ಸಾಗರದ ನಗರಸಭೆಯಲ್ಲಿ ದಲಿತ ಮಹಿಳೆಯನ್ನು ‘ಅಪರಾಧಿ’ ಎಂದು ಅವಮಾನ ಮಾಡಿರುವ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಶಿವಮೊಗ್ಗ ಕಾಂಗ್ರೆಸ್ ಮಹಿಳಾ ಘಟಕ ಎಚ್ಚರಿಕೆ ನೀಡಿದೆ.
ಅಪಮಾನ ಮಾಡಲಾಗಿರುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಮಹಿಳೆ ಘಟಕದ ಪದಾಧಿಕಾರಿಗಳು ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಮಹಿಳೆ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿ, ಸಾಗರದ ನಗರ ಸಭೆ ಅಧ್ಯಕ್ಷರ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಕಳೆದ ಬಾರಿಯೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಲಾಗಿತ್ತು. ಈ ಬಾರಿಯೂ ಮೀಸಲಾತಿ ಸಾಮಾನ್ಯರಿಗೆ ಪ್ರಕಟಿಸಿದ ಕಾರಣ ಮೀಸಲಾತಿ ಸರಿಯಿಲ್ಲವೆಂದು ಆರೋಪಿಸಿ ನ್ಯಾಯಾಲಯಕ್ಕೆ ಹೋಗಲಾಗಿತ್ತು. ಬಿಸಿಎಂ, ಬಿಸಿಎಂ ಬಿ, ಎಸ್ ಎಸ್ಟಿ ಗೆ ಮೀಸಲಾತಿ ಇದುವರೆಗೂ ಪ್ರಕಟವಾಗದ ಕಾರಣ ಎಸ್ಟಿ ಮಹಿಳಾ ಸದಸ್ಯೆ ನ್ಯಾಯಾಲಯಕ್ಕೆ ಹೋಗಿ ಮೀಸಲಾತಿಯನ್ನ ಪ್ರಶ್ನಿಸಿದ್ದರು. ಅ.10 ರಂದು ನಡೆದ ಸಾಗರದ ನಗರ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಭಾಗಿಯಾಗಿದ್ದರು. ಲಲಿತಮ್ಮರಿಗೆ ನಿಕೃಷ್ಟವಾಗಿ ಮೇಘರಾಜ್ ಮಾತನಾಡಿದ್ದಾರೆ. ದಲಿತ ಮಹಿಳೆಗೆ ಅವಾಚ್ಯವಾಗಿ ಮಾತನಾಡಿ ಸಭೆಯಿಂದ ಹೊರಹೋಗಿ ಎಂದಿದ್ದಾರೆ ಎಂದು ತಿಳಿಸಿದರು.
ಟಿ.ಡಿ ಮೇಘರಾಜ್ ಕಾನೂನಿನ ಜಡ್ಜಾ? ಸಮಾನತೆಯಲ್ಲಿ ಲಲಿತಮ್ಮ ನ್ಯಾಯಾಲಯಕ್ಕೆ ಹೋದರೆ ನೀವು ಅವಮಾನಿಸುತ್ತೀರಾ ಎಂದು ಸವಾಲು ಎಸೆದ ಅವರು,. ಮಹಿಳೆಯರಿಗೆ ಗೌರವ ಕೊಡುವ ಸಂಸ್ಕೃತಿ ಇಲ್ಲದ ಬಿಜೆಪಿ ನಾಯಕರು, ಯಾವ ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುತ್ತಾರೆ ಎಂದು ದೂರಿದರು.
ಲಲಿತಮ್ಮನಿಗೆ ಮಾಡಿರುವ ಅಪಮಾನಕ್ಕೆ ಮೇಘರಾಜ್ ಕ್ಷಮೆ ಕೇಳಬೇಕು. ಮೂರು ಬಾರಿ ಸಾಗರದಲ್ಲಿ ಆಯ್ಕೆಯಾಗಿ ಒಮ್ಮೆ ಅಧ್ಯಕ್ಷರಾಗಿದ್ದಾರೆ. ಮೂರು ಬಾರಿ ಸದಸ್ಯರಾದ ಲಲಿತಮ್ಮರಿಗೆ ಅವಮಾನಿಸಿದ ಮೇಘರಾಜ್ ಜಿಲ್ಲಾ ಬಿಜೆಪಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಕ್ಷಮೆಯಾಚಿಸದೇ ಇದ್ದರೆ, ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
