ರಾಯಚೂರು ನಗರದ ಮಾವಿನಕೆರೆಯಲ್ಲಿ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸವನ್ನು ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಬಗಾಡೆ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಮಾವಿನಕೆರೆಯ ಹತ್ತಿರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ, ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಮಾವಿನ ಕೆರೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ, ಸುಂದರವಾದ ಮಾನವಿಕೆರೆ ನೋಡಿ ಸಂತೋಷವಾಗಿತ್ತು. ಆದರೆ, ಮಾನವಿಕೆರೆಯ ಸುತ್ತಲೂ ನಗರಸಭೆ ಮತ್ತು ಸಾರ್ವಜನಿಕರು ಕಸ ಸೇರಿದಂತೆ ಇತರೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಇವರೆಲ್ಲ ಉದ್ದೇಶಪೂರ್ವಕವಾಗಿ ತ್ಯಾಜ್ಯ ತಂದು ಇಲ್ಲಿ ಸುರಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮಾವಿನಕೆರೆ ಅತ್ಯಂತ ಸುಂದರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬೇಕಿದೆ. ಇದಕ್ಕಾಗಿ ಶಾಸಕರು, ಸಚಿವರು ಮುತುವರ್ಜಿ ವಹಿಸಬೇಕು. ಕೆರೆಯ ಒಂದು ಭಾಗ ಒತ್ತುವರಿಯಾಗಿದೆ. ಕಳೆದ ಐದು ವರ್ಷಗಳಿಂದ ಪ್ರಕರಣ ಮೂಲೆ ಸೇರಿದೆ. ಈ ಬಗ್ಗೆ ಯಾರು ಚಕಾರವೆತ್ತಿಲ್ಲ. ಈ ಕೂಡಲೇ ಜಿಲ್ಲಾಡಳಿತ, ನಗರಸಭೆ ಎಚ್ಚೆತ್ತುಕೊಂಡು 15 ದಿನಗಳ ಒಳಗಾಗಿ, ಕೆರೆಯ ಸುತ್ತಲೂ ಇರುವ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ತಡೆ ಬೇಲಿ ಹಾಕಬೇಕು, ವರದಿ ಸಲ್ಲಿಸಬೇಕು ಎಂದರು.
ಕೆರೆಗೆ ಚರಂಡಿ ನೀರು ಸೇರುತ್ತಿದೆ ಹಾಗೂ ಕಸಾಯಿ ಖಾನೆಯ ತ್ಯಾಜ್ಯ ತಂದು ಹಾಕುತಿದ್ದಾರೆ, ಊಟದ ಪ್ಲಾಸ್ಟಿಕ್ ತಟ್ಟೆಗಳು ಎಸೆಯುತ್ತಿದ್ದಾರೆ. ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ, ಕೆರೆಯನ್ನು ಸ್ವಚ್ಛ ಮಾಡಿ, ಕೆರೆಯ ಅಭಿವೃದ್ಧಿಯಾಗುತ್ತದೆ ಎಂದರು.
ಸಚಿವ ಎನ್.ಎಸ್ ಬೋಸರಾಜು ಮಾತನಾಡಿ, ಮಹಾತ್ಮ ಗಾಂಧಿ ಅವರ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಜನರು ಸಹ ಸಹಕಾರ ನೀಡಿದಾಗ ಮಾತ್ರ, ಅವರ ಆಶಯ ಈಡೇರಲು ಸಾಧ್ಯ. ಮದ್ಯಪಾನ ನಿಷೇಧ ಮಾಡುವುದು ಗಾಂಧೀಜಿಯವರ ಆಶಯ. ಮದ್ಯ ನಿಷೇಧಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಜನರ ಸಹಕಾರವಿಲ್ಲದೆ ಅದು ಈಡೇರಲು ಸಾಧ್ಯವಿಲ್ಲ.
ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಕಡೆ ಸ್ವಚ್ಛತೆ ಮಾಡಲಾಗಿದೆ. ಮಾವಿನಕೆರೆ ಸ್ವಚ್ಛತೆ ಮಾಡಲು ಸ್ಥಳೀಯರು ಕೇಳಿದ್ದು, ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ರಾಜ್ಯದ ಬಹುತೇಕ ಕಡೆ ನಗರಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ನಗರದಲ್ಲೇ ಇದ್ದು, ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಸೇರಿ 4 ಅಂಗಗಳು ಒಂದೇ ವೇದಿಕೆಯಲ್ಲಿ ಇಂದು ಸೇರಿವೆ, ಮಾವಿನಕೆರೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಮುತುವರ್ಜಿಯಿಂದ ಅಧಿಕಾರಿಗಳು, ಸಾರ್ವಜನಿಕರು ಸಹಕಾರ ಮಾಡಿ ಸ್ವಚ್ಛತಾ ಕಾರ್ಯ ನಡೆಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಈ ವೇಳೆ ನ್ಯಾಯಾಧೀಶ ಜಗದೀಶ್ವರ, ಅಪರ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.