ವಿದ್ಯಾರ್ಥಿನಿಯೊಬ್ಬಳ ಸಾವು ಪ್ರಕರಣ ಮತ್ತು ಅಪ್ರಾಪ್ತೆಯರಿಗೆ ಲೈಂಗಿಕ ಕುರುಕುಳ ನೀಡಿದ ಆರೋಪದ ಮೇಲೆ ಬಂಧಿಸಿದ್ದ ಆರೋಪಿ ಮಂಜಪ್ಪನಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಂಜಪ್ಪನನ್ನು ಜೂನ್ 12ರಂದು ಬಂಧಿಸಲಾಗಿತ್ತು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಮಹತ್ವದ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಆರೋಪಿ ಮಂಜಪ್ಪನಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ವನಶ್ರೀ ವಸತಿ ಶಾಲೆ ಸಂಸ್ಥಾಪಕ, ಮುಖ್ಯಸ್ಥ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
“ಮೃತ ವಿದ್ಯಾರ್ಥಿನಿ ʼತನ್ನ ಮೇಲೆ ದೌರ್ಜನ್ಯ ನಡೆದಿದೆʼ ಎಂದು ತನ್ನ ಸಹಪಾಠಿ ವಿದ್ಯಾರ್ಥಿಗಳಿಗೆ, ಶಾಲೆಯ ಬೇರಾವುದೇ ಸಿಬ್ಬಂದಿಗಳಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ. ಆಶ್ರಮದ ಇತರೆ ಮಕ್ಕಳು ಮೃತ ವಿದ್ಯಾರ್ಥಿನಿಯ ತಾಯಿಗೆ ಹೇಳಿದ್ದಾರೆಯೇ ಹೊರತು ಬೇರಾವ ಸಾಕ್ಷ್ಯಗಳೂ ಇಲ್ಲ. ವನಶ್ರೀ ಮಂಜಪ್ಪ ಮೃತ ವಿದ್ಯಾರ್ಥಿನಿಯ ಕೈ-ಕಾಲುಗಳಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆಯ ಸಹಪಾಠಿಗಳಿಗೆ ಹೇಳಿರುವುದಾಗಿ ಯಾವುದೇ ದಾಖಲೆಗಳಿಲ್ಲ” ಎಂದು ಆರೋಪಿ ಪರ ವಕೀಲ ಅಶೋಕ್ ಭಟ್ ತಮ್ಮ ವಾದ ಮಂಡಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನಡೆದ ಶಾಲಾ ಮುಖ್ಯಸ್ಥರ ಅಜಾಗರೂಕತೆ ವಿಚಾರವಾಗಿ ಮತ್ತು ಮೃತ ವಿದ್ಯಾರ್ಥಿನಿ ಸೇರಿದಂತೆ ಇನ್ನೋರ್ವ ವಿದ್ಯಾರ್ಥಿನಿಗೆ ಲೀಟರ್ಗಟ್ಟಲೆ ನೀರು ಕುಡಿಸಿದ ವಿಚಾರವಾಗಿ ಅಷ್ಟು ಬಲವಾದ ವಾದ ನಡೆಯಲಿಲ್ಲ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಾಲಕಿ ಸಾವು ಪ್ರಕರಣ; ವಸತಿ ಶಾಲೆ ಮಾಲೀಕನ ಬಂಧನ
ಮೃತ ಬಾಲಕಿಯ ತಾಯಿಯ ದೂರಿನನ್ವಯ ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್ 8, 12, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್ 3, ಐಪಿಸಿ ಸೆಕ್ಷನ್ 504, 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಆರೋಪಿ ವನಶ್ರೀ ಮಂಜಪ್ಪನಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.