ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಹಾಸ್ಟೆಲ್ ಮಂಜೂರು ಮಾಡಲು ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ರಾಣೆಬೆನ್ನೂರು ಪಟ್ಟಣದ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಬಸ್ ನಿಲ್ದಾಣ ಮುಂದೆ ಬೃಹತ್ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, “ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ವಿದ್ಯಾರ್ಥಿಗಳೊಂದಿಗೆ ಸಭೆ ಮಾಡಬೇಕು. ಎಸ್ಎಫ್ಐ ಹೋರಾಟದ ಪ್ರತಿಫಲವಾಗಿ ಜಿಲ್ಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 4 ಹಾಸ್ಟೆಲ್ ಮಂಜೂರು ಆಗಿವೆ. ಅದರಲ್ಲಿ ಕನಿಷ್ಠ ಎರಡು ಹಾಸ್ಟೆಲ್ ರಾಣೆಬೆನ್ನೂರು ನಗರಕ್ಕೆ ಕೊಡಬೇಕು” ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ನಿಹಾಲ್ ಖಾನ್ ಗಂಗಾವತಿ ಮಾತನಾಡಿ, “ವಿದ್ಯಾರ್ಥಿಗಳು ಪ್ರತಿದಿನ ವಿದ್ಯಾಭ್ಯಾಸದ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ತಾಲೂಕು ಕೇಂದ್ರದ ಕಾಲೇಜುಗಳಿಗೆ ಬರುತ್ತಾರೆ. ತಾಲೂಕು ಕೇಂದ್ರ ಬಸ್ ನಿಲ್ದಾಣದಿಂದ ಬಹುತೇಕ ಶಾಲಾ-ಕಾಲೇಜುಗಳು, ಹಾಸ್ಟೆಲ್ಗಳು ನಗರದಿಂದ ಸರಿಸುಮಾರು ದೂರದಲ್ಲಿದೆ. ಇದರಿಂದಾಗಿ ದಿನ ನಿತ್ಯವೂ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಸರಿಯಾಗಿ ಬಸ್ಗಳನ್ನು ಬಿಡದೆ ವಿದ್ಯಾರ್ಥಿಗಳಿಗೆ ಸೇರಿದಂತೆ ಸಾರ್ವಜನಿಕರಿಗೂ ಅನಾನುಕೂಲವಾಗಿದೆ” ಎಂದರು.
ವಿದ್ಯಾರ್ಥಿ ಮುಖಂಡ ಗೌತಮ್ ಸಾವಕ್ಕನವರ್ ಮಾತನಾಡಿ, “ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಕಾಲೇಜಿಗೆ ಬಸ್ ವ್ಯವಸ್ಥೆ ಸೇರಿದಂತೆ ನಗರ ಸಾರಿಗೆ ಬಸ್ ಬಿಡಲು ಅನೇಕ ಬಾರಿ ಹೋರಾಟ ಮಾಡಿ ಮನವಿ ಕೊಟ್ಟಿದ್ದೇವೆ. ಈ ಹಿಂದೆ ಎಸ್ಎಫ್ಐ ಹೋರಾಟ ಪ್ರತಿಫಲವಾಗಿ ಬಸ್ ನಿಲ್ದಾಣದಿಂದ ಮಾರುತಿ ನಗರ ಮಾರ್ಗವಾಗಿ ಕಾಲೇಜು ತನಕ ಬಸ್ ಬರುತ್ತಿತು. ಆ ಯೋಜನೆಯನ್ನು ಮುಂದುವರೆಸಬೇಕೆಂದು ಹಾಗೂ ನಗರ ಸಾರಿಗೆ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಿಗೆ ಈ ಕೂಡಲೇ ಕೆಎಸ್ಆರ್ಟಿಸಿ ಸಂಸ್ಥೆಯು ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಪ್ರಕಾಶ್ ಕೋಳಿವಾಡ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, “ಕೂಡಲೇ ವಿದ್ಯಾರ್ಥಿ ಮುಖಂಡರ ಜೊತೆಗೆ ಡಿಪೋ ಮ್ಯಾನೇಜರ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮಹೇಶ್ ಮರೋಳ, ಶಾಂಭವಿ ಆಡಿನವರ, ಶಕುಂತಲಾ ಬಿ, ಬಿಂದು ವಿ ಎಚ್, ನಿಂಗರಾಜ್ ದಾನಮ್ಮನವರ, ಅರುಣ ಕೆ ಲಮಾಣಿ, ನಾಗರಾಜ್ ಭಾಗಲರ, ಸಿಂಧು ಆ ಚಲವಾದಿ, ಭವಾನಿ ಬಣಕಾರ್, ನಂದಿತಾ ರಿತ್ತಿ, ಪೂಜಾ ಜೆ ಸಿದ್ದನಕೋಟೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
