ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಕುರಿತು ಒಂದು ಧರ್ಮವನ್ನು ಹಿಯಾಳಿಸಿ ಚಕ್ರವರ್ತಿ ಸೂಲಿಬೆಲೆ ಅವರು ಸಾರ್ವಜನಿಕವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಮುಖಂಡರು ಶಿವಮೊಗ್ಗ ಜಯನಗರ ಠಾಣೆ ಇನ್ಸ್ಪೆಕ್ಟರ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
“ಕರ್ನಾಟಕ ಸರ್ಕಾರವು ಈ ಬಾರಿಯ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸದರಿ ಪಟ್ಟಿಯಲ್ಲಿ ಮಾರ್ಚ್ 01ರ ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5.15ರವರೆಗೆ ನಿಗದಿಪಡಿಸಿದೆ. ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯು ಆರಂಭವಾಗುತ್ತಿದ್ದು, ಬೆಳಗಿನ ಸಮಯದಲ್ಲಿ ಸದರಿ ಪರೀಕ್ಷೆಯು ಇರುವ ಕಾರಣ ಈ ರೀತಿ ಸಮಯವನ್ನು ಬದಲಿಸಿದ್ದಾರೆ” ಎಂದು ಎನ್ಎಸ್ಯುಐ ಕಾರ್ಯಕರ್ತರು ತಿಳಿಸಿದ್ದಾರೆ.
“ಉಳಿದ ಎಲ್ಲ ಪರೀಕ್ಷೆಗಳು ಬೆಳಗಿನ ಸಮಯಕ್ಕೆ ನಿಗದಿಯಾಗಿದ್ದು, ಮಾರ್ಚ್ 1ರ ಶುಕ್ರವಾರದಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಕಾರಣ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ನಿಗದಿಪಡಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ ಸದರಿ ಪರೀಕ್ಷಾ ವೇಳಾಪಟ್ಟಿಯಲ್ಲಿ ದಿನಾಂಕ 1.03.2024ರ ಶುಕ್ರವಾರ ಪರೀಕ್ಷಾ ದಿನಕ್ಕೆ ನೋಡಿದ ತಕ್ಷಣ ಎದ್ದು ಕಾಣುವಂತೆ ಮಾಡಿ ಸದರಿ ವೇಳಾಪಟ್ಟಿಯ ಮೇಲುಭಾಗದಲ್ಲಿ ಇಂಗ್ಲೀಷ್ನಲ್ಲಿ “KARNATAKA STATE 10 STANDARD EXAM TIME TABLE RELEASED, ALL THE EXAM IN THE MORNING SESSION BUT FOR FRIDAY, WHY ?. OH.. TIME FOR NAMAZ?” ಎಂದು ಬರೆದಿದ್ದು, ಅಂತರ್ಧರ್ಮೀಯರಿಗೆ ನೋವಾಗುವಂತೆ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮುಸಲ್ಮಾನರ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರುವಂತೆ ಹಾಗೂ ಈ ಮೂಲಕ ಸರ್ಕಾರವೂ ಸಹ ಒಂದು ಧರ್ಮದ ಪರವಿದೆ ಎಂಬ ಭಾವನೆ ಬರುವಂತೆ ಮಾಡಿ ಸಮಾಜದ ಅಶಾಂತಿಗೆ ಕಾರಣೀಭೂತರಾಗಿದ್ದಾರೆ” ಎಂದು ಆರೋಪಿಸಿದರು.
ಸೂಲಿಬೆಲೆಯ ಇಂತಹ ಪೋಸ್ಟ್ನಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ ಕೋಮು ಗಲಭೆ ಆಗುವ ಸಾಧ್ಯತೆಗಳಿವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭೇದ-ಭಾವ ಉಂಟಾಗುತ್ತದೆ. ಹಾಗಾಗಿ ಸದರಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ರಾಜ್ಯಾಧ್ಯಕ್ಷರ ಮನೆಗೆ ಮುತ್ತಿಗೆಗೆ ಯತ್ನ; ಎನ್ಎಸ್ಯುಐ ಪ್ರತಿಭಟನೆ
“ಸದರಿ ಪೋಸ್ಟಿನ ನಕಲಿ ಕಾಪಿ ಮತ್ತು ಅದರ ಸಿಡಿಯನ್ನು ದೂರಿನೊಂದಿಗೆ ಲಗತ್ತಿಸಿಸಿದ್ದು, ಕೂಡಲೇ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷ ವಿಜಯ್ ಕುಮಾರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗಿರೀಶ್, ಚೇತನ್, ಹರ್ಷಿತ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.