ಮೈಸೂರಿನ ನಟನ ರಂಗಶಾಲೆಯಲ್ಲಿ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅಭಿನಯದ ‘ ಶರ್ಮಿಷ್ಠೆ ‘ ನಾಟಕವನ್ನು ಮೈಸೂರು ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ವೀಕ್ಷಿಸಿದರು.
ಬೇಲೂರು ರಘುನಂದನ್ ವಿರಚಿತ, ಚಿದಂಬರ ರಾವ್ ಜಂಬೆ ನಿರ್ದೇಶಿಸಿರುವ ಹಿರಿಯ ನಟಿ ಉಮಾಶ್ರೀ ಅವರ ಅಭಿನಯದ “ಶರ್ಮಿಷ್ಠೆ” ನಾಟವನ್ನು ವೀಕ್ಷಿಸಿ ಮಾತನಾಡಿದ ಸಚಿವ ಮಹದೇವಪ್ಪ ಬಹುಮುಖ ಪ್ರತಿಭೆ ಉಮಾಶ್ರೀ ಅವರ ಭಾವಪೂರ್ಣವಾದ ಅಭಿನಯ ನಮ್ಮೆನ್ನೆಲ್ಲ ಒಂದು ಗಂಟೆ ಕಾಲ ಭಾವಪರವಶಗೊಳಿಸಿದೆ. ಇಬ್ಬರು ಪರಮಾಪ್ತ ಸ್ನೇಹಿತರ ವಿಭಿನ್ನವಾದ ನಡೆ, ನುಡಿಗಳು ಹಾಗೂ ಸಂಘರ್ಷದ ಸನ್ನಿವೇಶಗಳ ಮನೋಜ್ಞವಾದ ನಟನೆ ನಿಜಕ್ಕೂ ಪ್ರಶಂಸನೀಯ ಎಂದರು.

ಕಷ್ಟದ ದಿನಗಳಿಂದ ಬೆಳೆದು ಬಂದಿರುವ ಉಮಾಶ್ರೀ ಅವರು ಜೀವನದ ಅನೇಕ ಮಜಲುಗಳನ್ನು ಹತ್ತಿರದಿಂದ ಕಂಡಿದ್ದಾರೆ. ನಾಟಕದಲ್ಲೂ ಕೂಡ ಎಲ್ಲಿಯೂ ಏರಿಳಿತಗಳಿಲ್ಲದೆ ಅತ್ಯುತ್ತಮವಾಗಿ ಏಕಪಾತ್ರದಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ಅಪ್ರತಿಮಾ ಕಲಾ ಪ್ರತಿಭೆಯನ್ನು ಈ ನಾಟಕದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿಯೂ ಕೂಡ ಮಹಿಳಾ ಮತ್ತು ಮಕ್ಕಳ ಸಚಿವೆಯಾಗಿ ಮಹಿಳಾ ಪರವಾಗಿ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಮಕ್ಕಳು ಹಾಗೂ ಬಾಣಂತಿಯರ ಬಗ್ಗೆ ಆಸಕ್ತಿವಹಿಸಿ ಅನೇಕ ಕೊಡುಗೆ ನೀಡಿದ್ದಾರೆ. ವಿಧಾನ ಪರಿಷತ್ನಲ್ಲಿ ಕೂಡ ಚಳುವಳಿಯ ಮೂಲಕ ತಮ್ಮ ಜವಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಾನಸಿಕ, ದೈಹಿಕ ಸದೃಢತೆ, ಸುಸ್ಥಿತಿ, ಮನೋಲ್ಲಾಸಕ್ಕೆ ಯೋಗ ಸಹಕಾರಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ರಂಗಕ್ಷೇತ್ರಗಳು ಸಾಮಾಜಿಕ ಜವಾಬ್ದಾರಿ ಮತ್ತು ಸಂದೇಶಗಳನ್ನು ಸಾರುವ ಮೂಲಕ ಮಹತ್ತರವಾದ ಬದಲಾವಣೆಯನ್ನು ಜಾರಿಮಾಡುವಂತಹ ವೇದಿಕೆಗಳಾಗಿವೆ. ಇಂತಹ ಕೆಲಸಗಳಿಗೆ ಪ್ರೇರಕ ಶಕ್ತಿಯಾಗಿ ಉಮಾಶ್ರೀ ಹಾಗೂ ಮಂಡ್ಯ ರಮೇಶ್ ಅವರಂತಹ ಕಲಾವಿದರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.