ಬಿಜೆಪಿ ನಾಯಕರು ಭೂ ಮಾಲೀಕ ಪಕ್ಷದವರು. ಹಿಂದಿನಿಂದಲೂ ಅವರು ಗೇಣಿದಾರರ ಪರ ಇರಲಿಲ್ಲ. ಅದೇ ರೀತಿ, ಶೋಷಿತರ ಪರ ಬಿಜೆಪಿ ಧ್ವನಿ ಆಗಿರಲಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮುಂಬಾರು ಹಾಗೂ ಎಂ ಗುಡ್ಡೆಕೊಪ್ಪ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
“ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷದ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರಿಂದ, ಬಡವರನ್ನು ಮುಖ್ಯ ವಾಹಿನಿಗೆ ಬಾರದಂತೆ ತಡೆಯುವುದು ಅವರ ಉದ್ದೇಶ” ಎಂದರು.
“ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರೈತರ ನಾಡಿ ಮಿಡಿತಕ್ಕೆ ಹತ್ತಿರವಿದ್ದರು. ರೈತರ ಹಿತ ಕಾಯಲು ಬದ್ದರಾಗಿದ್ದರು. ಅದೇ ದಾರಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜ್ ಅವರಿಗೆ ಮತ ನೀಡಿ ಬೆಂಬಲಿಸಬೇಕಿದೆ” ಎಂದರು.
“ದೇಶದಲ್ಲಿ ಜಾತಿ- ಧರ್ಮದ ರಾಜಕಾರಣಕ್ಕೆ ತಡೆ ಹಿಡಿಯಬೇಕು. ಎಲ್ಲ ಧರ್ಮ, ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯವನ್ನು ವಿಭಾಗ ಮಾಡಲು ಬಿಜೆಪಿ ನಾಯಕರು ಸಂಚು ಹೂಡುತ್ತಿದ್ದಾರೆ. ಇದು ಆಗಬಾರದೆಂರೆ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜ್ ಕುಮಾರ್ ಅವರಿಗೆ ಮತ ನೀಡಬೇಕು” ಎಂದು ಕರೆ ನೀಡಿದರು.
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, “ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಣ್ಣು ಮಕ್ಕಳ ಕಣ್ಣೀರು ಒರೆಸಲು ದಾರಿ ದೀಪವಾಗಿವೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದ್ದರಿಂದ ಅನೇಕ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಬಡವರ ಬದುಕಿಗೆ ದಾರಿ ದೀಪವಾಗಿದ್ದರು. ಅದೇ ಹಾದಿಯಲ್ಲಿ ನಾನೂ ಕೂಡ ಸಾಗುತ್ತೇನೆ” ಎಂದರು.
ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಬಿಜೆಪಿ ಸಂಸದ ರಾಘವೇಂದ್ರ ಅವರನ್ನು ಗೆಲ್ಲಿಸಿ ದಶಕಗಳ ಕಾಲ ಅಧಿಕಾರ ನೀಡಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ಅವರ ಕೊಡುಗೆ ಏನು? ಇಲ್ಲಿ ಸಂಸದ ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳು ಸ್ವಹಿತಕ್ಕೆ ಮಾತ್ರ ಸೀಮಿತ ಆಗಿವೆ. ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ” ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, “ಜನಸಾಮಾನ್ಯರು ಚುನಾವಣೆಯಲ್ಲಿ ನೀಡಿದ ಮತದಿಂದ ದೇಶದ ಭವಿಷ್ಯ ಬದಲಾಗಲಿದೆ. ಆದರೆ, ಇಲ್ಲಿ ತಾಳ್ಮೆಯಿಂದ ಯೋಚಿಸಿ ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಕೇವಲ ಪ್ರಧಾನಿ ಮೋದಿಯವರ ಜಪ ಮಾಡುತ್ತಿದ್ದಾರೆ” ಎಂದು ದೂರಿದರು.
“ಬಿಜೆಪಿ ಆಡಳಿತದಿಂದ ದೇಶದ ಅನೇಕ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಇದರಿಂದ, ಸಹಸ್ರಾರು ಬಡ ಕುಟುಂಬಗಳು ಬೀದಿಗೆ ಬಂದಿವೆ. ರಾಜ್ಯದಲ್ಲಿ ಹಸಿದ ಹೊಟ್ಟೆಗಳು ಉಪವಾಸದಿಂದ ಕೂರಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿದ ಗ್ಯಾರಂಟಿ ಯೋಜನೆಗಳು ಅಶಕ್ತ ಕುಟುಂಬಗಳಿಗೆ ಆಸರೆಯಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮತದಾರರಿಗೆ ಆಮೀಷ; ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜ ಕುಮಾರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ವೇತ ಬಂಡಿ, ಅನಿತಾ ಕುಮಾರಿ ಸೇರಿದಂತೆ ಕಾರ್ಯಕರ್ತರು ಇದ್ದರು.
