ಶಿವಮೊಗ್ಗ ಶಾಸಕ ಚನ್ನಬಸಪ್ಪನವರ ಹೇಳಿಕೆ ಗಮನಿಸಿದ್ದೇನೆ. ಯಾರೇ ಈ ಕೃತ್ಯ ಮಾಡಿದರೂ ಅಮಾನವೀಯ, ಖಂಡನೀಯ. ಹಸುವು ಗೋಮಾತೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಶಾಸಕ ಚೆನ್ನಿಯವರೆ ನೀವೆಷ್ಟು ಗೋಶಾಲೆಗಳಿಗೆ ಅನುದಾನ ಕೊಟ್ಟಿದ್ದೀರೆಂದು ಗಂಡಸ್ತನದಿಂದ ಹೇಳಿ ಎಂದು ಎಚ್ ಸಿ ಯೋಗೇಶ್ ಸವಾಲು ಹಾಕಿದರು.
ಶಿವಮೊಗ್ಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಚಾಮರಾಜಪೇಟೆ ಪ್ರಕರಣದ ಕುರಿತು ಶಾಸಕ ಚನ್ನಬಸಪ್ಪನವರ ಹೇಳಿಕೆಗೆ ತಿರುಗೇಟು ನೀಡಿ ಮಾತಾಡಿದರು.
“ಪಶು ಇಲಾಖೆಯಿಂದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸರ್ಕಾರದಿಂದ 30 ಅಂಶದ ಕಾರ್ಯಕ್ರಮಗಳೂ ನಡೆಯುತ್ತಿವೆ. ಶಾಸಕ ಚೆನ್ನಿಯವರೇ, ಪಶು ಇಲಾಖೆಯ ರಿವ್ಯೂ ಮೀಟಿಂಗ್ ಎಷ್ಟು ಮಾಡಿದ್ದೀರಿ?. ಇದನ್ನು ನೀವು ಹೇಳಲೇಬೇಕು” ಎಂದು ತಾಕೀತು ಮಾಡಿದರು.
“ಶಿವಮೊಗ್ಗ ಪಾಲಿಕೆಯಿಂದ ಗೋಶಾಲೆಗೆ ₹50 ಲಕ್ಷ ಅನುದಾನ ಇಟ್ಟಿದ್ದು ನೆನಪಿಲ್ಲವೇ? ಶಾಂತಿನಗರದಲ್ಲಿ ಗುದ್ದಲಿಪೂಜೆ ಮಾಡಿದ್ದೀರಿ. ಗೋಶಾಲೆ ಆಗಿದೆಯಾ? ಪ್ರಪ್ರಥಮ ಗೋಶಾಲೆಗೆ ಜಾಗಕೊಟ್ಟಿದ್ದು, ಕಾಂಗ್ರೆಸ್ ಶಾಸಕ ಎಚ್ಎಂಸಿ, ಮತ್ತು ಕೆ ಬಿ ಪ್ರಸನ್ನ ಕುಮಾರ್ ಅನುದಾನ ನೀಡಿದ್ದಾರೆ” ಎಂದರು.
“ಈಶ್ವರಪ್ಪ, ಚೆನ್ನಿ ಎಷ್ಟು ಗೋಶಾಲೆಗಳಿಗೆ ಅವಕಾಶ ಕೊಟ್ಟಿದ್ದೀರಿ? ಹೊಸನಗರದ ಸರ್ಕಾರಿ ಗೋಶಾಲೆ ಮುಚ್ಚಿದೆ. ಈ ಶಾಲೆ ನಿರ್ಮಾಣವಾಗಿದ್ದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕಾಲದಲ್ಲಿ. ಆದರೂ ಯಾಕೆ ಮುಚ್ಚಿದೆ? ಹಸುವಿನ ಹೆಸರಲ್ಲಿ ಮತ ಎತ್ತೋದಷ್ಟೇನಾ?” ಎಂದು ಕಿಡಿಕಾರಿದರು.
“ಸರ್ಕಾರದ ವಿರುದ್ಧ ಮಾತನಾಡುತ್ತ ಕೆಟ್ಟದಾಗಿ ಮಾತನಾಡಿದ್ದಾರೆ ಶಾಸಕ ಚೆನ್ನಿ. 2 ಕೋಟಿ ಉದ್ಯೋಗ, ಜನಸಾಮಾನ್ಯರ ಖಾತೆಗೆ ₹15 ಲಕ್ಷ ಸೇರಿದಂತೆ ಹಲವು ಭರವಸೆ ಕೊಟ್ಟು ನಿಭಾಯಿಸದ ನಿಮ್ಮ ಪ್ರಧಾನಿ ಅಥವಾ ಬಿಜೆಪಿಗರು ಗಂಡಸರೇ? ಎಂದು ಪ್ರಶ್ನಿಸಿದ್ದಾರೆ.

“ಆಕಳ ಕೆಚ್ಚಲು ಪ್ರಕರಣದ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಆತ ಹುಚ್ಚನೇ ಇರಲಿ, ಸಾಯುವವರೆಗೆ ಜೈಲಲ್ಲಿ ಹಾಕಿ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ; ಮೂವರ ವಿರುದ್ಧ ಎಫ್ಐಆರ್ ದಾಖಲು
“ಇ-ಸ್ವತ್ತು ವಿಚಾರವಾಗಿ ಪ್ರತಿದಿನ ಪರಿಶೀಲನೆ ಮಾಡಿ. ಎಲ್ಲದಕ್ಕೂ ಇ-ಸ್ವತ್ತು ಅನಿವಾರ್ಯವಾಗಿದೆ. ಸಮಸ್ಯೆ ಕುರಿತು ಸಚಿವರ ಗಮನಕ್ಕೂ ತಂದಿದ್ದೇನೆ. ಆರೋಪಿತ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಕಾರ್ಪೊರೇಷನ್ ಇನ್ನೂ ದೊಡ್ಡದಾಗಲಿದೆ. ಕಾರ್ಪೊರೇಷನ್ ನಿರ್ಮಾಣವಾಗಿದ್ದೇ ಕಾಂಗ್ರೆಸ್ ಕಾಲದಲ್ಲಿ” ಎಂದು ತಿಳಿಸಿದರು.
ಶಿವಕುಮಾರ್, ವಿಶ್ವನಾಥ ಕಾಶಿ, ವಿಜಯಲಕ್ಷ್ಮಿ ಪಾಟೀಲ್, ಮಧುಸೂದನ್ ಬಾಲಾಜಿ, ಎಸ್ ಪಿ ಶೇಷಾದ್ರಿ ಸೇರಿದಂತೆ ಇತರರು ಇದ್ದರು.