ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದು, ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಮುಖಂಡರು ರಾಯಚೂರು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ದೇಶದ್ಯಾಂತ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕೃಷಿ ಪರಿಕರಗಳು, ಬೀಜ, ರಸಗೊಬ್ಬರ ದುಬಾರಿಯಾಗಿದ್ದು, ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು. ಕೃಷಿ ಚಟುವಟಿಕೆ ನಡೆಸಲು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಅನೇಕ ರೈತರು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಕಾರ್ಪೋರೇಟ್ ಕಂಪನಿಗಳ 15 ಲಕ್ಷ ಕೋಟಿ ಕೇಂದ್ರ ಸರ್ಕಾರ ವ್ಯಯಿಸಿದೆ. ಆದರೆ, 23 ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲು 2 ಲಕ್ಷ ಕೋಟಿ ಖರ್ಚು ಮಾಡಲು ತಯಾರಿಲ್ಲ. ಕನಿಷ್ಠ ಬೆಂಬಲ ಬೆಲೆಗೆ ರೈತರಿಂದ ಖರೀದಿಸಿದ ಬೆಲೆ ಮರು ಮಾರಾಟ ಮಾಡಿದಾಗ ವಾಪಸ್ ಬರುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಒಪ್ಪಲು ತಯಾರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ನೀಡಬೇಕು ಹಾಗೂ ಸಮರ್ಪಕವಾಗಿ ವೇತನ ಪಾವತಿಸಬೇಕು. ವಿದ್ಯುತ್ ಕಾಯ್ದೆ 2023 ಕೂಡಲೇ ಹಿಂಪಡೆಯಬೇಕು. ರೈತರ ಪಂಪ್ಸೆಟ್ ಗಳಿಗೆ ಸ್ಮಾಟ್ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. 60 ವರ್ಷ ದಾಟಿದ ರೈತರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ಬಳಿಕ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಕುಂದಾಪುರ | ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ಮೀನಿನ ಲಾರಿ ಡಿಕ್ಕಿ: ಚಾಲಕನ ಸಹಿತ 8 ಮಂದಿ ಗಂಭೀರ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ದುರ್ಗಣ್ಣ ಅಡಕಲಗುಡ್ಡ, ಕಾರ್ಯದರ್ಶಿ ಮಲ್ಲನಗೌಡ ಅಂಚೆಸೂಗೂರು, ರಿಯಾನುದ್ದೀನ್, ಕೆ.ಪಾಂಡುರಂಗ, ಈರೇಶ ಜಕ್ಕಲದಿನ್ನಿ ಪಾಲ್ಗೊಂಡಿದ್ದರು.
