ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಗರ ಆಹಾರ ಇಲಾಖೆ ಮತ್ತು ಆಹಾರ ಗೋದಾಮಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಆಹಾರ ಕಛೇರಿ ಮುಂದೆ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಧರಣಿ ನಡೆಸಿದ್ದು, ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಭದ್ರಾವತಿಯ ಆಹಾರ ಇಲಾಖೆಯಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳ ಕುರಿತು ಬರೆಯುವ ದೂರುಗಳಿಗೆ ಯಾವುದೇ ಪ್ರತಿಕ್ರಿಯ ನೀಡದೆ, ಅರ್ಜಿಯನ್ನು ತಮ್ಮ ಮನಸ್ಸಿಗೆ ಬಂದಂತೆ ವಿಲೇವಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸೇವೆಯಲ್ಲಿ ಅಶಿಸ್ತು, ದುರ್ವರ್ತನೆ, ಅಕ್ರಮ ಮಾಡುವವರ ಪರ ವರದಿ ನೀಡುವುದು, ಇವರು ಜಿಲ್ಲಾ ಉಪನಿರ್ದೇಶಕರ ಅರಿವಿಗೂ ಬರದಂತೆ ಜಿಲ್ಲೆಯ ಹಲವು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಅನಾಮಧೇಯ ದೂರು ಬರೆದು ಇವರೇ ಉತ್ತರ ಬರೆಯಲು ಅಂಗಡಿ ಮಾಲೀಕರಿಂದ ಸಹಕಾರ ಕೋರುವ ಕುರಿತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ದೂರು ಕೇಳಿ ಬರತೊಡಗಿದೆ. ಇದಕ್ಕೆ ಹಲವು ವರ್ಷಗಳಿಂದ ಕೇಂದ್ರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಇವರನ್ನು ಇಲಾಖಾ ತನಿಖೆ ನಡೆಸಿ ಸೇವೆಯಿಂದ ವಜಾಮಾಡಬೇಕು ಎಂಬುದು ನಮ್ಮ ಬೇಡಿಕೆ ಎಂದರು.
ಇತ್ತೀಚೆಗೆ ಕಾಗದ ನಗರದ ತಿರುಮಲ ನ್ಯಾಯಬೆಲೆ ಅಂಗಡಿ ಮಾಲೀಕರು ಒಂದು ಪ್ರಾಧಿಕಾರದಡಿ ಎರಡೆರಡು ಕಡೆ ಪ್ರದೇಶದಲ್ಲಿ ಅಕ್ರಮವಾಗಿ 5 ವರ್ಷಗಳಿಂದ ಮಳಿಗೆ ತೆರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಕಾಗದ ನಗರದ ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರೆ ಹೆಚ್ಚಿರುವ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಸಮಯಕ್ಕೆ ಸರಿಯಾಗಿ ತೆರೆಯದೆ ತಿಂಗಳಲ್ಲಿ ಕೇವಲ ಮೂರು ದಿನ ಪಡಿತರ ನೀಡುತ್ತಿದ್ದು ಬಹಳ ಸಮಸ್ಯೆಯಾಗುತ್ತಿತ್ತು.
ಇದರ ವಿರುದ್ಧ ಹಲವು ಬಾರಿ ಅಧಿಕಾರಿಗಳ ಬಳಿ ಮಾತನಾಡಿದ್ದು, ಅಧಿಕಾರಿಗಳ ಮಾತಿಗೂ ನ್ಯಾಯಬೆಲೆ ಅಂಗಡಿಯ ಮಾಲೀಕರು ಗೌರವ ನೀಡುತ್ತಿಲ್ಲ. ಆದರೆ ಅಂಗಡಿ ಮಾಲೀಕರು ಪದೆ ಪದೆ ಇಂತಹದ್ದೆ ಮನಸ್ಥಿತಿ ಹೊಂದಿದವರಾಗಿರುತ್ತಾರೆ. ಕೇವಲ 10,000 ರೂ.ಗಳಷ್ಟು ದಂಡ ವಿಧಿಸಿದ್ದು, ಅಕ್ರಮವನ್ನು ಮುಚ್ಚಿಡುವ ಕ್ರಮವಾಗಿರುತ್ತದೆ. ನ್ಯಾಯಬೆಲೆ ಅಂಗಡಿಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ನಮ್ಮ ಆಗ್ರಹವಾಗಿದೆ. ಅಂಗಡಿಯನ್ನು ಸಂಪೂರ್ಣವಾಗಿ ರದ್ದು ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಕಳೆದ ಏಪ್ರಿಲ್ ಮಾಹೆಯಲ್ಲಿ ನ್ಯಾಯಬೆಲೆ ಅಂಗಡಿಗೆ ಹೋಗುವ ಪಡಿತರ ಧಾನ್ಯವು ಮೂಲ ರಶೀದಿಗಿಂತ 83 ಚೀಲಗಳ ಅಕ್ಕಿ ಕಣ್ಮರೆಯಾಗಿರುವ ಕುರಿತು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟರನ್ನು ರಕ್ಷಿಸಲಾಗುತ್ತಿದೆ. ಈ ಪ್ರಕರಣದ ವಿರುದ್ಧ ಗೋದಾಮಿನ ನಿರ್ವಾಹಕ ಮತ್ತು ಟೆಂಡರ್ದಾರರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಲು ತುರ್ತು ಕ್ರಮ ಆಗಬೇಕು ಎಂದು ಶಶಿಕುಮಾರ್ ಗೌಡ ತಿಳಿಸಿದರು.
ಭದ್ರಾವತಿ ಸಿದ್ದಾಪುರ ತಾಂಡದ ಯೋಗೀಶ್ ನ್ಯಾಯಬೆಲೆ ಅಂಗಡಿಯಿಂದ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಣೆಯಾಗಿದ್ದು, ಸಾರ್ವಜನಿಕರೆ ಹಿಡಿದು ಪೊಲೀಸ್ ಇಲಾಖೆಗೆ ಒಪ್ಪಿಸಿದ್ದಾರೆ. ಪ್ರಕರಣ ನ್ಯಾಯಲಯದಲ್ಲಿದೆ ಮತ್ತೆ ಆಪಾದಿತ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅಂಗಡಿ ನಡೆಸಲು ನೀವು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ನ್ಯಾಯಲಯದಲ್ಲಿ ನಿಮ್ಮ ಇಲಾಖೆಯ ವಕೀಲರಿಂದ ಈ ಬಗ್ಗೆ ನೀವು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದೆ, ಅಕ್ರಮ ಮಾಡಿದವರೆ ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು ಅಕ್ರಮಗೈದವರಿಗೆ ಸುಲಭವಾಗಿ ತಡೆಯಾಜ್ಞೆ ಸಿಗುತ್ತಿರುವ ಬಗ್ಗೆ ನೀವುಗಳು (ಅಧಿಕಾರಿಗಳು) ಪರಿಶೀಲನೆ ನಡೆಸಬೇಕಾಗಿದೆ. ಈ ವಿಚಾರವನ್ನು ಕಳೆದ ಡಿಸೆಂಬರ್ನಲ್ಲಿ ಉಪನಿರ್ದೇಶಕರಿಗೆ ಸೂಕ್ತ ದಾಖಲೆ ಮೂಲಕ ಮನವಿ ಮಾಡಿದ್ದರೂ ಇಲ್ಲಿವರೆಗೂ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಹಲವು ಬಾರಿ ಅಪರಾಧ ಎಸಗಿರುವ ನ್ಯಾಯಬೆಲೆ ಅಂಗಡಿಯನ್ನು ರದ್ದುಪಡಿಸಬೇಕೆಂಬುದು ಸೇರಿದಂತೆ ನಮ್ಮ ಬೇಡಿಕೆಗೆ ಸೂಕ್ತ ರೀತಿಯಲ್ಲಿ ನೀವು ಸ್ಪಂದಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಘ-ಸಂಸ್ಥೆ, ಸಾರ್ವಜನಿಕರೊಡಗೂಡಿ ನಿರಂತರ ಪ್ರತಿಭಟನೆ ಮಾಡಬೇಕಾಗುತ್ತದೆಂದು ಸಹಾಯಕ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.