ತಳಮಟ್ಟದ ಯುವಜನರು ಉನ್ನತ ಶಿಕ್ಷಣ ಪಡೆಯುವಂತೆ ಮಾಡುವುದೇ ನಿಜವಾದ ಸಮಾಜಕಾರ್ಯ ಎಂದು ಉಪನ್ಯಾಸಕರಾದ ವಸಂತ ಕುಮಾರ್ ಎಚ್.ಆರ್. ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿಂತಾಮಣಿ ನಗರದಲ್ಲಿ ಬೆಂಗಳೂರಿನ ಕೆ.ಆರ್.ಪುರಂನ ಎಸ್ಇಎ ವಾಣಿಜ್ಯ ವಿಜ್ಞಾನ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ, ಜನಪರ ಫೌಂಡೇಷನ್ ಹಾಗೂ ವಿದ್ಯಾಜ್ಯೋತಿ ಕಾಲೇಜು ಸಹಯೋಗದಲ್ಲಿ ಸಾವಿತ್ರಿಭಾಯಿ ಪುಲೆ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ “ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ” ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೋಷಿತ ವರ್ಗದ, ಹಿಂದುಳಿದ ವರ್ಗದ ಯುವಜನರು ಸಾಮಾಜಿಕವಾಗಿ ವೃದ್ಧಿಯಾಗಲು ಉನ್ನತ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಸಮಾಜಕಾರ್ಯಕರ್ತರು ಆ ಕಡೆಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ತಳ ಸಮುದಾಯ, ಹಿಂದುಳಿದ ಸಮುದಾಯಗಳಲ್ಲಿನ ಯುವಜನರಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಹಾಗೂ ಉನ್ನತ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಹೆಣ್ಣು ಮಕ್ಕಳು ಭವಿಷ್ಯದ ನಾಳೆಗಳಿಗಾಗಿ ಇಂದಿನಿಂದಲೇ ತಯಾರಾಗಬೇಕು. ಅದಕ್ಕಾಗಿ ಶಿಕ್ಷಣವೇ ಪರ್ಯಾಯ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ನಾಗಪ್ಪ ಮಾತನಾಡಿ, ಸ್ವಾತಂತ್ರ್ಯಪೂರ್ವ ಭಾರತದ ಸಮಾನತವಾದಿ, ಸ್ತ್ರೀವಾದಿ ಮತ್ತು ಸಾಮಾಜಿಕ ಸುಧಾರಣೆಗಳ ಮೊದಲ ಚಾರಿತ್ರಿಕ ಹೆಜ್ಜೆ ಎಂದು ಗುರುತಿಸುವುದಾದರೆ ಅದು ಜ್ಯೋತಿ ರಾವ್ ಫುಲೆ ಮತ್ತು ಸಾವಿತ್ರಿಬಾಯಿ ಪುಲೆ ದಂಪತಿ. ಜ್ಯೋತಿ ರಾವ್ ಫುಲೆಯವರನ್ನು ಭಾರತದ ಸಾಮಾಜಿಕ ಹೋರಾಟಗಳ ತಂದೆ ಎಂದೇ ಇತಿಹಾಸವು ನೆನಪಿಸಿಕೊಳ್ಳುವುದು. ಇಂತಹ ಮಹಾನ್ ಚೇತನದ ಮಡದಿಯಾಗಿ ತನ್ನ ಬಾಳಸಂಗಾತಿಯ ಆಶಯಗಳ ಮಹತ್ವವನ್ನು ಅರಿತುಕೊಂಡು, ಅವುಗಳನ್ನು ತನ್ನ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡು ಬದುಕಿನ ಕೊನೆಯವರೆಗೂ ಮುನ್ನಡೆಸಿದ ಮಹಾನ್ ಚೇತನ ಸಾವಿತ್ರಿಬಾಯಿ ಫುಲೆ ಎಂದು ಹೇಳಿದರು.
ಭಾರತದ ಮೇಲ್ವರ್ಗ ಹಾಗೂ ಊಳಿಗಮಾನ್ಯ ವ್ಯವಸ್ಥೆ ಶೂದ್ರರು ಮತ್ತು ಅಸ್ಪಶ್ಯರು ಕೆಲವರ ಸೇವೆಗೆಂದು ಮಾತ್ರ. ಅಕ್ಷರ, ಸ್ವತಂತ್ರ, ಸಮಾನತೆ, ಸ್ವಾಭಿಮಾನಗಳೆಲ್ಲ ತಳಸಮುದಾಯಗಳಿಗೆ ನಿಷಿದ್ದ, ಎಂಬ ನಿಯಮವನ್ನು ವಿಧಿಸಿದ್ದರು. ಅಂತಹ ಕಾಲದಲ್ಲಿ ಜಾತಿಮನಸ್ಥಿತಿಗಳ ವಿರುದ್ಧ ದೃಢವಾಗಿ ನಿಂತು ಶೂದ್ರಾತಿ ಶೂದ್ರರಿಗೆ ಅಕ್ಷರಾಭ್ಯಾಸ ಮಾಡಿಸಿ ಶಿಕ್ಷಣದ ಹಕ್ಕನ್ನು ಕಲ್ಪಿಸಿಕೊಟ್ಟು, ಸ್ವಾಭಿಮಾನದ ಜ್ಯೋತಿಯನ್ನು ಅಕ್ಷರಗಳ ಮೂಲಕ ನಮ್ಮೆಲ್ಲರೆದೆಗಳಲ್ಲಿ ಬೆಳಗಿಸಿದವರು ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಪುಲೆ ಎಂದು ನುಡಿದರು.
ಮಹಿಳೆಯರಿಗೆ ಶಿಕ್ಷಣವನ್ನು ನೀಡಬೇಕೆಂಬ ಅಗಾಧವಾದ ಆಸೆ ಹೊಂದಿದ್ದ ಜ್ಯೋತಿ ಬಾಪುಲೆ ಮೊದಲು ತನ್ನ ಮಡದಿ ಸಾವಿತ್ರಿಬಾಯಿಗೆ ಅಕ್ಷರಾಭ್ಯಾಸ ಮಾಡಿಸಿ ಅವರ ಮೊದಲ ಗುರುವಾದರು. ಬಾಳಸಂಗಾತಿಯ ಘನ ಉದ್ದೇಶವನ್ನು ಅರಿತ ಸಾವಿತ್ರಿಬಾಯಿ ಅಷ್ಟೇ ಆಸ್ಥೆ ಮತ್ತು ಶ್ರದ್ಧೆಯಿಂದ ಕಲಿತರು. ಕಲಿಕೆಯ ಆಸಕ್ತಿ ಅವರನ್ನು ಭಾರತದ ಶೋಷಿತ ಸಮುದಾಯಗಳ ವಿಮೋಚಕಿಯನ್ನಾಗಿ ಬೆಳೆಸಿತು ಎಂದು ಹೇಳಿದರು.
ಅಂದಿನ ಕಾಲದಲ್ಲಿ ಶಿಕ್ಷಣವನ್ನು ನೀಡುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಅತ್ಯಂತ ನಿಂದನೆ, ನೋವು, ಅವಮಾನದಿಂದಲೇ ಕ್ರಮಿಸಿದ್ದರು. ಪಾಠ ಕಲಿಸಲು ಹೋಗುವ ದಾರಿಯ ಮಧ್ಯೆ ಅವರ ಮೇಲೆ ಕಲ್ಲು, ಮಣ್ಣು, ಸೆಗಣಿ ಎಸೆದರು. ಆದರೂ ಧೃತಿಗೆಡದೇ ಎಲ್ಲವನ್ನೂ ಹಿಮ್ಮೆಟ್ಟಿಸಿ ಬಂಡೆಯಂತೆ ನಿಂತು ಅಕ್ಷರಾಭ್ಯಾಸದ ಕಾರ್ಯವನ್ನು ಮುಂದುವರಿಸಿದರು. ಹೀಗಾಗಿ, ಅವರು ನಮ್ಮೆಲ್ಲರಿಗೂ ಅಕ್ಷರದ ಮಾತೆಯಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್ ಹಾಗೂ ಪೆದ್ದೂರು ಮುನಿರಾಜು ಸಾವಿತ್ರಿ ಬಾಯಿ ಪುಲೆ, ಜ್ಯೋತಿ ಬಾಯಿ ಪುಲೆ ಹಾಗೂ ಹಲವು ಸಾಮಾಜಿಕ ಹಾಡುಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಜೆಡಿಎಸ್ ಮುಖಂಡನ ಕೊಲೆ
ವೇದಿಕೆಯಲ್ಲಿ ವಿದ್ಯಾಜ್ಯೋತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್, ಉಪನ್ಯಾಸಕರಾದ ಸ್ವಾಮಿ, ಎಸ್ಇಎ ಕಾಲೇಜಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಅರ್ಪಿತಾ, ವಿನೋಧಶ್ರೀ, ಬಾಬುರೆಡ್ಡಿ, ಜನಪರ ಫೌಂಡೇಷನ್ ನ ಯುವಯಾನ ಬಳಗದ ಅಕ್ಷಯ್, ಗಂಗೋತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.