ರಾಯಚೂರು ತಾಲೂಕಿನ ಮಮದಾಪುರ ಗ್ರಾಮದಲ್ಲಿ ಸುಟ್ಟುಹೋಗಿರುವ ವಿದ್ಯುತ್ ಪರಿವರ್ತಕ(ಟಿ.ಸಿ)ವನ್ನು ಬದಲಿಸಿ ಕೂಡಲೇ ಹೊಸ ಪರಿವರ್ತಕವನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ (ಎಐಡಿವೈಒ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಎಐಡಿವೈಒ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಮದಾಪುರ ಗ್ರಾಮದಲ್ಲಿ ಸುಟ್ಟು ಹೋಗಿರುವ ವಿದ್ಯುತ್ ಪರಿವರ್ತಕವನ್ನು ಬದಲಿಸಿ ಕೂಡಲೇ 100 ಕೆ.ವಿ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ಮಾರ್ಚ್ನಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಇರುವ ವಿದ್ಯುತ್ ಪರಿವರ್ತಕ ಸಾಮರ್ಥ್ಯ ಊರಿನ ವಿದ್ಯುತ್ ಬಳಕೆ ಅವಶ್ಯಕತೆಗೆ ಸಾಕಾಗುತ್ತಿಲ್ಲ. ಗ್ರಾಮದಲ್ಲಿ ಬಲ್ಬ್ಗಳು ಉರಿಯುತ್ತಿಲ್ಲ. ಸರಿಯಾಗಿ ವೋಲ್ಟೇಜ್ ಇರದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದು, ವಿದ್ಯುತ್ ವೈರುಗಳು ಜೋತು ಬಿದ್ದಿವೆ. ಇದರಿಂದ ವಿದ್ಯುತ್ ಅವಘಡ ಸಂಭವಿಸುವ ಅಪಾಯವಿದೆ ಎಂದು ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ವಿದ್ಯುತ್ ಅವಘಡ ಸಂಭವಿಸಿ ಒಂದು ಜಾನುವಾರು ಸತ್ತು ಹೋಗಿವೆ. ಈ ನಡುವೆ ವಿದ್ಯುತ್ ಪರಿವರ್ತಕವೇ ಸುಟ್ಟು ಹೋಗಿ ನಾಲ್ಕೈದು ದಿನಗಳು ಕಳೆದು ಊರು ಕತ್ತಲಲ್ಲಿ ಮುಳುಗಿದೆ ಎಂದು ಆರೋಪಿಸಿದ ಅವರು, ಕೂಡಲೇ ತುರ್ತಾಗಿ ಹೆಚ್ಚು ಸಾಮರ್ಥ್ಯವಿರುವ ಅಂದರೆ 100ಕೆ.ವಿ.ಎ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮುಧೋಳ | ಪ್ರವಾದಿ ಮುಹಮ್ಮದರ ಬಗ್ಗೆ ರಾಮಗಿರಿ ಮಹಾರಾಜರಿಂದ ಅವಹೇಳನಕಾರಿ ಹೇಳಿಕೆ: ಆಕ್ರೋಶ
ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಡಿ ಶಫಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಿರಿಯ ಎಂಜಿನಿಯರ್ ಪ್ರಕಾಶ ಅವರು ಇದ್ದರು. 24 ಗಂಟೆಯೊಳಗೆ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸುಗ್ರೀವ, ಮಾರೆಪ್ಪ, ಯಂಕೋಬ, ನಾಗಪ್ಪ, ಗುರುಮಾರಾಜ, ರಾಮು, ಮುನಿಸ್ವಾಮಿ, ಲಕ್ಷ್ಮಣ್ಣ, ಶುಭಕುಮಾರ್, ವೀರೇಶ್, ಜಮಲಮ್ಮ, ಶಾರದಮ್ಮ,ರೋಜಮ್ಮ,ವಿಮಲಮ್ಮ, ಯಮುನಪ್ಪ, ಆಂಜನೇಯ, ವಿನೋದ ಕುಮಾರ ಗ್ರಾಮಸ್ಥರು ಪಾಲ್ಗೊಂಡಿದ್ದರು.
