ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಧೋರಣೆಯ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕಬ್ಬು ಬೆಳೆಗಾರರ ಸಂಘಕಟ್ಟಿ ಹೋರಾಟ ಮಾಡಲಾಯಿತು ಎಂದು ಹಸಿರುಸೇನೆ ರಾಜ್ಯಾಧ್ಯಕ್ಷ ಬಸವರಾಜಪ್ಪನವರು ಹೇಳಿದರು.
ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್ನಲ್ಲಿ ಬಹುಮುಖಿ ಶಿವಮೊಗ್ಗ ಇವರಿಂದ ಕೃಷಿ ಕ್ಷೇತ್ರದ ಪ್ರಸ್ತುತ ತಲ್ಲಣಗಳ ಬಗ್ಗೆ ಉಪನ್ಯಾಸ ನೀಡಿದ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪನವರು, “ಚಳವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ. ರುದ್ರಪ್ಪನವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘವನ್ನು ಕಟ್ಟಿ ಮುಂದೆ ಸುಂದರೇಶ್ ಹಾಗೂ ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ ಮುಂತಾದವರ ನಾಯಕತ್ವದಲ್ಲಿ ರೈತರು 1980 ಅಕ್ಟೋಬರ್ 2ರಂದು ಶಿವಮೊಗ್ಗದಲ್ಲಿ 25,000 ಮಂದಿ ರೈತರು ಸೇರಿ ಜೈಲುಬರೋ ಚಳವಳಿ ಕೈಗೊಂಡು ದೊಡ್ಡ ಹೋರಾಟವನ್ನು ಕೈಗೊಳ್ಳಲಾಯಿತು” ಎಂದರು.

“ಸರ್ಕಾರ ರೈತರ ಜಮೀನುಗಳ ಪಂಪ್ಸೆಟ್ಗಳಿಗೆ ವಿದ್ಯುತ್ ಬಿಲ್ ತೆಗೆಯಿತು. ಆಗ ನಡೆದ ದಲಿತ ರೈತ ಮತ್ತು ಭಾಷಾ ಚಳವಳಿಗಳಿಂದಾಗಿ 33ವರ್ಷಗಳಿಂದ ಇದ್ದ ಕಾಂಗ್ರೆಸ್ ಸರ್ಕಾರ ಬದಲಾಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂತು. ಇಂದು ರೈತರು ವರ್ಷವೊಂದಕ್ಕೆ 30 ಲಕ್ಷ ಕೋಟಿ ರೂಪಾಯಿ ಭೂಮಿಗೆ ಬಂಡವಾಳ ಹಾಕುತ್ತಾರೆ. ಪಂಪ್ಸೆಟ್ಗೆ ₹10 ಲಕ್ಷ ಕೋಟಿ ಬಂಡವಾಳ ಹಾಕುತ್ತಾರೆ” ಎಂದು ತಿಳಿಸಿದರು.
“ಪ್ರಸ್ತುತದಲ್ಲಿ ಹಾಲಿನ ಉತ್ಪಾದನೆ ಅಧಿಕವಾಗಿದ್ದು, ಹೆಚ್ಚಾದ ಹಾಲನ್ನು ಜನರಿಗೆ 50ಮಿ.ಲೀ ಕೊಟ್ಟು ₹2 ಹೆಚ್ಚು ಪಡೆಯಲಾಗುತ್ತಿದೆ. ಇದನ್ನೇ ವಿರೋಧ ಪಕ್ಷಗಳು ಬೆಲೆ ಏರಿಕೆ ಎಂದು ಬೊಬ್ಬೆ ಹೊಡೆಯುತ್ತವೆ. ಆ ಹಾಲನ್ನು ಚೆಲ್ಲಬೇಕಾಗಿತ್ತೇ?. ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವುದಕ್ಕೆ ಅವರು ಏಕಾಏಕಿ ₹150 ಜಾಸ್ತಿ ಮಾಡಿದ್ದಾರೆ. ಎಲ್ಲ ಕೈಗಾರಿಕಾ ವಸ್ತುಗಳ ಬೆಲೆ ಏರಿದೆ. ಆದರೆ ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ರೀತಿಯ ವರ್ತನೆ ಸರಿ ಅಲ್ಲ” ಎಂದು ಹೇಳಿದರು.
“ಕೃಷಿಯವರು ಶೇ.66ರಷ್ಟು ಉದ್ಯೋಗ ನೀಡಿದ್ದೇವೆ. ಕೈಗಾರಿಕೆಯವರು ಕೇವಲ ಶೇ.26ರಷ್ಟು ಉದ್ಯೋಗ ನೀಡಿದ್ದಾರೆ. ಕೃಷಿ ಉದ್ಯೋಗ ಲಾಭದಾಯಕವಾಗಿಲ್ಲ. ರೈತ ಬೆಳೆದ ತರಕಾರಿ ಹಣ್ಣುಗಳನ್ನು ರಸ್ತೆಯಲ್ಲಿ ಹಾಕಿ ಮಾರಲಾಗುತ್ತದೆ. ಆದರೆ ಕಾರ್ಖಾನೆ ಉತ್ಪಾದಿಸಿದ ಚಪ್ಪಲಿಗಳನ್ನು ಎಸಿ ರೂಂನಲ್ಲಿ ಮಾರಲಾಗುತ್ತದೆ. ಕೃಷಿ ಕಾಯಿದೆಗಳು ರೈತರ ವಿರೋಧಿಯಾಗಿದ್ದು, ಜಮೀನುಗಳನ್ನು ಕೈಗಾರಿಕೆಯವರು ಕೊಂಡುಕೊಳ್ಳಲು ಅವಕಾಶ ಕೊಟ್ಟರೆ ಭೂಮಿ ಬರಡಾಗುತ್ತದೆ. ಅನ್ನಕ್ಕಾಗಿ ದೇಶ ವಿದೇಶಗಳ ಕಡೆ ಕೈಚಾಚಬೇಕಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರಿ ಮಳೆ: ಇಂದು ಮಂಗಳೂರಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ
“ರೈತರು ಸಮಗ್ರ ಸಾವಯವ ಕೃಷಿ ಮಾಡಬೇಕು. ಸರ್ವ ಬೆಳೆ ಬೆಳೆಯಬೇಕು. ಹೈನುಗಾರಿಕೆ ಹಾಗೂ ಕೋಳಿ, ಕುರಿಗಳನ್ನು ಸಾಕಿ ರೈತ ಸ್ವಂತ ಕಾಲಮೇಲೆ ನಿಲ್ಲುವಂತಾಗಬೇಕು. ಕುವೆಂಪು ಹೇಳಿದಂತೆ ರೈತ ದೇಶದ ಬೆನ್ನೆಲುಬು. ಆದರೆ ಇಂದು ರಿಪೇರಿ ಆಗದ ಮಟ್ಟಿಗೆ ರೈತನ ಬೆನ್ನೆಲುಬು ಹಾಳಾಗಿದೆ. ರೈತ ಸರ್ಕಾರ ನಂಬದೆ ಸ್ವಂತ ಕಾಲ ಮೇಲೆ ನಿಲ್ಲಬೇಕು. ಈ ಸಬ್ಸಿಡಿ ಹೆಚ್ಚು ದಿನ ಮುಂದುವರೆಯುವುದಿಲ್ಲ. ಅದರ ಬದಲಿಗೆ ರೈತ ಸ್ವಾವಲಂಬಿಯಾಗಬೇಕು” ಎಂದರು.
ಈ ಸಂಧರ್ಭದಲ್ಲಿ ಹಲವಾರು ಪ್ರಗತಿಪರ ಚಿಂತಕರು, ಬಹುಮುಖಿ ಶಿವಮೊಗ್ಗ ತಂಡದವರು, ರೈತ ಮುಖಂಡರು ಇದ್ದರು.