ಎಸ್ಐಟಿ ತನಿಖೆಯನ್ನಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಸಭೆಯಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, “ಯೂಟ್ಯೂಬರ್ ಸಮೀರ್ಗೂ ಧರ್ಮಸ್ಥಳಕ್ಕೂ ಏನು ಸಂಬಂಧ ಬುರುಡೆಯನ್ನ ತಂದ ಗ್ಯಾಂಗ್ ಅನ್ನು ನಂಬಬೇಡಿ ಎಂದು ಈ ಹಿಂದೆ ನಾವು ಆಗ್ರಹಿಸಿದ್ದೆವು. ಆದರೆ ಸರ್ಕಾರ ಇವರನ್ನ ನಂಬಿ ಎಸ್ ಐಟಿ ರಚಿಸಿತ್ತು ಈಗ ಎಲ್ಲವೂ ಬೆಳಕಿಗೆ ಬರುತ್ತಿದೆ” ಎಂದು ತಿಳಿಸಿದರು.

ಷಡ್ಯಂತ್ರ ಬಟಾಬಯಲಾಗಿದೆ. ಕೆಲವು ನಕಲಿ ಹಿಂದೂ ಹೋರಾಟಗಾರರು ಷಡ್ಯಂತ್ರ ಮಾಡುವವರ ಜೊತೆಗೆ ಕೈ ಜೋಡಿಸಿದ್ದಾರೆ ಎಂದು ದೂರಿದರು. ಇವರಿಗೆಲ್ಲಾ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಸಿದ್ಧರಾಮಯ್ಯ ಇರುವುದೇ ಹಿಂದೂಗಳ ಸರ್ವನಾಶಕ್ಕೆ. ಎಸ್ಐಟಿ ಕೂಡ ಷಡ್ಯಂತ್ರದಿಂದ ಕೂಡಿದೆ ಎಂದರು.
ಹಿಂದೂ ಧರ್ಮದ ರಕ್ಷಣೆಗೆ ಶಕ್ತಿ ಕೊಡಿ ಎಂದು ನಾವೆಲ್ಲರೂ ಹೋಗಿ ಮಂಜುನಾಥನ ಸನ್ನಿಧಿಯಲ್ಲಿ ಬೇಡಿ ಬಂದಿದ್ದೇವೆ. ಸತ್ಯ ಹೊರಗೆ ಬಂದೇ ಬರುತ್ತದೆ ಎಂದರು.
ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಹಿಂದೂ ವಿರೋಧಿ ಶಕ್ತಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಶಕ್ತಿ ತುಂಬಿ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಕಪ್ಪು ಚುಕ್ಕೆ ಇಟ್ಟಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

ಬಿಜೆಪಿಯಿಂದ ರಾಜ್ಯದೆಲ್ಲೆಡೆ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹಮ್ಮಿಕೊಂಡಿದ್ದೇವೆ. ನಮ್ಮ ಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಧಾರ್ಮಿಕ ಅಸ್ಮಿತೆಗೆ ಧಕ್ಕೆ ಬಂದರೆ ರಸ್ತೆಗಿಳಿಯಲು ಸಿದ್ಧ ಎಂದು ಹೋರಾಟಕ್ಕಿಳಿದು ತಾಯಂದಿರು ಕೂಡ ಭಾಗವಹಿಸಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
12 ವರ್ಷದ ಹಿಂದಿನ ಸೌಜನ್ಯ ಪ್ರಕರಣದ ಬಗ್ಗೆ ಈಗಾಗಲೇ ಹಲವು ತನಿಖಾ ಸಂಸ್ಥೆಗಳು ವರದಿ ನೀಡಿ ಧರ್ಮಸ್ಥಳಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆದರೂ ಎಡಪಂಥೀಯರ ಮತ್ತು ಹಿಂದೂ ಧರ್ಮ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಸರ್ಕಾರ ಎಸ್ಐಟಿ ರಚಿಸಿತು. ನಾವು ಕೂಡ ಅದನ್ನು ಸ್ವಾಗತಿಸಿದೆವು ಎಂದರು.
ಎಸ್ಐಟಿ ತನ್ನ ಜವಾಬ್ದಾರಿ ಮರೆತು ಮೂಲ ವಿಚಾರ ಚರ್ಚೆ ಮಾಡದೇ ದೂರುದಾರ ಯಾರು? ಅವನ ಹಿನ್ನೆಲೆ ಏನು? ಪೂರ್ವಾಪರ ವಿಚಾರಿಸದೇ ಅವನು ತೋರಿಸಿದ ಕಡೆಯಲ್ಲೆಲ್ಲಾ ಗುಂಡಿ ತೋಡುವ ಕೆಲಸ ಮಾಡಿತು. ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡಿತು. ಮೊದಲು ತಿರುಪತಿ, ನಂತರ ಅಯೋಧ್ಯೆ, ಬಳಿಕ ಅಯ್ಯಪ್ಪಸ್ವಾಮಿ ಈಗ ಧರ್ಮಸ್ಥಳ ಬಗ್ಗೆ ನಿರಂತರ ಅಪಪ್ರಚಾರ ಮಾಡುವ ಕೆಲಸವನ್ನು ಕೆಲವು ಅನ್ಯಧರ್ಮೀಯರು ಮತ್ತು ಎಡಪಂಥೀಯರು ಮಾಡುತ್ತಿದ್ದು, ಸರ್ಕಾರ ಇದಕ್ಕೆ ಬೆಂಬಲ ನೀಡಿತು ಎಂದು ಆರೋಪಿಸಿದರು.

ಶ್ರೀ ಕ್ಷೇತ್ರಕ್ಕೆ ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತಂದ ಕಾರ್ಯವಾಗಿದೆ. ಆ ಮಂಜುನಾಥಸ್ವಾಮಿ ಈ ಸರ್ಕಾರವನ್ನು ಕ್ಷಮಿಸಲ್ಲ. ದೂರು ಕೊಟ್ಟವರಿಗೆ ಈಗ ಜೈಲಿಗೆ ಹಾಕಲು ಹೊರಟಿದ್ದೀರಿ. ಮೊದಲು ನಿಮಗೆ ಬುದ್ಧಿ ಇರಲಿಲ್ಲವಾ? ಈಗ ನಿಮ್ಮ ಬಗ್ಗೆ ನಾಡಿನ ಜನತೆಗೆ ವಿಶ್ವಾಸವಿಲ್ಲ. ಮೊದಲು ಈ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ಒತ್ತಾಯಿಸುತ್ತೇವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಈ ದೇಶದಲ್ಲಿ ಹಲವಾರು ವರ್ಷಗಳಿಂದ ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದೌರ್ಜನ್ಯ ಮತ್ತು ಅಪಚಾರಗಳು ನಡೆಯುತ್ತಾ ಬಂದಿವೆ. ಧರ್ಮಸ್ಥಳ ಕೂಡ ಅದರ ಒಂದು ಭಾಗ ಎಂದರು.
ನೂರಾರು ಹೆಣ ದಫನ್ ಮಾಡಿದ್ದೇನೆ ಎಂದು ಹೇಳಿದಾಗ ಅವನು ಸಾಮಾನ್ಯ ಸಾಕ್ಷಿ ಅಲ್ಲ ಎಂದು ಮನಗಂಡು ಅವನ ಹಿನ್ನೆಲೆಯನ್ನು ಗುರುತು ಹಚ್ಚಬೇಕಿತ್ತು. 18 ಅಡಿ ಗುಂಡಿ ತೆಗೆಯುವ ಕೆಲಸ ಮಾಡಿದ ಎಸ್ಐಟಿ ಸಾಕ್ಷಿ ಎಲ್ಲಿಂದ ಬಂದ, ಹೇಗೆ ಬಂದ? ಇಷ್ಟು ದಿನ ಏಕೆ ಸುಮ್ಮನಿದ್ದ ? ಇದರ ಹಿಂದೆ ಯಾವ ಷಡ್ಯಂತ್ರವಿದೆ ಎಂದು ತಿಳಿಯುವ ಗೋಜಿಗೆ ಹೋಗಿಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಜ್ಯೋತಿಪ್ರಕಾಶ್, ಮಾಲತೇಶ್, ದೀನದಯಾಳ್, ರಶ್ಮಿ ಶ್ರೀನಿವಾಸ್, ನಾಗರಾಜ್, ಸುನಿತಾ ಅಣ್ಣಪ್ಪ, ಮಂಜುನಾಥ್, ರಾಹುಲ್ ಬಿದರೆ, ವಿಶ್ವನಾಥ್, ಸಂಗೀತಾ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.