ಶಿವಮೊಗ್ಗ, ಸ್ವಾತಂತ್ರ್ಯ ದಿನಾಚರಣೆ ಆಚರಣೆಗಾಗಿ ಚಂದಾ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲವು ಯುವಕರು ಆಟೋ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆಂದು ಹೊಸ ಆಟೋ ಚಾಲಕರಿಂದ 2 ಸಾವಿರ ರೂ. ಹಾಗೂ ಹಳೆಯ ಆಟೋ ಚಾಲಕರಿಂದ 500 ರೂ. ವಸೂಲಿ ಮಾಡುತ್ತಿದ್ದ ಯುವಕರ ಗುಂಪು, ದೂರುದಾರನ ಬಳಿಯೂ 500 ರೂ. ನೀಡುವಂತೆ ಕೇಳಿದ್ದಾರೆ.
ಆದರೆ, ಚಾಲಕ ಹಣ ನೀಡಲು ನಿರಾಕರಿಸಿದಾಗ, ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯಿಂದ ಭಯಗೊಂಡ ಚಾಲಕ ಕೊನೆಗೆ ಹಣ ನೀಡಿ, ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.