ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ತುರ್ವಿಹಾಳ ಪಟ್ಟಣದಲ್ಲಿ ನಡೆದ ಮೊಲದ ಬೇಟೆ ಪ್ರಕರಣ ಸಂಬಂಧ ಮಸ್ಕಿ ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರ ಸಹೋದರ ಹಾಗೂ ಪುತ್ರನ ವಿರುದ್ಧ ದೂರು ದಾಖಲಾಗಿದೆ.
ಶಾಸಕರ ಪುತ್ರ ಸತೀಶಗೌಡ ತುರ್ವಿಹಾಳ ಹಾಗೂ ಸಹೋದರ ಸಿದ್ದನಗೌಡ ತುರ್ವಿಹಾಳ ಸೇರಿದಂತೆ ಘಟನೆಯಲ್ಲಿ ಪಾಲ್ಗೊಂಡಿದ್ದ ಇತರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ರಾಯಚೂರು ಡಿಸಿಎಫ್ ಪ್ರವೀಣ್ ತಿಳಿಸಿದ್ದಾರೆ.
ಶಾಸಕರ ಪುತ್ರ ಹಾಗೂ ಸಹೋದರ ಸೇರಿ ಯುಗಾದಿ ಹಬ್ಬದ ದಿನ ಬೇಟೆಯಾಡಿದ್ದ ಮೊಲಗಳನ್ನು ಕೆಲವರು ಕೊಡಲಿ ಹಾಗೂ ಭರ್ಜಿಗೆ ಸಿಕ್ಕಿಸಿಕೊಂಡು ಸಾವಿರಾರು ಜನರ ಎದುರು ಮೆರವಣಿಗೆ ಮಾಡಿ ವಿಜೃಂಭಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಘಟನೆ ಕುರಿತು “ಯುಗಾದಿ ಹಬ್ಬದಂದು ಕೆಲ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ನಮ್ಮ ಕುಟುಂಬದ ಸದಸ್ಯರು ಮೊಲಗಳನ್ನು ಬೇಟೆಯಾಡಿಲ್ಲ. ಆದರೆ, ಮೆರವಣಿಗೆಯಲ್ಲಿ ಬಂದ ಕೆಲವರು ನಮ್ಮವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರಷ್ಟೇ. ಇನ್ನು ಮುಂದೆ ಸಾರ್ವಜನಿಕರಿಗೆ ಮೊಲಗಳನ್ನು ಬೇಟೆಯಾಡುವುದು ತಪ್ಪು, ಇಂಥ ಕೃತ್ಯಗಳನ್ನು ಮರುಕಳಿಸದಂತೆ ತಿಳಿಸಲಾಗುವುದು” ಎಂದು ಶಾಸಕ ಬಸನಗೌಡ ತುರ್ವಿಹಾಳ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಮೊಲಗಳ ಬೇಟೆಯಾಡಿ, ಬೀದಿಯಲ್ಲಿ ಮಾರಕಾಸ್ತ್ರ ಹಿಡಿದು ಕ್ರೌರ್ಯ
ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುವವರು ಯಾರೇ ಆಗಿದ್ದರೂ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.