ಎಲ್ಲರನ್ನೊಳಗೊಂಡ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಜಾತಿ, ಧರ್ಮ, ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುತ್ತೇವೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಹಲವು ಭಾಗಗಳಲ್ಲಿ ಪ್ರೀತಿ, ಶಾಂತಿ, ಸೌಹಾರ್ದತೆಯ ಸಂಕೇತವಾದ ಈದ್ ಉಲ್ ಫಿತರ್ನಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
“ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಅಭಿವೃದ್ಧಿ ಯಾನದಲ್ಲಿ ಪ್ರತಿಯೊಬ್ಬರೂ ಒಳಗೊಳ್ಳಬೇಕು ಎಂಬುದೇ ನಮ್ಮ ಗುರಿಯಾಗಿದೆ. ಯುಗಾದಿ ನಂತರ ರಂಜಾನ್ ಸಂಭ್ರಮ ಎಲ್ಲೆಡೆ ಕಂಡುಬಂದಿದ್ದು, ಹಬ್ಬಗಳು ಕೋಮು ಸಾಮರಸ್ಯಕ್ಕೆ ಪೂರಕವಾಗಿವೆ. ಯಾವುದೇ ಧರ್ಮದ ನಡುವೆ ತಾರತಮ್ಯವಿಲ್ಲ” ಎಂದರು.
ಬಿಜೆಪಿಯಿಂದ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಪ್ರಚಾರಕ್ಕೆ ಆಗಮಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ, “ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಶಾಸಕರು, ಮುಖಂಡರು ನಮಗೆ ತಾರಾ ಪ್ರಚಾರಕರಾಗಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಯಾವುದೇ ವಿಷಯಗಳಿಲ್ಲ. ಹೀಗಾಗಿ ನಟ–ನಟಿಯರನ್ನು ಕರೆತರುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ನೀಡಿರುವ ಕಾರ್ಯಕ್ರಮಗಳೇ ನಮಗೆ ಶ್ರೀರಕ್ಷೆಯಾಗಿದೆ” ಎಂದರು.
“ನಮ್ಮ ಪಕ್ಷದ ಶಾಸಕರು, ಮುಖಂಡರು ಪಕ್ಷದ ಪರವಾಗಿ ಅವಿತರವಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಚಿವ ಕೆ ಎಚ್ ಮುನಿಯಪ್ಪ ಅವರು ಪಕ್ಷದ ಗೆಲುವಿಗಾಗಿ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಗೌರಿಬಿದನೂರಿನಲ್ಲಿ ಮಾಜಿ ಸಚಿವ ಎಚ್ ಎನ್ ಶಿವಶಂಕರ ರೆಡ್ಡಿ ಮತ್ತು ಹಾಲಿ ಶಾಸಕ ಎಚ್ ಕೆ ಪುಟ್ಟಸ್ವಾಮಿ ಗೌಡ ಅವರೂ ಕೂಡಾ ಪ್ರಚಾರದಲ್ಲಿ ನಿರತರಾಗಿದ್ದು, ನಾವು ನೂರಕ್ಕೆ ನೂರರಷ್ಟು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ” ಎಂದು ರಕ್ಷಾ ರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ರಕ್ಷಾ ರಾಮಯ್ಯ ಅವರು ಚಿಕ್ಕಬಳ್ಳಾಪುರದ ಹಾರೋಬಂಡೆಯಲ್ಲಿರುವ ಶ್ರೀ ಶಿರಡಿ ಸಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೊರವಿ ಭಾಗಕ್ಕೂ ಶೀಘ್ರದಲೇ ನೀರಾವರಿ ಕಲ್ಪಿಸಲಾಗುವುದು: ಎಂ ಬಿ ಪಾಟೀಲ್
ಮುಸ್ಲಿಂ ಬಾಂಧವರ ಜತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ವಿನಿಯಮ ಮಾಡಿಕೊಂಡರು. ಸಣ್ಣ ಮಕ್ಕಳು, ಹಿರಿಯ ನಾಗರಿಕರು ಒಳಗೊಂಡಂತೆ ಎಲ್ಲ ವಯೋಮಾನದವರ ಜತೆಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ತಮ್ಮ ಭಾಗದ ಸಮಸ್ಯೆಗಳ ಕುರಿತಂತೆಯೂ ಮುಸ್ಲಿಂ ಸಮುದಾಯ ರಕ್ಷಾ ರಾಮಯ್ಯ ಅವರ ಜತೆಗೆ ಇದೇ ಸಂದರ್ಭದಲ್ಲಿ ವಿಚಾರ ವಿನಿಮಯ ನಡೆಸಿತು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್, ಹಲವು ಗಣ್ಯರು, ಪಕ್ಷದ ಕಾರ್ಯಕರ್ತರು ಇದ್ದರು.
