ಸಾಮಾಜಿಕ ನ್ಯಾಯಕ್ಕೆ ಬದ್ಧವಿರುವ ಮುಖ್ಯಮಂತ್ರಿ ಹಾಗೂ ಸರ್ಕಾರ ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ(ಜಾತಿ ಜನಗಣತಿ) ಸಮೀಕ್ಷೆ ವರದಿ ಜಾರಿಗೊಳ್ಳಲಿದೆ. ಆ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ದೊರೆತಿದೆ ಎಂದು ವರದಿ ರೂಪಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮೀಕ್ಷೆ ನಿಖರವಾಗಿ ನಡೆದಿಲ್ಲ. ವೈಜ್ಞಾನಿಕವೂ ಅಲ್ಲವೆಂದು ಕೆಲವರು ಆರೋಪಿಸುತ್ತಾರೆ. ನಿಖರ ಪದಕ್ಕೆ ಶೇ.100ರಷ್ಟು ಎಂಬ ಅರ್ಥವಿದೆ. ಅಷ್ಟು ಹೇಳಲಿಕ್ಕೆ ಕಷ್ಟವಾಗಬಹುದು. ಆದರೆ ಸಮೀಕ್ಷೆಯ ವಿಧಾನವನ್ನು ಸುಪ್ರೀಂಕೋರ್ಟ್ನ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ರೂಪಿಸಲಾಗಿತ್ತು. ಹೀಗಾಗಿ ಅದು ವೈಜ್ಞಾನಿಕ ಸಮೀಕ್ಷೆ” ಎಂದು ಹೇಳಿದರು.
“ವರದಿ ಸಿದ್ಧಪಡಿಸುವಾಗ ಆಂತರಿಕವಾಗಿ, ಬಹಿರಂಗವಾಗಿ ಸರ್ಕಾರ ಮಾತ್ರವಲ್ಲ, ಯಾರ ಕಡೆಯಿಂದಲೂ ಯಾವುದೇ ಹಸ್ತಕ್ಷೇಪವಾಗಿಲ್ಲವೆಂದು ಸ್ಪಷ್ಟಪಡಿಸಿದ ಕಾಂತರಾಜ್, ಸರ್ಕಾರಗಳು ಬದಲಾಗಿದ್ದು, ವರದಿ ಜಾರಿಗೊಳ್ಳಲು ವಿಳಂಬ ಆಗಿರಬಹುದು” ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
“ಕೆಲವು ಸಮುದಾಯಗಳು ನಿರ್ದಿಷ್ಟ ಸಂಖ್ಯೆಯನ್ನು ಕ್ಲೇಮ್ ಮಾಡುತ್ತಿರುವುದು ನಮಗೆ(ಆಯೋಗಕ್ಕೆ) ಗೊತ್ತಿಲ್ಲ. ಇವತ್ತು ಬಂದಿರುವ ಅಂಕಿ–ಅಂಶವನ್ನು ಅವರು ಒಪ್ಪಿಕೊಳ್ಳಬೇಕಾಗುತ್ತದೆ. ಅವರ ನಿರೀಕ್ಷೆಗೆ ಅನುಗುಣವಾಗಿ ಬಂದಿಲ್ಲವೆಂದರೆ ಆ ನಿರೀಕ್ಷೆ ಯಾವ ಮಾನದಂಡದ ಮೇಲೆ ರೂಪುಗೊಂಡಿತ್ತು ಎಂಬುದೂ ಇಲ್ಲಿ ಪ್ರಶ್ನೆಯಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಇಂದಿನ ಸರಕಾರಗಳು ವಾಟ್ಸಾಪ್ ಮೂಲಕ ಆಡಳಿತ ನಡೆಸುತ್ತಿದೆ – ಪಂಜು ಗಂಗೊಳ್ಳಿ
“ಸಮಾಜದಿಂದ ಜಾತಿ ಆಧಾರಿತ ತಾರತಮ್ಯ ಹೊಡೆದೋಡಿಸಿ ಸಮಾನತೆ ತರಬೇಕೆಂಬುದು ಸಂವಿಧಾನದ ಆಶಯ. ಆದರೆ ಜಾತಿಯೇ ಅದಕ್ಕೆ ದೊಡ್ಡ ಶತ್ರು. ಆ ಶತ್ರುವಿನ ಬಲಾಬಲ ಅರಿಯಲು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೊಳಗೊಂಡ ಜಾತಿಯ ಗಣತಿ ಅಗತ್ಯ” ಎಂದು ಪ್ರತಿಪಾದಿಸಿದರು.
“ಸಮಾಜಕ್ಕೆ ಆರೋಗ್ಯ ಸರಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಆಗಾಗ ಇಂತಹ ಗಣತಿ, ಸಮೀಕ್ಷೆಗಳ ಮಾಡಬೇಕು. ಕಾಯಿಲೆ ಗುರುತಿಸಿ ತಕ್ಕ ಔಷಧಿ ಕೊಡಲು ಅದರಿಂದ ನೆರವಾಗಲಿದೆ” ಎಂದು ಹೇಳಿದರು.