ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆನೀರಿನಿಂದ ತುಂಬಿದ್ದು, ಸಂಪೂರ್ಣ ಕೆರೆಯಂತಾಗಿರುವ ದುಃಸ್ಥಿತಿ ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ ಕಂಡುಬಂದಿದೆ.
ಲಿಂಗಸೂಗೂರು ತಾಲೂಕಿನ ಶಾಸಕರ ಮನೆ ಮತ್ತು ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆರಣದಲ್ಲೆಲ್ಲಾ ಮಳೆ ನೀರು ತುಂಬಿದ್ದು, ಕೆರೆಯಂತೆ ಮಾರ್ಪಟ್ಟಿದೆ. ಆದರೂ ಶಾಸಕ ಮಾನಪ್ಪ ಡಿ ವಜ್ಜಲ್ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯ ಸಂಘಟನಾ ಕಾರ್ಯಕರ್ತರು ಆರೋಪಿಸಿದ್ದರೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹಲವು ಶಾಲೆಗಳ ಪೈಕಿ 1,037 ಕೊಠಡಿಗಳು ಶಿಥಿಲಾಸ್ಥೆಯಲ್ಲಿವೆ. ಮಳೆ ಬಂದ ಹಿನ್ನೆಲೆಯಲ್ಲಿ ಇದೀಗ ಲಿಂಗಸೂಗೂರು ಶಾಸಕರ ಮನೆ ಮತ್ತು ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆರಣದಲ್ಲಿ ನೀರು ತುಂಬಿದ್ದು, ಕೆರೆಯಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಐದನಾಳ ಸರ್ಕಾರಿ ಶಾಲೆಯೂ ಕೂಡ ಇದೇ ರೀತಿ ಇದೆ. ಆದರೆ ಶಾಸಕ ಮಾನಪ್ಪ ವಜ್ಜಲ್ ಅವರು ಸರ್ಕಾರಿ ಶಾಲೆ-ಕಾಲೇಜುಗಳ ಕಟ್ಟಡ ಮತ್ತು ಅವುಗಳ ಮೂಲ ಸೌಕರ್ಯಗಳ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ. ಇದನ್ನು ಎಸ್ಎಫ್ಐ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ” ಎಂದರು.
“ಕೇವಲ ಶಾಲೆಯ ಆವರಣದಲ್ಲಿ ನೀರು ತುಂಬುವುದಲ್ಲದೆ, ಕೊಠಡಿ ಒಳಗಿನ ಮೇಲ್ಛಾವಣಿಗಳೂ ಹಾನಿಯಾಗಿವೆ. ಅಂತಹ ದುಃಸ್ಥಿತಿಯಲ್ಲಿರುವ ಕೊಠಡಿಗಳಲ್ಲಿಯೇ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿವೆ” ಎಂದು ಆರೋಪಿಸಿದರು.

ಎಸ್ಎಫ್ಐ ತಾಲೂಕು ಮುಖಂಡ ವಿಶ್ವ ಅಂಗಡಿ ಮಾತನಾಡಿ, “ಶಾಸಕರ ಮನೆಯ ಪಕ್ಕದಲ್ಲಿಯೇ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಸ್ವಿಮ್ಮಿಂಗ್ ಪೂಲ್ನಂತಾಗಿದೆ. ಪರಿಣಾಮ ಶಾಲೆಯ ಮಕ್ಕಳು ಇದರಲ್ಲಿ ಈಜಿಕೊಂಡು ತರಗತಿಗಳಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ” ಎಂದು ಈ ದಿನ.ಕಾಮ್ಗೆ ತಿಳಿಸಿದರು.
“ಶಾಸಕರು ಮತ್ತು ಜಿಲ್ಲಾಡಳಿತ ಕೂಡಲೇ ಸರ್ಕಾರಿ ಶಾಲೆಗಳತ್ತ ಗಮನ ಹರಿಸಿ ಅವುಗಳ ಅಭಿವೃದ್ಧಿಗೆ ಮುಂದಾಗಬೇಕು. ಹೀಗೆಯೇ ಅಸಡ್ಡೆ ತೋರಿದರೆ ಸದ್ಯದಲ್ಲಿಯೇ ಶಾಸಕರ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಶಾಸಕರ ಶಾಲೆಯ(ಕನ್ನಡ ಮಾಧ್ಯಮ) ಇನ್ಚಾರ್ಜ್ ಮುಖ್ಯ ಶಿಕ್ಷಕಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಶಾಲೆಯ ಆವರಣ ಸಂಪೂರ್ಣ ಜಲಾವೃತವಾಗಿದೆ. ನಮ್ಮ ಶಾಲೆಯ ಕಟ್ಟಡದ ಬಳಿ ಸರ್ಕಾರಿ ಉರ್ದು ಶಾಲೆಯ ಹೊಸ ಕಟ್ಟಡ ನಿರ್ಮಾಣವಾಗಿದೆ. ಸುತ್ತಲೂ ಕಟ್ಟಡಗಳಿರುವುದರಿಂದ ನೀರು ಹರಿಯಲು ಸ್ಥಳವಿಲ್ಲದಂತಾಗಿದೆ” ಎಂದರು.
ಶಾಲೆಯ ಆವರಣ ತಗ್ಗಾಗಿರುವ ಕಾರಣ ಬಂದ ನೀರೆಲ್ಲ ಅಲ್ಲಿಯೇ ಸಂಗ್ರಹವಾಗುತ್ತದೆ. ಪರಿಣಾಮ ತರಗತಿ ಒಳಗೆಲ್ಲ ನೀರು ನುಗ್ಗಿತ್ತು. ಒಂದು ವಾರದಿಂದ ಮಳೆ ಸುರಿಯುತ್ತಿರುವ ಕಾರಣ ಆವರಣ ಕೆರೆಯಂತಾಗಿದೆ. ಇದನ್ನು ಸರಿಪಡಿಸುವಂತೆ ಲಿಂಗಸೂಗೂರು ಪುರಸಭೆಗೆ ಮನವಿ ನೀಡಿದ್ದೇವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

“ಕೆಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಶೌಚಾಲಯಗಳಿಲ್ಲ. ಶಾಲೆಯಲ್ಲಿ ಉತ್ತಮ ಸಂಖ್ಯೆಯ ದಾಖಲಾತಿ ಆಗಿರುವುದರಿಂದ ಹೆಚ್ಚಿನ ಮಕ್ಕಳಿದ್ದಾರೆ. ಕೇವಲ ನಾಲ್ಕು ಶೌಚಾಲಯಗಳಿವೆ. ಊಟಕ್ಕೆ ಕೂರಲು ಸಮರ್ಪಕ ಸ್ಥಳವಿಲ್ಲ. ಹಾಗಾಗಿ ಹಳೆಯ ಕೊಠಡಿಗಳನ್ನು ನೆಲಸಮ ಮಾಡಿ ಒಂದು ಊಟದ ಹಾಲ್ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಈವರೆಗೂ ಯಾವುದೇ ಕ್ರಮವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ದಕ್ಷಿಣ ಕನ್ನಡ | ಶಿಳ್ಳೇಕ್ಯಾತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ; ಸಂತ್ರಸ್ತರ ಭೀತಿ
“ಶಾಲೆಯಲ್ಲಿ ಒಟ್ಟಾರೆಯಾಗಿ 800 ಮಂದಿ ಮಕ್ಕಳಿದ್ದಾರೆ. ಆದರೆ ಕೇವಲ 23 ಮಂದಿ ಶಿಕ್ಷಕರಿದ್ದಾರೆ. ಈ ಪೈಕಿ 16 ಮಂದಿ ಖಾಯಂ ಶಿಕ್ಷಕರು, 7 ಮಂದಿ ಅತಿಥಿ ಶಿಕ್ಷಕರಿದ್ದಾರೆ. ಈ ಸಂಖ್ಯೆಯ ಶಿಕ್ಷಕರು ಸಾಕಾಗುವುದಿಲ್ಲ. ಕನಿಷ್ಟ 45ರಿಂದ 48 ಮಂದಿ ಶಿಕ್ಷಕರಾದರೂ ಇರಬೇಕು. ತರಗತಿಗಳಲ್ಲದೆ ಸೆಕ್ಷನ್ಗಳೂ ಇವೆ. ಹಾಗಾಗಿ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ಈ ಕುರಿತು ಈ ದಿನ.ಕಾಮ್ ಬಿಇಒ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ.