ಮಹಾತ್ಮಾಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ರಾಜ್ಯದ ಗದಗ ನಗರದಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ‘ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ ಎಂದು ಬೆಳಗಾವಿಯಲ್ಲಿ ಇಂದು ಮರು ನಾಮಕರಣ ಮಾಡಲಾಯಿತು.
ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹೋನ್ನತ ಸಂದರ್ಭದ ಶತಮಾನೋತ್ಸವ ಐತಿಹಾಸಿಕ ಕಾರ್ಯಕ್ರಮದಲ್ಲಿ ‘ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ ಮರು ನಾಮಕರಣ ಮಾಡಲಾಯಿತು.
ಡಾ. ಹೆಚ್. ಕೆ.ಪಾಟೀಲ ಅವರ ಪರಿಕಲ್ಪನೆಯಂತೆ ಗದಗದಲ್ಲಿ ನಾಗಾವಿ ಬಳಿ 353 ಎಕರೆ ವಿಸ್ತಿರಣದಲ್ಲಿ ಕಪ್ಪತಗುಡ್ಡ ತಪ್ಪಲಿನ ನಿಸರ್ಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿನಿಯ 2016 ರಡಿಯಲ್ಲಿ ಸ್ಥಾಪಿಸಲಾಯಿತು.
ವಿಶ್ವವಿದ್ಯಾಲಯವು ಭಾರತದ ಶ್ರೇಷ್ಠ ಸಮಾಜ ಸುಧಾರಕರು, ದೇಶ ಭಕ್ತರು, ತತ್ವಜ್ಞಾನಿಗಳು ಹಾಗೂ ಚಿಂತಕರುಗಳಾದ ಮಹಾತ್ಮಾ ಗಾಂಧಿಜೀ ರವರ ಮೂಲಭೂತ ತತ್ವಗಳ ಮೇಲೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮವು ಒಂದು ಪ್ರೇರಣಾ ಕೇಂದ್ರವಾಗಿದ್ದು, ಇಲ್ಲಿ ಗಾಂಧಿಜೀಯವರ ಚಿಂತನೆ ಮತ್ತು ಕೃತಿಗಳ ಕುರಿತು ಅಧ್ಯಯನ ಹಾಗೂ ಸತ್ಸಂಗ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿವೆ. ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಭವ್ಯವಾದ ಪುತ್ಥಳಿಯನ್ನು ಸ್ವಾಪಿಸಲಾಗಿದೆ.
ವಿಶ್ವವಿದ್ಯಾಲಯದಿಂದ ಪ್ರತಿ ತಿಂಗಳು ಗ್ರಾಮೀಣಾಭಿವೃದ್ಧಿ ವಿಷಯಗಳನ್ನೊಳಗೊಂಡು ಶೈಕ್ಷಣಿಕ, ಸಂಶೋಧನೆ, ತರಬೇತಿ, ಸಮ್ಮೇಳನ, ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಆರೋಗ್ಯ ಇತರೆ ವಿಷಯಗಳ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅನೇಕರು ಗ್ರಾಮೀಣ ಅಭಿವೃದ್ಧಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ವಿಶ್ವವಿದ್ಯಾಲಯದ ಕುಲಪತಿಗಳು (ಪ್ರಬಾರ) ಹಾಗೂ ಕುಲಸಚಿವ ಪ್ರೊ. ಡಾ. ಸುರೇಶ ವಿ. ನಾಡಗೌಡರ ತಿಳಿಸಿದ್ದಾರೆ.
”ಈ ವಿಶ್ವವಿದ್ಯಾಲಯದಿಂದ ಹೊರ ಬರುವ ಪದವೀಧರರು ಮಹಾತ್ಮ ಗಾಂಧೀಜಿಯವರ ಆಶಯದಂತೆ ಗ್ರಾಮೀಣ ಪರಿಸರದಲ್ಲಿ ಈ ನಾಡನ್ನು ನಿರ್ಮಾಣ ಮಾಡುವ ಹೊಸ ಆಶಯಗಳನ್ನು ಹೊಂದಿರುತ್ತಾರೆ. ಗಾಂಧಿ ಅವರ ತತ್ತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ” ಎಂದು ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಏಟಿಎಂ ಕಾರ್ಡ್ ಬದಲಿಸಿ ಹಣ ಲೂಟಿ ಮಾಡುತ್ತಿದ್ದ ಆರೋಪಿ ಪೊಲೀಸರಿಂದ ಬಂಧನ
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಗಾಂಧಿ ವಾರ್ಧಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
