ಶಿವಮೊಗ್ಗ, ನಿರಂತರ ಮಳೆ ಹಿನ್ನೆಲೆಯಲ್ಲಿ, ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯವು ಭರ್ತಿಯಾಗುವತ್ತ ಸಾಗಿದೆ. ಹೀಗಾಗಿ, ಯಾವುದೇ ಸಮಯದಲ್ಲೂ ಸಹ ಶರಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಪ್ರವಾಹ ಉಂಟಾಗುವ ಬಗ್ಗೆ ಕೆಪಿಸಿಎಲ್ ತನ್ನ ಪ್ರಕಟಣೆಯಲ್ಲಿ ಮುನ್ನೆಚ್ಚರಿಕೆ ನೀಡಿದೆ.
ಶರಾವತಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಗಣನೀಯವಾಗಿ ಏರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು,
ದಿನಾಂಕ:25.07.2025 ರಂದು ಮಧ್ಯಾಹ್ನ 01.00 ಘಂಟೆಗೆ ಜಲಾಶಯದ ನೀರಿನ ಮಟ್ಟವು 1806.80 (75.13%) ಅಡಿಗಳಗೆ ತಲುಪಿದೆ., ಜಲಾಶಯದ ಒಳ ಹರಿವು ಸುಮಾರು 60,000 ಕ್ಯೂಸೆಕ್ಗಳಿಗಿಂತಲೂ ಅಧಿಕವಾಗಿದೆ. ಇದೇ ರೀತಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಮುಂದುವರೆದರೆ, ಶೀಘ್ರದಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು ಎಂದು ಕಾರ್ಗಲ್ನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.