ಶಿವಮೊಗ್ಗ ನಗರದ ಅಶೋಕ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಅವೈಜ್ಞಾನಿಕವಾಗಿದೆ ಎಂಬುದು ವಾಹನ ಸವರಾರು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಸಿಗ್ನಲ್ನಲ್ಲಿ ಕನಿಷ್ಠ ಜಾಗವೂ ಇಲ್ಲ. ಬಸ್ಗಳು ಬಂದು ಅಲ್ಲೇ ಪ್ರಯಾಣಿಕರನ್ನು ಇಳಿಸಿ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಜತೆಗೆ ಸಿಗ್ನಲ್ನಿಂದ್ ತುಂಬಾ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪವಾಗಿದೆ.
ಶಿವಮೊಗ್ಗ ನಗರದ ಮುಖ್ಯ ಬಸ್ ನಿಲ್ದಾಣ ಇದಾಗಿದ್ದು, ಇಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣವೂ ಇದೆ. ಜತೆಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ರಸ್ತೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ, ಅಗ್ನಿ ಶಾಮಕ ಠಾಣೆ, ಪೊಲೀಸ್ ಠಾಣೆಗಳು ಇದೇ ರಸ್ತೆಯಲ್ಲಿರುವುದರಿಂದ ನಿತ್ಯವೂ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಲವು ತಾಲೂಕು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬಂದಿಳಿಯುತ್ತಾರೆ.
ಬಸ್ ನಿಲ್ದಾಣದ ಮುಂಭಾಗಕ್ಕಿರುವ ಅಶೋಕ ವೃತ್ತಕ್ಕೆ ಒಂದಲ್ಲ ಅಂತ ಎರಡೆರೆಡು ಸಿಗ್ನಲ್ ಅಳವಡಿಸಿದ್ದಾರೆ. ಜತೆಗೆ ಈ ಸಿಗ್ನಲ್ ಸ್ಥಳದಲ್ಲಿ ಒಂದು ದಿಕ್ಕಿಗೆ ತೀರ್ಥಹಳ್ಳಿ ರಸ್ತೆ ಇನ್ನೊಂದು ದಿಕ್ಕಿಗೆ ಆಯನೂರು, ಸಾಗರ ರಸ್ತೆ ಹಾಗೂ ಮತ್ತೊಂದು ಎದುರಿಗೆ ಭದ್ರಾವತಿ ರಸ್ತೆ ಕಡೆ ತೆರಳುವ ವೃತ್ತವಾಗಿದೆ.
“ಅಸಲಿಗೆ ಈ ಸಿಗ್ನಲ್ನಲ್ಲಿ ಹಸಿರು ಲೈಟ್ ಬರುವ ವೇಳೆಯಲ್ಲಿ ಅಥವಾ ಕೆಂಪು ದೀಪ ಬರುವ ವೇಳೆಯಲ್ಲಿ ಎಲ್ಲೂ ಕೂಡಾ ಎಷ್ಟು ಸೆಕೆಂಡ್ ಉಳಿದಿದೆಯೆಂದು ತೋರಿಸುವುದೇ ಇಲ್ಲ. ಇದು ಶಿವಮೊಗ್ಗ ನಗರದ ಎಲ್ಲ ಸಿಗ್ನಲ್ ಕಥೆಯಾಗಿದೆ. ಇದರಿಂದ ಒಂದು ಕಡೆ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದೆ. ಜತೆಗ್ ಆಕ್ಸಿಡೆಂಟ್ ಆಗುವ ಸಂಭವ ಹೆಚ್ಚು, ಮತ್ತೆ ನಿತ್ಯವೂ ಸಿಗ್ನಲ್ ಜಂಪ್ ಮಾಡುತ್ತಿರುವುದಾಗಿ ವಾಹನಗಳ ಮೇಲೆ ಫೈನ್ ಹಾಕುತ್ತಿರುವುದು ಹೇರಳವಾಗಿದೆ. ಅಲ್ಲದೆ ಹಗಲು ದರೋಡೆಯಾಗಿದೆ” ಎಂಬುದು ವಾಹನ ಸವಾರರ ಆರೋಪ.

ಇಲ್ಲಿಗೆ ಸಿಗ್ನಲ್ ಅವಶ್ಯಕತೆ ಇರಲಿಲ್ಲ. ಶಿವಮೊಗ್ಗ ಜಿಲ್ಲಾಸ್ಪತ್ರೆ ಇರುವುದರಿಂದ ಇಲ್ಲಿಗೆ ನಿತ್ಯವೂ ನೂರಾರು ಆ್ಯಂಬುಲೆನ್ಸ್ಗಳು ಓಡಾಡುತ್ತವೆ. ಸಿಗ್ನಲ್ ಇರುವ ಕಾರಣ ಆ್ಯಂಬುಲೆನ್ಸ್ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅದಷ್ಟೇ ಅಲ್ಲದೆ ಸಿಗ್ನಲ್ ಸಮಸ್ಯೆಯಿಂದ ಗ್ರೀನ್ ಲೈಟ್, ನಿಲ್ಲುವ ಸೆಕೆಂಡ್ ತೋರಿಸದೆ ಇರುವ ಕಾರಣ ವಾಹನಗಳು ಒಂದೇ ಸಮನೆ ಬರುತ್ತಿರುತ್ತವೆ. ತಕ್ಷಣ ಸಿಗ್ನಲ್ ಕೆಂಪು ದೀಪ ಬಂದಾಗ ಅಚಾನಕ್ಕಾಗಿ ವಾಹನಗಳನ್ನು ನಿಲ್ಲಿಸುವುದು ಕಷ್ಟಸಾಧ್ಯ. ಹಾಗಾಗಿ ಹಿಂದಿನಿಂದ ಬರುವ ವಾಹನಗಳಿಗೆ ಇದರ ಅರಿವಿರುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
“ಈ ರೀತಿ ಅವೈಜ್ಞಾನಿಕ ಸಿಗ್ನಲ್ನಿಂದ ನಿತ್ಯವೂ ಇಲ್ಲಿ ಓಡಾಡುವ ವಾಹನಗಳ ಮೇಲೆ ಸಿಗ್ನಲ್ ಜಂಪ್ ಹೆಸರಿನಲ್ಲಿ ಸಾಕಷ್ಟು ಕೇಸ್ಗಳು ಬಿದ್ದಿವೆ. ಪ್ರಯಾಣಿಕರಿಗೆ, ಖಾಸಗಿ ಬಸ್ ಹಾಗೂ ಬಡಪಾಯಿ ಆಟೋದವರು ಕೇಸ್ ಹಾಕಿಸಿಕೊಂಡು ದಂಡ ಕಟ್ಟುವಂತಾಗಿದೆ. ದಂಡ ವಸೂಲಿ ನೆಪದಲ್ಲಿ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ” ಎಂಬುದು ಇಲ್ಲಿಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ಆಟೋ ಚಾಲಕರು ಹಾಗೂ ಕೆಲವು ವಾಹನ ಸವರಾರು ಈ ದಿನ.ಕಾಮ್ನೊಂದಿಗೆ ಮಾತನಾಡಿ, ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಸತ್ಯವಾದ ವಿಷಯ. ಆದರೆ ನಮ್ಮ ಟ್ರಾಫಿಕ್ ಪೊಲೀಸರು ಸುಮ್ಮನೆ ಬಿಡುತ್ತಾರ. ನಾವು ಈ ಬಗ್ಗೆ ಮಾತನಾಡಿದರೆ ಈ ವಿಷಯ ಕುರಿತು ಮತ್ತೆ ಮುಂದಿನ ದಿನಗಳಲ್ಲಿ ನಮಗೆ ತೊಂದರೆಯಾಗಲಿದೆ” ಎಂದರು.
“ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರು ಇಷ್ಟೆಲ್ಲ ದಂಡ ಹಾಕುವುದರ ಜತೆಗೆ, ವಾಹನ ಪರಿಶೀಲನೆ ವೇಳೆಯಲ್ಲಿ ಕೆಲವು ಪೊಲೀಸರು ಹೆಲ್ಮೆಟ್ ಹಾಕಿಕೊಂಡು ಹೋಗುವ ವಾಹನ ಸವಾರರನ್ನೂ ರಸ್ತೆ ಅಥವಾ ಸಿಗ್ನಲ್ಗಳಲ್ಲಿ ಬಂದು ಹಿಡಿಯುತ್ತಾರೆ. ಕೆಲವು ಜಾಗಗಳಲ್ಲಿ ವಾಹನ ಸವಾರರ ಹಿಂದೆ ಮುಂದೆ ವಾಹನಗಳು ಇದ್ದಾಗ ಗಾಡಿ ನಿಲ್ಲಿಸಲು ಸಮಸ್ಯೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸುವಷ್ಟರಲ್ಲಿ ಹಿಂದಿನಿಂದ ಕೊರಳು ಪಟ್ಟಿಗೆ ಕೈ ಹಾಕಿ ಎಳೆಯುತ್ತಾರೆ. ಗಾಡಿ ರನ್ನಿಂಗ್ನಲ್ಲೇ ಇರುತ್ತೆ, ನಿಲ್ಲಿಸ್ಬೇಕು ಅಂತ ಹೋಗುತ್ತಿರುವಾಗಲೇ ಕೊರಳಪಟ್ಟಿ ಹಿಡಿದು ಅಪರಾಧಿಗಳೆಂಬಂತೆ ಹಿಡಿಯುತ್ತಾರೆ” ಎಂದರು.

“ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಬರುತ್ತಿರುತ್ತೇವೆ. ಕುಟುಂಬ ನಮ್ಮನ್ನು ನಂಬಿಕೊಂಡು ಇರುತ್ತಾರೆ. ಸಂಚಾರಿ ಪೊಲೀಸರು ಹಿಂದಿನಿಂದ ಹೀಗೆಳೆಯುವಾಗ ನಮಗೆ ಏನಾದರೂ ಸಮಸ್ಯೆಯಾದರೆ, ಇಲ್ಲವೇ ಅಪಘಾತ ಸಂಭವಿಸಿದರೆ ಏನು ಮಾಡಬೇಕು. ನಾವುಗಳು ಅಪರಾಧಿಗಳ ತಪ್ಪಿಸಿಕೊಂಡು ಹೋಗುವುದಕ್ಕೆ” ಎಂದು ಅಲವತ್ತುಕೊಂಡರು.
“ಇಷ್ಟೆಲ್ಲಾ ಸಮಸ್ಯೆ ಜತೆಗೆ ನಗರದದಲ್ಲಿ ಟ್ರಾಫಿಕ್ ಪೊಲೀಸರು ಕೆಲವಷ್ಟು ಒಳ್ಳೆಯ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ರೀತಿ ಹೀಗೆ ಅಪಾಯ ಮಾಡುವ ಪೊಲೀಸರು, ನಮ್ಮನ್ನು ನಂಬಿರುವ ಕುಟುಂಬವಿದೆ ಎಂಬುದನ್ನೂ ಯೋಚಿಸಬೇಕು. ಅಂತಹ ಪೊಲೀಸರಿಗೆ ಇಲಾಖೆಯವರು ಸೂಕ್ತ ಮಾಹಿತಿ ನೀಡಬೇಕು” ಎಂದರು.
“ಇದಲ್ಲದೆ ನಗರದ ಹೊಳೆ ಸ್ಟಾಪ್ ಸಿಗ್ನಲ್ ಗೋಪಿ ವೃತ್ತ ಸಿಗ್ನಲ್ ಹಾಗೂ ಕೆಇಬಿ ವೃತ್ತದ ಸಿಗ್ನಲ್ ಇಲ್ಲೆಲ್ಲ ಅವೈಜ್ಞಾನಿಕವಾಗಿದೆ. ಅಲ್ಲದೆ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಫ್ಲೈ ಓವರ್ ಆಗಿದೆ. ಇಲ್ಲಿಗೆ ಸಿಗ್ನಲ್ ಅವಶ್ಯಕತೆ ಇದೆ. ಆದರೆ ಇಲ್ಲಿಗೆ ಸಿಗ್ನಲ್ ವ್ಯವಸ್ಥೆ ಮಾಡಿಲ್ಲ. ನಗರದ ಅನೇಕ ಸಿಗ್ನಲ್ಗಳಲ್ಲಿ ಸೆಕೆಂಡ್ ತೋರಿಸದೆ ನಿತ್ಯ ವಾಹನಗಳ ಮೇಲೆ ಕೇಸ್ ಬೀಳುತ್ತಿದೆ” ಎಂದು ದೂರಿದರು.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ನಗರದಲ್ಲಿ ಬಹಳಷ್ಟು ಒಳ್ಳೆಯ ಕೆಲಗಳನ್ನೂ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ವಿಚಾರದಲ್ಲಿ ಒಳ್ಳೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂಬದು ವಾಹನ ಸವರಾರು ಹಾಗೂ ಸಾರ್ವಜನಿಕರ ಪ್ರಶಂಸೆಯಾಗಿದೆ.
ಜತೆಗೆ ಸಾರ್ವಜನಿಕರು, ಪ್ರಯಾಣಿಕರು, ಎಲ್ಲ ಟ್ರಾಫಿಕ್ ಸಮಸ್ಯೆಗೂ ಪೊಲೀಸ್ ಇಲಾಖೆಯೇ ನೇರ ಕಾರಣವೆಂದು ದೂಷಣೆ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಜಾಗೃತಿ ಜತೆಗೆ ಪ್ರಯಾಣಿಕರಿಗೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನೂ ಕೂಡಾ ಆಲಿಸಿ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಸ್ನೇಹಮಯಿ ಟ್ರಾಫಿಕ್ ಪೊಲೀಸ್ ಆಗಿ ಸೂಕ್ಷ್ಮ ಸಮಸ್ಯೆಗಳಿಗೆ ಮತ್ತಷ್ಟು ಸಹಾಯ ನೀಡುವ ಮೂಲಕ ಸಾರ್ವಜನಿಕರ ಹಾಗೂ ವಾಹನ ಸವಾರರ ಮನಸ್ಸನ್ನು ಗೆಲ್ಲಬೇಕಿದೆ.

ಜನರೆ ಮುಂದೆ ಬಂದು ಟ್ರಾಫಿಕ್ ಹಾಗೂ ಪೊಲೀಸ್ ಇಲಾಖೆ ಬಗ್ಗೆ ಹೆಮ್ಮೆ ಧೈರ್ಯದಿಂದ ಮಾತಾಡುವಷ್ಟು ಮಟ್ಟಿಗೆ ಇಲಾಖೆ ಈಗಿನ ದಿನಗಳಲ್ಲಿ ಅರಿವು ಮೂಡಿಸುತ್ತಿರುವ ಕೆಲಸದ ಜತೆಗೆ ಮತ್ತಷ್ಟು ಸ್ನೇಹಮಯಿಯಾಗಿ ಸ್ಪಂದಿಸಬೇಕಿದೆ.
ಅವೈಜ್ಞಾನಿಕವಾಗಿ ಅಳವಡಿಸಿರುವ ಸಿಗ್ನಲ್ಗಳ ಕುರಿತು ಆರ್ಟಿಒ ಅಧಿಕಾರಿಗಳೂ ಕೂಡಾ ಇತ್ತಕಡೆ ಗಮನಹರಿಸಿ ವಾಹನಸವಾರರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕಿದೆ.
ದಂಡ ವಸೂಲಿ ಮಾಡುವುದಷ್ಟೇ ಇಲಾಖೆಯ ಕೆಲಸವಾಗದಿರಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸೂಕ್ತ ರೀತಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆಯಾಗುವಂತೆ ಮಾಡಬೇಕಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.
ದಂಡ ಕಟ್ಟಿಸಿಕೊಳ್ಳುವ ಇನ್ನೊಂದು ವಿಧಾನ ಹಿಂದೆ ನಮಗೆ ಸಿಗ್ನಲ್ನಲ್ಲಿ ಸೆಕೆಂಡ್ ಇತ್ತು ಇಗ ಯಾಕೇ ತೆಗೆದ್ದಿದ್ದಾರೆ ಅದನ್ನು ಅಳವಡಿಸಿ