ರಾಯಚೂರು ನಗರದ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ಸದಸ್ಯರು ಗಿಡ ನೆಟ್ಟು ನಗರಸಭೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದ ಬಸ್ ನಿಲ್ದಾಣ ಹೋಗುವ ರಸ್ತೆ ಗುಂಡಿಯಲ್ಲಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಘಾತಗಳಾಗುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯ ಮುಂಚೆ ನೀತಿ ಸಂಹಿತೆಯ ಜಾರಿಯಾಗುವ ಮುಂಚೆ ನಿರ್ಮಿಸಿದ ರಸ್ತೆಗಳು ಎರಡು ವರ್ಷಗಳ ಒಳಗೆ ಅಧೋಗತಿಗೆ ತಲುಪಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಇದಕ್ಕೆ ಶಾಸಕರೇ ನೇರ ಹೊಣೆ ಹೊರಬೇಕು. ರಾಜ್ಯಕ್ಕೆ ವಿದ್ಯುತ್, ಚಿನ್ನ ನೀಡುವ ರಾಯಚೂರಿನ ಜಿಲ್ಲಾ ಕೇಂದ್ರದಲ್ಲಿಯೇ ಈ ಸ್ಥಿತಿಯಿದ್ದು ಅಭಿವೃದ್ಧಿಗೆ ಕೊಡಲಿ ಪೆಟ್ಟಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಕನಿಷ್ಠ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗದೇ ಸಾರ್ವಜನಿಕರ ತಾಳ್ಮೆ ಪರೀಕ್ಷಿಸುವಂತಿದೆ. ಜಿಲ್ಲೆಯಿಂದ ಇಬ್ಬರು ಮಂತ್ರಿ, ಇಬ್ಬರು ಎಂಎಲ್ಸಿ, ಶಾಸಕರಿದ್ದರು ಜಿಲ್ಲಾ ಕೇಂದ್ರದಲ್ಲಿ ಉತ್ತಮವಾದ ರಸ್ತೆಯಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವುದರೊಂದಿಗೆ ರಸ್ತೆಗಳ ಗುಣಮಟ್ಟ ಹಾಳಾಗದಿರುವ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಹಣಕಾಸು ಕಂಪನಿಗಳಿಂದ ವಂಚನೆ: ನ್ಯಾಯಕ್ಕೆ ಆಗ್ರಹಿಸಿ ಸಂತ್ರಸ್ತರಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಅಖಿಲ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ(RYFI) ಜಿಲ್ಲಾ ಮುಖಂಡ ಅಜೀಜ್ ಜಾಗೀರ್ದಾರ್, ನಿರಂಜನ್ ಕುಮಾರ್, ಮಾರೆಪ್ಪ ಅರವಿ, ರವಿಚಂದ್ರನ್, ನರಸಪ್ಪ, ಆಂಜನೇಯ, ಎಲ್ಲಪ್ಪ, ಹನೀಫ್ ಅಬಕಾರಿ ಇದ್ದರು.
