ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳಿಗೆ ಕೊಠಡಿ ನೀಡುವಂತೆ ಒತ್ತಾಯಿಸಿ ಹೋರಾಟಗಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
“ಇತ್ತೀಚೆಗಷ್ಟೇ ಕನಕಪುರ ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಕಚೇರಿಯನ್ನು ತೆರವುಗೊಳಿಸಿ, ಗ್ಯಾರಂಟಿ ಯೋಜನೆ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಿಗೆ ನೀಡಿದ್ದು, ಅದನ್ನು ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ನವೀಕರಿಸಿಕೊಟ್ಟಿದ್ದಾರೆ. ಇದೇ ಮಾನದಂಡಗಳ ಆಧಾರದಲ್ಲಿ ನಮಗೂ ತಾಲೂಕು ಆಡಳಿತ ಭವನದಲ್ಲಿ ಕಚೇರಿ ಕೊಡಿ” ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಸೋಮವಾರದಂದು ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಇತತರ ಸಂಘಟನೆಗಳು ತಮ್ಮ ಕಾರ್ಯಚಟುವಟಿಕೆಗಳಿಗಾಗಿ ತಲಾ ಒಂದೊಂದು ಕೊಠಡಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂಘಟನೆಗಳು ಪ್ರತಿದಿನ ನೂರಾರು ಸಾರ್ವಜನಿಕರಿಗೆ ಕಾನೂನಾತ್ಮಕ ಸಹಾಯ ಮಾಡುತ್ತಿವೆ. ನ್ಯಾಯ ನೀಡಲು ಶ್ರಮಿಸುತ್ತಿವೆ. ಈ ಮೂಲಕ ತಮ್ಮ ಸೇವೆಯನ್ನು ಮತ್ತಷ್ಟು ಬಲಪಡಿಸಲು ತಮಗೂ ಕೊಠಡಿ ನೀಡಬೇಕೆಂದು ವಿನಂತಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ವೇತನ ಪಾವತಿಸುವಂತೆ ಆಗ್ರಹ; ಟಾಸ್ಕ್ ವರ್ಕ್ ದಿನಗೂಲಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
“ಈ ಕೊಠಡಿಗಳನ್ನು ನವೀಕರಿಸಲು ಸರ್ಕಾರದ ಯಾವುದೇ ತೆರಿಗೆ ಹಣವನ್ನು ಬಳಸಬೇಡಿ, ಬದಲಿಗೆ ಸಂಘಟನೆಗಳು ತಮ್ಮ ಸ್ವಂತ ಖರ್ಚಿನಲ್ಲಿ ನವೀಕರಣ ಕಾರ್ಯವನ್ನು ಕೈಗೊಳ್ಳುತ್ತೇವೆ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ, ಕೆಆರ್ಎಸ್ ಪಾರ್ಟಿ ಪ್ರಶಾಂತ್ ಹೊಸದುರ್ಗ, ಸಂಚಾಲಕ ಮುನಿರಾಜು, ಕನ್ನಡ ಭಾಸ್ಕರ್, ರಮೇಶ್, ಗಿರೀಶ್, ಸುರೇಶ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಇದ್ದರು.