ಆಟೋ ನಿಲ್ದಾಣ ನಿರ್ಮಿಸಿ, ಅನಗತ್ಯವಾಗಿ ಪೊಲೀಸರು ನೀಡುತ್ತಿರುವ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರಿನ ಸಿಂಧನೂರು ತಾಲೂಕು ಶಂಕರನಾಗ್ ನಗರ ಮತ್ತು ಗ್ರಾಮೀಣ ಆಟೋ ಚಾಲಕರ ಸಂಘ-ಟಿಯುಸಿಐ ಸಂಯೋಜಿತ ಸಂಘಟನೆಯಿಂದ ಸಿಂಧನೂರು ತಹಶೀಲ್ದಾರರ ಕಚೇರಿಯಿಂದ ನಗರಸಭೆ ಕಚೇರಿಯ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿತು.
“ಸಿಂಧನೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಲ-ಸೋಲ ಮಾಡಿ ಪ್ಯಾಸೆಂಜೆರ್ ಆಟೋ ತಂದು ದಿನಕ್ಕೆ ನಾವು 200-300 ಹಣ ಸಂಪಾದನೆ ಮಾಡಿ ಉಳಿಸಿ ನಮ್ಮ ಕುಟುಂಬವನ್ನು ನಿರ್ವಹಿಸಲು ಸಾಕಾಗಿ ಹೋಗಿದೆ. ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ನಮ್ಮ ಸಣ್ಣ ಕುಟುಂಬಗಳ ಜೀವ ಹಿಂಡುತ್ತಿವೆ. ಪೈನಾನ್ಸ್ನವರ ಕಾಟ, ಖಾಸಗಿ ಸಾಲಗಾರರ ಕಿರುಕುಳ, ಪೊಲೀಸ್ ದೌರ್ಜನ್ಯ ಹಾಗೂ ಕಿರುಕುಳದಿಂದ ಕರುಳಬಳ್ಳಿಗಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಕನಸುಗಳು, ಆಹಾರ, ಆರೋಗ್ಯದಂತಹ ತಾಪತ್ರಯಗಳಿಂದ ಕನಿಷ್ಠ ಜೀವನ ನಡೆಸುವುದೂ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಸುಖಾ ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ನಮ್ಮಂಥ ಬಡಪಾಯಿಗಳನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದರು.
“ಗಂಗಾವತಿ ಸೇರಿದಂತೆ ಇತರೆ ಪಟ್ಟಣ, ನಗರಗಳಲ್ಲಿ ಆಟೋ ನಿಲ್ದಾಣಗಳನ್ನು ಪುರಸಭೆ, ನಗರಸಭೆಯವರು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಸಿಂಧನೂರ ನಗರದಲ್ಲಿ ನಮಗೊಂದು ಆಟೋ ನಿಲ್ದಾಣವಿಲ್ಲ. ಪೊಲೀಸ್ ನವರು ನಮ್ಮ ಕಷ್ಟ ಕೇಳೋದಿಲ್ಲ. ನಿಲ್ದಾಣ ಹಾಗೂ ರಸ್ತೆ ಪಕ್ಕದಲ್ಲಿ ಆಟೋ ನಿಲ್ಲಿಸಿದ್ದರು ಕೂಡಾ ಕೇಳದೆಯೇ ಸಾಹುಕಾರರ ಕಾರ್ ಬಿಟ್ಟು ಬಡವರ ಆಟೋ ಮೇಲೆಯೇ ಪೊಲೀಸ್ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಅಶೋಕ ಭವನ(ಚೆನ್ನಮ್ಮ ಸರ್ಕಲ್)ಹಳೇ ಬಸ್ ನಿಲ್ದಾಣ ಒಳಗಡೆ ಆಟೋ ನಿಲ್ದಾಣವನ್ನು ಮಾಡಬೇಕು. ಈ ವಿಷಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕು. ಅಶೋಕ ಭವನದ ಒಳಗೆ ಬಾರ್ ಶಾಪ್ ಮುಂದೆ ಖಾಸಗಿ ಕಾರ್ ಇತರೆ ವಾಹನಗಳು ಅನಾವಶ್ಯಕ ಪಾರ್ಕಿಂಗ್ ಮಾಡುವುದರಿಂದ ನಮಗೆ ತೊಂದರೆಯಾಗುತ್ತಿದೆ. ಆಟೋ ಹೊರತುಪಡಿಸಿ ಇತರೆ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಯಚೂರು | ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರಕ್ಕೆ ಚಾಲನೆ
ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ, ಆರ್ಸಿಎಫ್ ನ ಆದೇಶ ನಗನೂರ, ಹೆಚ್. ಆರ್. ಹೊಸಮನಿ, ಹುಲುಗಪ್ಪ ಬಳ್ಳಾರಿ, ಹನುಮಂತ ಪಗಡದಿನ್ನಿ ಕ್ಯಾಂಪ್, ಶಂಕರಪ್ಪ ಎಲೆ ಕೂಡ್ಲಿಗಿ ಕ್ಯಾಂಪ್, ಸಿದ್ದು ಮಲ್ಲಯ್ಯ ಕ್ಯಾಂಪ್, ವೆಂಕಟೇಶರೆಡ್ಡಿ ಮುಳ್ಳೂರು, ನಾಗರಾಜ ಮುಳ್ಳೂರು ಇತರರು ಇದ್ದರು.
