ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಅಮೆರಿಕದ ಬೋಸ್ಟನ್ ನಗರದಲ್ಲಿ ನಡೆಯಲಿರುವ 50ನೇ ಅಂತಾರಾಷ್ಟ್ರೀಯ ರಾಜ್ಯ ಶಾಸಕಾಂಗಗಳ ಶೃಂಗಸಭೆಗೆ ಕರ್ನಾಟಕದಿಂದ 12 ಶಾಸಕರ ತಂಡ ಆಯ್ಕೆಯಾಗಿದೆ.
ಆಗಸ್ಟ್ 4 ರಿಂದ 6, 2025ರ ವರೆಗೆ ನಡೆಯುವ ಈ ಪ್ರತಿಷ್ಠಿತ ಶೃಂಗಸಭೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ್ ಅವರು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ರಾಷ್ಟ್ರೀಯ ಶಾಸಕರ ಸಮಾವೇಶ ಮತ್ತು ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತದ ಸಂಸದರು, ವಿವಿಧ ರಾಜ್ಯಗಳ ಸಚಿವರು, ಶಾಸಕರು, ರಾಜಕೀಯ ತಜ್ಞರು ಹಾಗೂ ನೀತಿ ನಿರೂಪಕರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ರಾಜ್ಯದ ತಂಡವು ಸಭೆಯಲ್ಲಿ ಭಾಗವಹಿಸಲಿದೆ.
ಮೂರು ದಿನಗಳ ಕಾಲ ನಡೆಯುವ ಈ ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಶಾಸಕಾಂಗಗಳ ಪಾತ್ರ, ಶಾಸನಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಪ್ರಮುಖ ವಿಷಯಗಳ ಕುರಿತು ಗೋಷ್ಠಿಗಳು, ವಿಚಾರ ಸಂಕಿರಣಗಳು ಮತ್ತು ಸಂವಾದಗಳು ನಡೆಯಲಿವೆ.
ಶೃಂಗಸಭೆಯ ಜೊತೆಗೆ, ಕರ್ನಾಟಕದ ಶಾಸಕರ ತಂಡವು ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ವೇಗಾಸ್ ಮತ್ತು ಲಾಸ್ ಏಂಜಲೀಸ್ ನಗರಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ವಿಧಾನಮಂಡಲಗಳ ಕಾರ್ಯವಿಧಾನಗಳನ್ನು ಹೋಲಿಕೆ ಮಾಡುವುದು, ಸಂಸದೀಯ ಪ್ರಕ್ರಿಯೆಗಳ ಕುರಿತು ಅಧ್ಯಯನ ನಡೆಸುವುದು, ವಿಶಿಷ್ಟ ಆಡಳಿತ ಪದ್ಧತಿಗಳನ್ನು ತಿಳಿದುಕೊಳ್ಳುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಆರೋಗ್ಯ, ಶಿಕ್ಷಣ, ಸಾರಿಗೆ, ಶುದ್ಧ ನೀರು ಮತ್ತು ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ವಿದೇಶಿ ದೇಶಗಳು ಅಳವಡಿಸಿಕೊಂಡಿರುವ ನವೀನ ತಂತ್ರಜ್ಞಾನಗಳು, ಇ-ಗವರ್ನನ್ಸ್, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ವಿನಿಮಯದ ಬಗ್ಗೆಯೂ ತಂಡ ಮಾಹಿತಿ ಪಡೆಯಲಿದೆ.
ಇದನ್ನೂ ಓದಿ: ಶಿರಸಿ | ಶಿರಸಿ ಜ್ಯುವೆಲರಿ ಶಾಪ್ನಲ್ಲಿ ಕಳ್ಳತನ: ಆರೋಪಿಗಳು ಸೆರೆ, ಆಭರಣಗಳು ವಶ
ಈ ಅಧ್ಯಯನ ಪ್ರವಾಸಗಳು ಶಾಸಕರ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದ್ದು, ಇದರಿಂದ ದೊರೆತ ಮಾಹಿತಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ. ವಿಧಾನಸಭೆಯ ಅಧಿವೇಶನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ಸದನದ ಶಿಸ್ತು ಮತ್ತು ಒಟ್ಟಾರೆ ಕಾರ್ಯವೈಖರಿಯನ್ನು ಆಧರಿಸಿ ಈ ಶಾಸಕರನ್ನು ಆಯ್ಕೆ ಮಾಡಲಾಗಿದೆ.
ಭೀಮಣ್ಣ ನಾಯ್ಕ್ ಅವರ ಜೊತೆ ಶಾಸಕರಾದ ಬಿ.ಆರ್. ಪಾಟೀಲ್, ಅಶೋಕ್ ಪಟ್ಟಣ, ಅಪ್ಪಾಜಿ ನಾಡಗೌಡ, ಹಂಪನಗೌಡ ಬಾದರ್ಲಿ, ಅರವಿಂದ್ ಬೆಲ್ಲದ್, ಸುರೇಶ್ ಬಾಬು, ಯಶವಂತರಾಯಗೌಡ ಪಾಟೀಲ್, ಶ್ರೀನಿವಾಸ್ ಮಾನೆ, ಅಶೋಕ್ ಕುಮಾರ್ ರೈ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.