ಶಿವಮೊಗ್ಗ, ರಾಜ್ಯದ ಹೈಕೋರ್ಟ್ ಮತ್ತು ದೇಶದ ಸುಪ್ರಿಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳನ್ನು 2 ವರ್ಷಗಳಿಂದ ನಡೆಸದೇ ಇರುವುದರಿಂದ ರಾಜ್ಯ ಚುನಾವಣಾ ಆಯೋಗವು ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ನಗರಾಭಿವೃದ್ಧಿ ಸಚಿವರ ಮೇಲೆ ಶಿಸ್ತುbಕ್ರಮ ಕೈಗೊಳ್ಳಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಟ್ರಸ್ಟ್ ಮುಖ್ಯಸ್ಥ ಕಲ್ಲೂರು ಮೇಘರಾಜ, ರಾಜ್ಯದ 187 ಸ್ಥಳೀಯ ಸಂಸ್ಥೆಗಳ ಅವಧಿಯು ಬರುವ ನವೆಂಬರ್ ಗೆ ಮುಗಿಯಲಿದೆ. ರಾಜ್ಯದಲ್ಲಿ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾಪಂಚಾಯತ್ ಚುನಾವಣೆಗಳು ಕಳೆದ 4 ವರ್ಷಗಳಿಂದ ನಡೆದಿಲ್ಲ.
ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷಗಳ ಕಾಲ ಚುನಾವಣೆ ನಡೆಸದೆ ಕಾಲಹರಣ ಮಾಡಿದೆ. ಈಗ ಸಿದ್ದರಾಮಯ್ಯನವರ ಸರ್ಕಾರವೂ ಸಹ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆಯ ಕುಂಟು ನೆಪವೊಡ್ಡಿ, ಪಂಚಾಯತ್ ರಾಜ್ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ಬರುವ ರೀತಿ ಕಾಲದಿಂದ ಕಾಲಕ್ಕೆ ಕೋರ್ಟ್ ಆದೇಶಗಳಿದ್ದರೂ ಸಹ ಚುನಾವಣೆಗಳನ್ನು ಮುಂದೂಡುತ್ತಾ ಬಂದಿದೆ ಎಂದರು.
ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಚುನಾವಣೆಯ ವಿಳಂಬಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ವಾಸ್ತವವಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಾಸಕಾಂಗವೇ ಅಂದರೆ ರಾಜ್ಯ ಸರ್ಕಾರವೇ ಕಾರ್ಯಾಂಗದ ಮೇಲೆ ಅಂದರೆ ಅಧಿಕಾರಿಗಳ ಮೇಲೆ ಅಂದರೆ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳನ್ನೊಳಗೊಂಡು ಎಲ್ಲಾ ಅಧಿಕಾರಿಗಳ ಮೇಲೆ ದಬ್ಬಾಳಿಕೆಯ ಆಡಳಿತ ನಡೆಸುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕೊಂಡಜ್ಜಿ ವಿಜಯಕುಮಾರ್, ಹೊಳೆಮಡಿಲು ವೆಂಕಟೇಶ, ಶಂಕರ ನಾಯ್ಕ್, ಸಂಗಯ್ಯ, ಜನಮೇಜಿರಾವ್ ಮೊದಲಾದವರಿದ್ದರು.