ತಾಯಿ ಎಂಬ ಎರಡಕ್ಷರದಲ್ಲಿ ಅದ್ಬುತ ಶಕ್ತಿಯಿದೆ. ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಎಲ್ಲರೂ ಗುರು-ಹಿರಿಯರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಆರನೇ ದಿನ ನಡೆದ ತಾಯಿಯ ಕರಳು ನಾಟಕ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ʼತಾಯಿ ತ್ಯಾಗಮಯಿ, ಅವಳು ತನ್ನ ಪ್ರಾಣ ನೀಡಿಯಾದರೂ ತನ್ನ ಮಗನನ್ನು ಬದುಕಿಸಿಕೊಳ್ಳುತ್ತಾಳೆ. ತನ್ನ ಕೊನೆಯ ಉಸಿರುವವರೆಗೂ ಜೊತೆಗೆ ಇರುವವಳು ಏಕೈಕ ಮಾತ್ರ ತಾಯಿ. ಇಂದಿನ ಯುವಕರಿಗೆ ಗುರು-ಹಿರಿಯರ ಸೇವೆ ಮಾಡುವ ಮನೋಭಾವ ಬೆಳೆಸುವುದು ಅತ್ಯವಶ್ಯಕವಾಗಿದೆʼ ಎಂದರು.
ಸಾನಿಧ್ಯ ವಹಿಸಿಕೊಂಡಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ,ʼತಾಯಿಯು ಜಗತ್ತಿನಲ್ಲಿ ದೇವರ ರೂಪ. ನಮಗೆ ಜನ್ಮ ನೀಡಿದ ತಂದೆ-ತಾಯಿ ನಿಜವಾದ ದೇವರು ಹರಕೆ ಹೊತ್ತು, ತೀರ್ಥಯಾತ್ರೆ ಮಾಡುವುದಕ್ಕಿಂತ ತಂದೆ-ತಾಯಿಯ ಸೇವೆ ಮಾಡುವುದೇ ನಿಜವಾದ ದೇವರಿಗೆ ಪೂಜಿಸಿದಂತೆʼ ಎಂದು ತಿಳಿಸಿದರು.
ಬಸವಕಲ್ಯಾಣ ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಪ್ರಪಂಚದಲ್ಲಿ ತಾಯಿ ಎಲ್ಲಕ್ಕಿಂತಲೂ ದೊಡ್ಡವಳು. ತಾಯಿಯ ಸ್ಥಾನ ಯಾರಿಂದಲೂ ತುಂಬುವುದಕ್ಕೆ ಸಾಧ್ಯವಿಲ್ಲ. ನಿಸ್ವಾರ್ಥ ಮನಸ್ಸಿನ ಜೀವ ಎಂದರೆ ತಾಯಿ. ತಾಯಿಯೇ ಮೊದಲ ಗುರು, ತಾಯಿಯನ್ನು ಎಂದಿಗೂ ಮರೆಯಬಾರದು. ಅವಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ತಾಯಿ ಎಂಬ ಶಬ್ದದಲ್ಲಿಯೇ ಔಷಧವಿದೆʼ ಎಂದು ಹೇಳಿದರು.
ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ ಮಾತನಾಡಿ, ʼಮಹಿಳೆ ತ್ಯಾಗಮಯಿ, ಅವಳಿಗೆ ಪ್ರೋತ್ಸಾಹಿಸಿದರೆ ಏನು ಬೇಕಾದರೂ ಸಾಧಿಸಬಹುದುʼ ಎಂದರು.
ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಸಂಯೋಜಕ ರಾಜಕುಮಾರ ಹೆಬ್ಬಾಳೆ ಮಾತನಾಡಿ, ʼಜೀವನ ಪೂರ್ತಿ ನೆನಪಿಡುವಂತಹ ಕಾರ್ಯ ಮಾಡುವುದು ನಾಟಕ, ಕಲೆಗೆ ಪ್ರೋತ್ಸಾಹ ನೀಡಬೇಕುʼ ಎಂದರು.
ಗಮನ ಸೆಳೆದ ನಾಟಕ ಪ್ರದರ್ಶನ : ಬಸವರಾಜ ಕಟ್ಟಿಮನಿ ನಿರ್ದೇಶನದಲ್ಲಿ ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೆಕಲ್ ಅವರಿಂದ ಜರುಗಿದ ತಾಯಿಯ ಕರುಳು ನಾಟಕ ತಾಯಿಯ ತ್ಯಾಗಮಯ ಜೀವನದ ಕಥೆ ಆಧರಿತ ಘಟನೆಗಳು ಕಣ್ಣಂಚಿನಲ್ಲಿ ನೀರು ತರಿಸಿದವು.
ಈ ಸುದ್ದಿ ಓದಿದ್ದೀರಾ? ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?
ಸಮಾರಂಭದಲ್ಲಿ ಬಿಡಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ನಿರ್ದೇಶಕ ಕಾಶಪ್ಪಾ ಸಕ್ಕರಬಾವಿ, ಕಜಾಪ ಬೀದರ ಅಧ್ಯಕ್ಷ ಎಸ್.ಬಿ.ಕುಚಬಾಳ ಕಸಾಪ ತಾಲೂಕಾಧ್ಯಕ್ಷ ಶಾಂತಲಿಂಗ ಮಠಪತಿ, ಕಜಾಪ ಬೀದರ ಅಧ್ಯಕ್ಷ ಭಕ್ತರಾಜ ಚಿತ್ತಾಪೂರೆ, ಮುಖಂಡರಾದ ಮನೋಹರ ಮೈಸೆ, ಅರ್ಜುನ ಕನಕ, ಸಂಜುಕುಮಾರ ಜಾಧವ ಬಸವರಾಜ ಗಾರಂಪಳ್ಳಿ, ಜಗದೀಶ ನೆಲವಾಡಕರ್, ಪ್ರಕಾಶ ಕನ್ನಾಳೆ ಇದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು, ಶೃತಿ ನಿರೂಪಿಸಿದರು. ಜ್ಯೋತಿ ಸಂಜಕುಮಾರ ಭಕ್ತಿ ದಾಸೋಹಗೈದರು.