ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ ದೇವರಾಜ ಅರಸು. ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭೂ ಸುಧಾರಣೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ʼಉಳುವವನೇ ಭೂಮಿಯ ಒಡೆಯʼನೆಂದು ಪರಿವರ್ತಿಸಿದರು. ಭೂಮಿ ಇಲ್ಲದವರಿಗೆ ಉಳುಮೆಗಾಗಿ ಕೃಷಿಭೂಮಿ ದೊರೆಯಿತು. ಇದರಿಂದ ಭೂಮಿ ಇಲ್ಲದವರಿಗೆ, ಬಡವರಿಗೆ ನ್ಯಾಯ ದೊರಕಿತು. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾದವು ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಎ ಇಕ್ಬಾಲ್ ಹುಸೇನ್ ಸ್ಮರಿಸಿದರು.
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಿ ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
“ಈ ಹಿಂದೆ ಹಲವು ನಾಯಕರು ರಾಜ್ಯದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಡಿ ದೇವರಾಜ ಅರಸು ಅವರು 1969ರಿಂದ 1979ರವರೆಗೆ ನಡೆಸಿದ ಆಡಳಿತ ಅರಸು ಯುಗವಾಗಿತ್ತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯಗಳನ್ನು ಸ್ಥಾಪಿಸಿದರು. 1973 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು” ಎಂದು ಹೇಳಿದರು.
“ಜೀತಪದ್ದತಿಯನ್ನು ತೊಲಗಿಸಿ ಜೀತಮುಕ್ತಿ ಪದ್ದತಿಯನ್ನು ಜಾರಿಗೆ ತಂದು ಬಡವರ ಬಾಳಲ್ಲಿ ಬೆಳಕಾದರು. ಬಡವರು ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಟ್ಟರು. ಮಲ ಹೊರುವ ಪದ್ದತಿಯನ್ನು ರದ್ದು ಮಾಡಿದರು” ಎಂದು ತಿಳಿಸಿದರು.
ಹಿರಿಯ ಸಾಹಿತಿ, ಪತ್ರಕರ್ತ ಮಾರಣ್ಣ ಮಾತನಾಡಿ, “ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವಲ್ಲಿ ಡಿ ದೇವರಾಜ ಅರಸು ಅವರ ಪಾತ್ರ ಬಹು ದೊಡ್ಡದು. ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ಕಾಣಲು ಕಾರಣರಾದರು. ಮೀಸಲಾತಿ ವಿಸ್ತರಣೆ ತಂದರು, ಭೂಸುಧಾರಣೆ ಕಾಯ್ದೆ, ಜೀತಮುಕ್ತಿ ಪದ್ದತಿ, ಕೃಷಿ, ಹೈನುಗಾರಿಕೆ ಸೇರಿದಂತೆ ಅನೇಕ ಸುಧಾರಣೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದರು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ರಾಮನಗರ ಜಿಲ್ಲಾ ಕ್ರೀಡಾಂಗಣದಿಂದ ಡಾ. ಬಿ ಆರ್ ಅಂಬೇಡ್ಕರ್ ಭವನದವರೆಗೂ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅರಣ್ಯ ಭೂಮಿ ಅತಿಕ್ರಮಣ ಆರೋಪ; ವಿಷದ ಬಾಟಲಿ ಹಿಡಿದು ರೈತ ಮಹಿಳೆಯರ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಲಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮುಖಂಡರುಗಳಾದ ಜಿ ನಾಗರಾಜು (ರೈಡ್), ಉಮೇಶ್ ಚಾರ್, ಆರ್ ರಂಗಪ್ಪ, ಸೀತಾರಾಮ್ ಮಾಗಡಿ, ಬಿ ರಂಗಸ್ವಾಮಿ, ಚಂದ್ರ ಶೇಖರ್, ರಂಗನಾಥ, ಸಿದ್ದಪ್ಪಾಜಿ, ವೀರಭದ್ರಯ್ಯ, ಗಣೇಶ್, ಸಂದೀಪ್, ಮಣಿಕಂಠ, ಚಂದ್ರಶೇಖರ್, ಸತೀಶ್ ಸೇರಿದಂತೆ ಇತರೆ ಸಮುದಾಯದ ಮುಖಂಡರು ಇದ್ದರು.