ಪ್ರಾಪ್ತಿಯಾಗುತ್ತದೆʼ ಎಂದಿರುವುದು ಅಕ್ಷಮ್ಯ. ಮುಕ್ಕೋಟಿ ದೇವತೆಗಳ ಮೇಲೆ ನಂಬಿಕೆಯಿದ್ದರೆ ಸಂವಿಧಾನದ ಅಡಿಯಲ್ಲಿರುವ ಪ್ರಜಾಪ್ರಭುತ್ವದ ಆಡಳಿತವನ್ನು ಅಮಿತ್ ಶಾ ತ್ಯಜಿಸಲಿ” ಎಂದು ಕಿಡಿಕಾರಿದರು.
“ಮುಕ್ಕೋಟಿ ದೇವತೆಗಳು ವಿದ್ಯೆ, ಮಾನ ಮರ್ಯಾದೆ, ಉಡುಪು ತೊಡುಪು ಕೊಟ್ಟಿಲ್ಲ. ಎಂಎಲ್ಎ, ಎಂಪಿ, ಎಸಿ, ಡಿಸಿಯಾಗಿ ಮಾನ ಮರ್ಯಾದೆಯಿಂದ ಜೀವಿಸುವುದಕ್ಕೆ ಹಕ್ಕು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್” ಎಂದು ಹೇಳಿದರು.
“ದೀನ ದಲಿತರು, ಮಹಿಳೆಯರು, ಶೋಷಿತ ವರ್ಗಗಳು ಹಾಗೂ ಹಿಂದುಳಿದ ವರ್ಗದವರಿಗೆ ದಾರಿದೀಪವಾಗಿರುವುದೇ ಅವರ ಹೆಸರು. ಅವರು ನಮಗೆ ಸ್ಪೂರ್ತಿ. ನಮ್ಮೆಲ್ಲರಿಗೆ ಅವರೇ ದೇವರು, ನಿತ್ಯ ಅವರ ಸ್ಮರಣೆ ಮಾಡುತ್ತೇವೆ. ಅಂಬೇಡ್ಕರ್ ಅವರ ಅವಹೇಳನ ದೇಶದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗಬಹುದು. ಕೂಡಲೇ ಅಮಿತ್ ಶಾ ಅವರನ್ನು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಮನವಿ
ಪ್ರತಿಭಟನೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಾದ ರವೀಂದ್ರ ನಾಥ ಪಟ್ಟಿ, ಹೇಮರಾಜ ಅಸ್ಕಿಹಾಳ, ಎಂ ಈರಣ್ಣ, ಆಂಜನೇಯ ಊಟ್ಕೂರು, ನರಸಿಂಹಲು ಮರ್ಚಟಾಳ, ಶ್ರೀನಿವಾಸ ಕಲವಲದೊಡ್ಡಿ, ವಿಜಯರಾಣಿ, ಖಾಜಾ ಅಸ್ಲಂಪಾಷಾ, ಕುಮಾರ ಸಮತಳ, ಮಾರೆಪ್ಪ ಹರವಿ, ಆಂಜನೇಯ ಕುರುಬ ದೊಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
