ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಣ್ಣ ನೀರಾವರಿ ಸಚಿವ ಎನ್ ಎಸ್ ಭೋಸರಾಜು ಅವರ ಹುಟ್ಟುಹಬ್ಬದ ಅಂಗವಾಗಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕರೊಬ್ಬರ ಹಣ ಕಳವು ಮಾಡಿದ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಆರೋಪಿ ಲಿಂಗಸುಗೂರು ಶಾಸಕ ಡಿ ಎಸ್ ಹುಲಗೇರಿ ಅವರ ಜೇಬಿಗೆ ಕೈ ಹಾಕಿ 70 ಸಾವಿರ ರೂ. ಹಣದ ಕಂತೆ ಹಾಗೂ ಶಾಸಕರ ಬೆಂಗಲಿಗರೊಬ್ಬರ ಬಂಗಾರದ ಚೈನ್ ಎಗರಿಸಲು ಹೋಗಿದ್ದ.
ಕಾರ್ಯಕ್ರಮ ಮುಗಿದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಶಾಸಕರು ಸೇರಿದಂತೆ ವಿಐಪಿಗಳಿಗೆ ಆಯೋಜಿಸಿದ್ದ ಊಟದ ವ್ಯವಸ್ಥೆ ಮಾಡಿದ ಸ್ಥಳಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಶಾಸಕರ ಜೇಬಿಗೆ ಕೈ ಹಾಕಿ ನೋಟಿನ ಕಂತೆ ಎಗರಿಸಿದ್ದಾನೆ. ತಕ್ಷಣ ಎಚ್ಚೆತ್ತ ಶಾಸಕ ಆತನ ಕೈ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲಿಯೇ ನಿಯೋಜನೆಗೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.