ಇತ್ತೀಚಿನ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟು ದೇಶವನ್ನು ಕಟ್ಟಿದ ನಾಯಕರುಗಳನ್ನು ಮರೆಸುವ ಷಡ್ಯಂತ್ರ ಜರಗುತ್ತಿದೆ. 2014ರ ನಂತರವೇ ದೇಶ ಮುಂಚೂಣಿಗೆ ಬಂದದ್ದು ಎಂಬ ಭ್ರಮೆಯನ್ನು ಹುಟ್ಟು ಹಾಕಲಾಗುತ್ತಿದೆ. ಅದನ್ನೇ ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ನೆಹರು ಜಯಂತಿಯ ಪ್ರಯುಕ್ತ ಈ ಮಕ್ಕಳ ನಾಟಕ ಹಬ್ಬ ಏರ್ಪಡಿಸಿರುವುದು ಅಭಿನಂದನೀಯ ಎಂದು ಖ್ಯಾತ ರಂಗತಜ್ಞ, ರಂಗ ಸಮಾಜದ ಸದಸ್ಯ ಶಶಿಧರ್ ಭಾರಿಘಾಟ್ ಹೇಳಿದರು.
ಅವರು ಉಡುಪಿ ರಥಬೀದಿ ಗೆಳೆಯರು ಉಡುಪಿ-ಸಾಂಸ್ಕೃತಿಕ ವೇದಿಕೆ ಆಯೋಜಿಸಿದ ನೆಹರು ಜಯಂತಿಯ ಪ್ರಯುಕ್ತ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿದ ಮಕ್ಕಳ ನಾಟಕ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ನಮ್ಮ ದೇಶ ಅನೇಕ ಪ್ರಧಾನ ಮಂತ್ರಿಗಳನ್ನು ಕಂಡಿದೆ. ಮುಂದೆಯೂ ಕಾಣುತ್ತದೆ. ನೆಹರು ಪ್ರಧಾನಿಯಾದ ಸಂದರ್ಭದಲ್ಲಿ ದೇಶಕ್ಕೆ ಅವರು ಏನು ಕೊಡುಗೆ ಕೊಟ್ಟರು ಎಂಬುದನ್ನ ನಾವು ತಿಳಿದುಕೊಳ್ಳಬೇಕಾಗಿದೆ. ಅವರ ಸ್ಪಷ್ಟ ವಸಾಹತುಶಾಹಿ ವಿರೋಧಿ ನಿಲುವು, ಮಾನವೀಯತೆಯ ಬಗ್ಗಿನ ಕಾಳಜಿ, ರಾಷ್ಟ್ರೀಯವಾದಿಯಾಗಿ ತಾನು ಬೆಳೆದದ್ದು, ಪ್ರಜಾಪ್ರಭುತ್ವವನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆಸಿ ದೇಶದ ಬಹುತ್ವವನ್ನುವನ್ನು ಕಾಪಾಡಿಕೊಂಡದ್ದು, ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಂಡದ್ದು ಇದು ಪ್ರಮುಖ ಅಂಶಗಳು, ದೇಶದ ಮಕ್ಕಳ ಕಣ್ಣಲ್ಲಿರುವ ಹೊಳಪು ದೇಶದ ಭವಿಷ್ಯವನ್ನೇ ನಿರ್ಧಾರ ಮಾಡುತ್ತದೆ ಎಂದು ದೃಢವಾಗಿ ನಂಬಿದ ಅವರು ನಾವು ಸಾಮಾಜಿಕವಾಗಿ ಮತ್ತು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕಾದರೆ ಶಿಕ್ಷಣ ಅತಿ ಮುಖ್ಯ ಎಂದು ನಂಬಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮುನ್ನಲೆಗೆ ತಂದರು. ಮೂಡನಂಬಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಅವರು ವೈಚಾರಿಕ ಚಿಂತನೆಗೆ ಒತ್ತು ಕೊಟ್ಟಿದ್ದರು. ದೇಶದ ಅಭಿವೃದ್ಧಿ ಧರ್ಮದಿಂದಲ್ಲ ಶಿಕ್ಷಣದಿಂದ ಎಂಬ ದೃಢವಾದ ನಿಲುವು ಅವರದ್ದು ಎಂದು ಹೇಳಿದರು.
ಇವತ್ತು ಮಕ್ಕಳ ನಾಟಕಕ್ಕೆ ತುಂಬಾ ಅವಕಾಶವನ್ನು ಕೊಡುತ್ತೇವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಮಕ್ಕಳ ಮೇಲೆ ಶೈಕ್ಷಣಿಕ ಒತ್ತಡವನ್ನು ಹಾಕುವ ಮೂಲಕ ನಿಧಾನವಾಗಿ ಆ ಅವಕಾಶವನ್ನ ಮಕ್ಕಳಿಂದ ಕಸಿದುಕೊಳ್ಳಲಾಗುತ್ತಿದೆ. ಇದು ದೊಡ್ಡ ದುರಂತ. ರಂಗಭೂಮಿ ಮಕ್ಕಳಲ್ಲಿ ಮುಖ್ಯವಾಗಿ ಪ್ರಶ್ನಿಸುವ ಗುಣವನ್ನು ಬೆಳೆಸುತ್ತದೆ. ಒಳ್ಳೆದು ಕೆಟ್ಟದು ಅರ್ಥೈಸಿ ಕೊಳ್ಳಲು, ನಾಯಕತ್ವ ಗುಣವನ್ನು ಬೆಳೆಸಲು ಕಾರಣವಾಗುತ್ತದೆ. ಮಕ್ಕಳಲ್ಲಿ ಸಹಿಷ್ಣತೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ. ಇಂತಹ ಕಾರ್ಯಕ್ರಮ ಅದಕ್ಕೆ ಪೂರಕವಾಗುತ್ತದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ನಾಯಕ್ ಪಟ್ಲ ಮತ್ತು ಸಂತೋಷ್ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ. ಪ್ರಭಾಕರ್ ತುಮರಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಬ್ರಹ್ಮಾವರ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸುಧಾ ಆಡುಕಳರ ‘ನಮಗೆಷ್ಟು ಭೂಮಿ ಬೇಕು’ ಮತ್ತು ಪ್ರೀತಮ್ ಸುಧಾರ ‘ದೈವ ಮತ್ತು ಪುಟ್ಟ’ ಬಿಂದು ರಕ್ಷಿದಿ ನಿರ್ದೇಶನದಲ್ಲಿ, ಬ್ರಹ್ಮಾವರ ಎಸ್.ಎಂ.ಎಸ್.( ಸಿ .ಬಿ. ಎಸ್. ಸಿ.) ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಬಿ.ವಿ.ಕಾರಂತರ ಪಂಜರ ಶಾಲೆ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಮತ್ತು ಕಿನ್ನರ ಮೇಳ, ತುಮರಿ ಕಲಾವಿದರಿಂದ ‘ಇರುವೆ ಪುರಾಣ’ ನಿಧಿ ಎಸ್. ಶಾಸ್ತ್ರಿ ಕೇರಳ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
