ಪ್ರಭಾವಿ ಜನಪ್ರತಿನಿಧಿ ಮತ್ತು ಅವರ ಪತ್ನಿ ಸೇರಿದಂತೆ ಎಂಟು ಮಂದಿ ಹೆಸರು ಬರೆದು ಮಹಿಳೆ ಮತ್ತು ಆಕೆಯ ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಒಂದೂವರೆ ತಿಂಗಳ ಹಿಂದೆ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿ ಹಣಪಡೆದು ನಂತರ ಲೈಂಗಿಕವಾಗಿ ಬಳಿಸಿಕೊಂಡ ಆರೋಪದಿಂದ ತಲೆಮರೆಸಿಕೊಂಡಿದ್ದ ಚನ್ನಮುಂಬಾಪುರ ಮಂಜುನಾಥ್ ಎಂಬುವವರ ಪತ್ನಿ ಎಂದು ಗುರುತಿಸಲಾಗಿದ್ದು, ಮೂವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಜಿ ಶಾಸಕ ಮತ್ತು ಪತ್ನಿ, ಅತ್ಯಾಚಾರದ ಆರೋಪ ಮಾಡಿರುವ ನಾಗವೇಣಿ, ಆಶಾ ಸೇರಿದಂತೆ ಎಂಟು ಜನರ ಹೆಸರು ಕುರಿತ ಡೆತ್ನೋಟ್ ಬರೆದಿಟ್ಟು ಮಹಾಲಕ್ಷ್ಮಿ ಮತ್ತು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
“ದೇವಸ್ಥಾನದ ವಿಚಾರದಲ್ಲಿ ಸೇಡಿನ ಪ್ರತಿಫಲವಾಗಿ ನಡೆದಿರುವ ಈ ಸುಳ್ಳು ಪ್ರಕರಣದಲ್ಲಿ ಗಂಡ ಮಂಜುನಾಥ್ ಮೇಲೆ ಅತ್ಯಾಚಾರದ ಪ್ರಕರಣ ಆರೋಪ ಹೊರಿಸಿದ್ದು, ಮಾಜಿ ಶಾಸಕರ ಕುಮ್ಮಕ್ಕಿನಿಂದ ನಾಗವೇಣಿ ಮತ್ತು ಆಶಾ ಎಂಬುವರು ಒಂದೂವರೆ ತಿಂಗಳ ಹಿಂದೆ ಸುಳ್ಳುಕೇಸು ಹಾಕಿದ್ದರು” ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
“ಆರೋಪ ಮಾಡಿದವರು ಶರಾವತಿ ನಗರದ ಮನೆಗೆ ನುಗ್ಗಿ ದಾಂಧಲೆ ಮಾಡಿ, ಮನೆಯ ಒಳಗೆ ಅತಿಕ್ರಮಣ ಪ್ರವೇಶ ಮಾಡಿ, ಫರ್ನಿಚರ್ಗೆ ಎತ್ತಿಟ್ಟಿದ್ದ 60 ಸಾವಿರ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಅಲ್ಲದೆ ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ” ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಧ್ಯಕ್ಕೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ಯಾರ ಯಾರ ಹೆಸರು ಉಲ್ಲೇಖಿಸಲಾಗಿದೆ ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.