ಗುಲಬರ್ಗಾ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳು ಬಗೆಹರಿಸಿ, ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕಲಬುರಗಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂಬಂಧ ರಾಜ್ಯಪಾಲರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ಮಾತನಾಡಿ, “ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ದಿನದಿಂದ ದಿನಕ್ಕೆ ಶೈಕ್ಷಣಿಕ ಸಮಸ್ಯೆಗಳು ಬಿಗಡಾಯಿಸುತ್ತಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿದ ವರ್ಷ ಕಳೆದರೂ ಸಮಯಕ್ಕೆ ಅಂಕಪಟ್ಟಿ ಮತ್ತು ಫಲಿತಾಂಶ ದೊರೆಯುತ್ತಿಲ್ಲʼ ಎಂದು ದೂರಿದರು.
“ವಿಶ್ವವಿದ್ಯಾಲಯದ ಒಳಗಡೆ ಭ್ರಷ್ಟಾಚಾರ ತಾಂಡವಾಡುತ್ತಿರುವುದು ಕಂಡುಬರುತ್ತಿದೆ. ವಿಶ್ವವಿದ್ಯಾಲಯದ ವಸತಿ ನಿಲಯಗಳು ಮೂಲಸೌಲಭ್ಯಗಳ ಕೊರತೆಯಿಂದ ನಲಗುತ್ತಿವೆ. ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡಬೇಕಾದ ಅನುದಾನ ನೀಡುತ್ತಿಲ್ಲ” ಎಂದು ಆರೋಪಿಸಿದರು.
ಬೇಡಿಕೆಗಳೇನು :
ʼಯುಯುಸಿಎಂಎಸ್ ವ್ಯವಸ್ಥೆ ಜಾರಿಯಿಂದ ಸಾವಿರಾರು ವಿದ್ಯಾರ್ಥಿಗಳು ತೊಂದರೆಯಾಗುತ್ತಿದೆ. ಸರಿಯಾದ ಸಮಯಕ್ಕೆ ಫಲಿತಾಂಶ ನೀಡತ್ತಿಲ್ಲ. ಅಂಕಪಟ್ಟಿ ವಿಳಂಬ, ದಾಖಲಾತಿ ಸಮಯದಲ್ಲಿ ತಾಂತ್ರಿಕ ದೋಷ, ಆಂತರಿಕ ಅಂಕಗಳನ್ನು ಸರಿಯಾಗಿ ನೀಡದಿರುವುದು, ವಿಶ್ವವಿದ್ಯಾಲಯಗಳಿಗೆ ಇದರ ಕುರಿತು ಸರಿಯಾದ ಮಾರ್ಗದರ್ಶನ ಮತ್ತು ಮಾಹಿತಿ ನೀಡದೇ ಸಮಸ್ಯೆಯನ್ನು ಸೃಷ್ಟಿಮಾಡುವುತ್ತಿದೆ. ಯುಯುಸಿಎಂಎಸ್ ಪದ್ಧತಿಯನ್ನು ಕೂಡಲೇ ಕೈ ಬಿಡಬೇಕು ʼಎಂದು ಆಗ್ರಹಿಸಿದರು.
ʼಸಂಶೋಧನಾ ವಿದ್ಯಾಥಿಗಳಿಗೆ ಆರ್ಥಿಕ ಸಹಾಯ ಧನ ಸರಿಯಾದ ಕಾಲಕ್ಕೆ ನೀಡಬೇಕು ಮತ್ತು ಹೆಚ್ಚಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ನೀಡಬೇಕಾದ ಹಣವನ್ನು ಕಡಿತ ಮಾಡಲಾಗಿದೆ. ಅಲ್ಲದೆ ಮಾನದಂಡಗಳನ್ನು ರೂಪಿಸಿ ಫೆಲೋಶಿಪ್ ನಿಂದ ಸಂಶೋಧನಾ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ವಲಯದಿಂದ ದೂರ ತಳ್ಳುತ್ತಿದೆ. ಇದರಲ್ಲಿಯೂ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ಮಾಡುತ್ತಿರುವುದು ನಿಲ್ಲಿಸಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸಹಾಯಧನ ನೀಡುವ ಕ್ರಮವನ್ನು ಕೈಗೊಳ್ಳಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ನೇಣು ಬಿಗಿದು ಸರ್ಕಾರಿ ಶಾಲೆ ಶಿಕ್ಷಕ ಆತ್ಮಹತ್ಯೆ
ವಿಶ್ವವಿದ್ಯಾಲಯದ ಆಡಳಿ ವ್ಯವಸ್ಥೆಯನ್ನು ಪಾರದರ್ಶಕತೆಯಿಂದ ನಡೆಸಲು ಕ್ರಮವಹಿಸಬೇಕು. ಜ್ಞಾನದೇಗುಲದಲ್ಲಿ ಭ್ರಷ್ಟಾಚಾರದ ಕೇಳಿ ಬರುತ್ತಿದೆ. ಅಲ್ಲದೆ ಇಡೀ ರಾಜ್ಯದ ತುಂಬೆಲ್ಲ ಇದರದೇ ಚೆರ್ಚೆ ಕೇಳಿ ಬರುತ್ತಿದೆ. ಸರ್ಕಾರ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಉನ್ನತ ಶ್ರೇಣಿಯ ಸಂಬಳವನ್ನು ನೀಡುತ್ತಿದೆ. ಆದರೂ ವಿವಿಯಲ್ಲಿ ಭ್ರಷ್ಟಾಚಾರ ಕೇಳಿಬರುತ್ತಿರುವುದು ಶೈಕ್ಷಣಿಕ ಸುಧಾರಣೆಗೆ ತೀವ್ರ ತೊಂದರೆಯಾಗುತ್ತಿದೆ.
ನೇಮಕಾತಿ ಪ್ರಕ್ರಿಯೆ ಕಾಲಕಾಲಕ್ಕೆ ನಡೆಯಬೇಕು. ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ ಹೆಚ್ಚಿದೆ. ತಾತ್ಕಾಲಿಕ ಸಿಬ್ಬಂದಿಗಳ ನೇಮಕ ಕೈಬಿಡಬೇಕು. ತಾತ್ಕಾಲಿಕ ನೇಮಕಾತಿ ಶೈಕ್ಷಣಿಕ ಸುಧಾರಣೆಗೆ ಅಡ್ಡಿಯಾಗುತ್ತಿದೆ. ಮತ್ತು ನಿರುದ್ಯೋಗವನ್ನು ಸೃಷ್ಟಿ ಮಾಡುತ್ತದಲ್ಲದೆ ಅಭದ್ರತೆಯನ್ನು ಸೃಷ್ಟಿಮಾಡುತ್ತಿದೆ. ಎಲ್ಲಾ ವಿಭಾಗಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಕೆಂಪು, ನೀಲಿ, ಹಸಿರು ಗೆದ್ದವು’; ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯಗೆ ಅಭಿನಂದನೆ
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಸರ್ವೇಶ್, ಉಪಾಧ್ಯಕ್ಷ ಪ್ರೇಮ್, ಸಹ ಕಾರ್ಯದರ್ಶಿ ನಾಗಮ್ಮ, ಭರತ್, ಜಿಲ್ಲಾ ಸಮಿತಿ ಸದಸ್ಯ ಕಿರಣ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.