ಸರ್ಕಾರದಲ್ಲಿ ತನ್ನ ಭಾಗ್ಯಗಳನ್ನ ಪೂರ್ತಿ ಮಾಡಲು ಹಣವಿಲ್ಲದ ಕಾರಣ ಪೊಲೀಸರಿಗೆ ಟಾರ್ಗೆಟ್ ನೀಡಿದೆ. ಜನರಿಂದ ಹಣ ವಸೂಲಿ ಮಾಡಲು ಪೊಲೀಸರನ್ನು ಬಿಟ್ಟಿದ್ದಾರೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ ಬಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ಸರ್ಕಾರದ ವಿರುದಧ ನವೆಂಬರ್ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಮಾಜಿ ಶಾಸಕ ಕಡಿದಾಲ್ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. “ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಹಿಂದೆ ಸೌಲತ್ತುಗಳನ್ನು ನೀಡಿದ್ದು, ಇದೀಗ ಸರ್ಕಾರ ಇದನ್ನೂ ದಂಧೆಯನ್ನಾಗಿ ಮಾಡಿಕೊಂಡಿದೆ” ಎಂದು ಟೀಕಿಸಿದರು.
“ಸಾರ್ವಜನಿಕರನ್ನು ಬದಕಲು ಬಿಡಿ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬೇಡಿ. ಸರ್ಕಾರಕ್ಕೆ ಎಲ್ಲೋ ಒಂದು ಭಯ ಕಾಡುತ್ತಿರುವ ಕಾರಣ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಪ್ರಮುಖವಾಗಿ ತೀವ್ರ ಬರಗಾಲ ರೈತರು ಮತ್ತು ಜನರನ್ನು ಕಿತ್ತು ತಿನ್ನುತ್ತಿದ್ದು, ಇಂತಹ ಸಮಯದಲ್ಲಿ ಸರ್ಕಾರದ ಕೆಲಸಗಳು ಕೇವಲ ಪ್ರೆಸ್ ನೋಟ್ನಲ್ಲಿ ಮಾತ್ರ ಕಾಣ ಸಿಗುತ್ತಿವೆ” ಎಂದು ಆರೋಪಿಸಿದರು.
“ಈ ಮೊದಲು ರೈತರಿಗೆ ವಿದ್ಯುತ್ ಸಂಪರ್ಕ ಉಚಿತವಾಗಿತ್ತು. ಆದರೆ ಈಗ ರೈತರು ಇದಕ್ಕಾಗಿ ₹3.5 ರಿಂದ ₹4 ಲಕ್ಷದವರೆಗೂ ಖರ್ಚು ಮಾಡಬೇಕಾಗಿದೆ. ಇದು ಬರಗಾಲದ ಸಮಯದಲ್ಲಿ ರೈತರಿಗೆ ಸರ್ಕಾರ ಕೊಟ್ಟಿರುವ ಕೊಡುಗೆ ಆಗಿದೆ” ಎಂದು ವ್ಯಂಗ್ಯವಾಡಿದ್ದು, ಇದಕ್ಕೆ ಸರ್ಕಾರ ನೀಡುತ್ತಿರುವ ಸಬೂಬು ಏನೆಂದರೆ ʼಮುಂದಿನ ದಿನಗಳಲ್ಲಿ ಸೋಲಾರ್ ವ್ಯವಸ್ಥೆ ಮಾಡುವವರೆಗೆ ಇದು ಇರತ್ತೆʼ ಎನ್ನುತ್ತಿದೆ” ಎಂದರು.
ಈ ಸಂದರ್ಭದಲ್ಲಿ ದೀಪಕ್ ಸಿಂಗ್, ಗೋವಿಂದಪ್ಪ ಸೇರಿದಂತೆ ಇತರರು ಇದ್ದರು.