ಶಿವಮೊಗ್ಗ ಮಲೆನಾಡು ಹಾಗೂ ಬಯಲುಸೀಮೆಯ ಮೂರು ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಒಡಲು ತುಂಬಿರುವ ಹೊಳೆಗೆ ಸಂಸದ ಬಿ.ವೈ. ರಾಘವೇಂದ್ರ ಇಂದು ಬಾಗಿನ ಅರ್ಪಿಸಿದರು.
ಶಿವಮೊಗ್ಗ ಮತ್ತು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ರೈತರ ಜೀವನಾಡಿ ತನ್ನ ಜೀವಕಳೆ ಮರಳಿ ಪಡೆದುಕೊಂಡು ಮೈದುಂಬಿ ಹರಿಯುತ್ತಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಭೇಟಿ ಕೊಟ್ಟು ಜನಪ್ರತಿನಿಧಿಗಳೊಂದಿಗೆ ಬಾಗಿನ ಅರ್ಪಿಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಂಸದರು, ಈ ವರ್ಷವೂ ಮಳೆರಾಯನ ಕೃಪೆಯಿಂದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಧುಮ್ಮಿಕ್ಕಿದ ಪರಿಣಾಮ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡಿದೆ.
ಉಳುವ ಯೋಗಿಯ ಮೊಗದಲ್ಲಿ ಭಯದ ಕಾರ್ಮೋಡ ದೂರವಾಗಿ ಭರವಸೆಯ ಮಂದಹಾಸ ಮೂಡಿಸಿದ್ದು, ಈ ಸಾಲಿನಲ್ಲಿ ಭತ್ತ, ಆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ ಎಂದಿದ್ದಾರೆ.
ಬಾಗಿನ ಅರ್ಪಿಸುವ ಸಂದರ್ಭದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಪ್ರಮುಖರಾದ ಜಗದೀಶ್, ಮೋಹನ್ ರೆಡ್ಡಿ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ದತ್ತಾತ್ರಿ ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.