ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಣತಿ ದೂರದಲ್ಲಿ ಬುಡಕಟ್ಟು ಜನಾಂಗದ ಕೊರಗ ವಿಧವೆ ಮಹಿಳೆ ಶ್ರೀಮತಿ ಗಂಗೆ ಕೊರಗ ಎಂಬ ಬಡ ಮಹಿಳೆಯು ತನ್ನಿಬ್ಬರು ಅಪಕ್ವ ಮಕ್ಕಳೊಂದಿಗೆ ಸುಮಾರು 40 ವರ್ಷಗಳಿಂದ ವಾಸಮಾಡಿಕೊಂಡಿದ್ದು. ಈಗ ಏಕಾಏಕೀ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೊಲ್ಲೂರಿನ ಜಗದಾಂಭ ಟ್ರಸ್ಟ್ ನವರು ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಕೊಲ್ಲೂರಿನಲ್ಲಿ ಗುರುವಾರದಂದು ನಡೆದಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಸ್ಥಳಕ್ಕೆ ಭೇಟಿಕೊಟ್ಟು ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಉಡುಪಿ ಪ್ರಧಾನ ಸಂಚಾಲಕರಾದ ಮಂಜುನಾಥ್ ಗಿಳಿಯಾರು ರವರು, ಆದ್ಯಾತ್ಮ ಕ್ಷೇತ್ರದಲ್ಲಿ ದುರಾತ್ಮ ಕೃತ್ಯ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ. ಈ ಅಮಾನವೀಯ ಘಟನೆ ಕೊಲ್ಲೂರಿನ ಜಗಧಂಬಾ ಟ್ರಸ್ಟ್ ಮಾಲೀಕ ಸರಕಾರಿ ಭೂಮಿಯನ್ನು ಕಬಳಿಸಿಕೊಳ್ಳುವ ಸಲುವಾಗಿ ಮನೆಯನ್ನು ಜೆ ಸಿ ಬಿ ಯಿಂದ ಕೆಡವಿ ಮನೆಯಲ್ಲಿರುವ ದಿನ ಬಳಕೆ ದಿನಸಿ ಸಾಮಾಗ್ರಿ ಬಟ್ಟೆ ಪಾತ್ರೆಪಗಡಿಗಳ ಸಮೇತವಾಗಿ ಯಾವುದೇ ಒಂದು ನೋಟೀಸು ನೀಡದೆ ಕೋರ್ಟಿನಿಂದ ಅದೇಶ ಇದೆ ಎಂದು ಕೆಡವಿದ ಅಮಾನವೀಯ ಘಟನೆಯನ್ನು ಇಂತಹ ಹೇಯ ಕೃತ್ಯವನ್ನು ಸಹಿಸಿಕೊಳ್ಳುವದಿಲ್ಲ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ಘಟನೆಯನ್ನು ಖಂಡಿಸುವ ಮೂಲಕ ತೀವ್ರ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ಪೋಲಿಸ್ ಇನ್ಸ್ಪೆಕ್ಟರ್ ಮತ್ತು ಕೊಲ್ಲೂರು ಪಂಚಾಯತ್ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲರಾದ ಶ್ಯಾಮ್ ರಾಜ್ ಭಿರ್ತಿ, ಕುಂದಾಪುರ ತಾಲೂಕು ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ, ಬ್ರಹ್ಮಾವರ ತಾಲೂಕು ಸಂಚಾಲಕ ಕೆ ಹರಿಶ್ಚಂದ್ರ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು , ಸಂದೀಪ್ ಮರವಂತೆ ಕೊರಗ ಸಂಘಟನೆಯ ಸುಶೀಲಾ ನಾಡ, ಬೊಗ್ರ ಕೊರಗ, ಪುತ್ರನ್ ಹೆಬ್ರಿ ಮತ್ತು ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.