ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರದಲ್ಲಿ ಅಪ್ರಾಪ್ತ ಬಾಲಕಿಯ ಕೊಲೆ ಮತ್ತು ಅತ್ಯಾಚಾರದ ಶಂಕೆಯ ಪ್ರಕರಣದ ಸಮಗ್ರ ಮತ್ತು ಸಮರ್ಪಕ ತನಿಖೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, CITU , ಕರ್ನಾಟಕ ಪ್ರಾಂತ ರೈತಸಂಘ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ಸದಸ್ಯರುಗಳನ್ನೊಳಗೊಂಡ ನಿಯೋಗ ಇಂದು ಭದ್ರಾಪುರಕ್ಕೆ ಭೇಟಿ ನೀಡಿತ್ತು. ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಸಮುದಾಯದ ಅಪ್ರಾಪ್ತ. ಮೂಗ- ಕಿವುಡ ಬಾಲಕಿಯ ಕೊಲೆ ಮತ್ತು ಅತ್ಯಾಚಾರದ ಶಂಕೆಯ ಘಟನೆ ಯ ಸ್ಥಳಕ್ಕೆ ನಿಯೋಗ ಭೇಟಿ ನೀಡಿದಾಗ ಅಲ್ಲಿನ ಪೋಲೀಸರು ನಡೆದುಕೊಂಡ ರೀತಿಯನ್ನು, ನಿಯೋಗದ ಸದಸ್ಯರ ಮೇಲೆ ಮಾಡಿದ ದೌರ್ಜನ್ಯವನ್ನು ನಿಯೋಗ ತೀವ್ರವಾಗಿ ಖಂಡಿಸಿದೆ.
ಬಾಲಕಿ ಕಾಣೆಯಾದ ದೂರು 11 ಮೇ 2025 ರಂದೇ ಪೋಷಕರು ನೀಡಿದಾಗ್ಯೂ ಗಮನ ಹರಿಸದ ಸ್ಥಳೀಯ ಪೋಲೀಸರು, ಮಾರನೇ ದಿನ ದೇಹದ ಮೇಲಿನ ಸಿಗರೇಟಿನಿಂದ ಸುಟ್ಟ ಗಾಯಗಳನ್ನು ಹೊಂದಿದ, ಕಾಲು, ಕತ್ತು ಮುರಿದ ಸ್ಥಿತಿಯಲ್ಲಿ ಸಿಕ್ಕ ಶವವನ್ನು ನೋಡಿದ ಮೇಲೂ ಪೋಷಕರಿಗೆ ಹೆದರಿಸಿ ಬೆದರಿಸಿ ಸತ್ಯವನ್ನು ಮರೆ ಮಾಚುವ ಕೆಲಸ ಮಾಡುತ್ತಿರುವುದು ಕಂಡು ಬಂದಿದ್ದನ್ನು ನಿಯೋಗ ಖಂಡಿಸಿದೆ.
ಸಾಲದೆಂಬಂತೆ ಸ್ಥಳಕ್ಕೆ ಬೇಟಿ ನೀಡಿದ ಕ್ಷೇತ್ರದ ಸಂಸದರಾದ ಡಾ. ಮಂಜುನಾಥ್ ರವರ ಜೊತೆ ಬಂದ ಕಾರ್ಯಕರ್ತರು ಅದನ್ನು ವಲಸಿಗ ಮುಸ್ಲಿಂ ಸಮುದಾಯದವರ ಕೃತ್ಯ ಎಂಬಂತೆ ಬಿಂಬಿಸಲು ಹೊರಟಾಗ ನಿಯೋಗದ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ಈವರೆಗೂ ಪೊಸ್ಟ್ ಮಾರ್ಟಂ ವರದಿಯ ಮಾಹಿತಿಯಾಗಲಿ, ತನಿಖೆ ನಡೆಯುತ್ತಿರುವ ಬಗ್ಗೆಯಾಗಲಿ ಸಾರ್ವಜನಿಕರಿಗೆ ಯಾವ ಮಾಹಿತಿಯನ್ನೂ ಕೊಡದಿರುವ ಪೋಲೀಸರ ವರ್ತನೆ ಸಂಶಯಾಸ್ಪದವಾಗಿದೆ ಎಂದು ನಿಯೋಗ ಅನುಮಾನ ವ್ಯಕ್ತಪಡಿಸಿದೆ.
ಮಹಿಳಾ ಸಂಘಟನೆ ಸ್ಥಳೀಯ ಆಡಳಿತ, ರಾಜ್ಯ ಸರಕಾರ ಮತ್ತು ಪೊಲೀಸರಿಂದ ಈ ಕೆಳಗಿನ ಸ್ಪಷ್ಟೀಕರಣಗಳನ್ನು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ರಾಜ್ಯದ ಕಾಂಗ್ರೆಸ್ ಸರಕಾರ ನೊಂದವರಿಗೆ ಕೊಡಮಾಡುವ ಪರಿಹಾರ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲು ಒತ್ತಾಯಿಸುತ್ತ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಹಾಗೂ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ನಿಯೋಗದವರ ಮೇಲೆ ದೌರ್ಜನ್ಯ ಮಾಡಿದ ಪೋಲಿಸರ ಮೇಲೆ ಕ್ರಮಕ್ಕೆ ಒತ್ತಾಯಿಸಿದೆ.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಸುಶೀಲಾ, ರಶ್ಮಿ, ಎಸ್ಎಫ್ಐ ಅರ್ಪಿತಾ, ಸಿಐಟಿಯು ರಾಘವೇಂದ್ರ ಚಂದ್ರು, ಕೆ ಪಿ ಆರ್ ಎಸ್ ವೆಂಕಟಚಲಯ್ಯ, ಗಾಯತ್ರಿ ಹಾಜರಿದ್ದರು.