ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸುವ ರಾಮಾಯಣದಂತಹ ಶ್ರೇಷ್ಠ ಕೃತಿಯನ್ನು ನೀಡಿದ ಮಹರ್ಷಿ ವಾಲ್ಮೀಕಿ ಲೋಕದ ಶ್ರೇಷ್ಠ ಕವಿಯಾಗಿದ್ದಾರೆ. ಭಾರತೀಯ ಸಾಹಿತ್ಯ ಪರಂಪರೆಯ ಹಲವು ಕವಿಗಳನ್ನು ಪ್ರಭಾವಿಸಿದ ಕವಿ. ಮಹರ್ಷಿ ವಾಲ್ಮೀಕಿ ಕವಿಯೂ , ಋಷಿಯೂ ಆಗಿದ್ದರು ಎಂದು ಕಲಬುರ್ಗಿಯ ನೂತನ ವಿದ್ಯಾಲಯ ಪಿಯು ಕಾಲೇಜು ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ʼಬದುಕಿನ ಸಮಾಜದ ಹಲವು ಸಂಘರ್ಷಗಳು, ಸಂದಿಗ್ಧತೆಗಳು ದಾಟುವ ದಾರಿಗಳು ರಾಮಾಯಣ ಮಹಾಕಾವ್ಯದಲ್ಲಿವೆʼ ಎಂದರು.
ʼವಾಲ್ಮೀಕಿ ಮಹರ್ಷಿಯವರ ರಾಮಾಯಣ ಮಹಾಕಾವ್ಯದ ಪ್ರೇರಣೆಯಿಂದ ಹಲವು ಭಾರತೀಯ ಹಲವು ಭಾಷೆಗಳಲ್ಲಿ ರಾಮಾಯಣಗಳು ಬಂದಿವೆ. ಕನ್ನಡದಲ್ಲಿ ನಾಗಚಂದ್ರ ರಾಮಚಂದ್ರ ಚರಿತ ಪುರಾಣ, ಕುವೆಂಪು ಅವರ ರಾಮಾಯಣ ದರ್ಶನಂ ಸೇರಿದಂತೆ ಹಲವು ರಾಮಾಯಣಗಳು ಬಂದಿವೆʼ ಎಂದರು.
ʼಮಹರ್ಷಿ ವಾಲ್ಮೀಕಿ ಆದರ್ಶವಾದವನ್ನು, ಉದಾತ್ತ ಮೌಲ್ಯಗಳನ್ನು, ಜನ ಸಮುದಾಯದ ಒಳಿತು ಮಹಾನಾಯಕನಲ್ಲಿ ಇರಬೇಕಾದ ಔನ್ನತ್ಯವನ್ನು ತಮ್ಮ ಮಹಾಕಾವ್ಯದಲ್ಲಿ ಹಿಡಿದಿಟ್ಟಿದ್ದಾರೆ. ಜಾನಪದ ರಾಮಾಯಣ, ಶ್ರೀ ರಾಮಾಯಣ ದರ್ಶನಂ, ಶ್ರೀ ರಾಮಾಯಣ ಅನ್ವೇಷಣಂ ಸೇರಿ ಹಲವು ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಮೂಲ ಆಕರವಾಗಿದೆʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಬದುಕಿನ, ಮನುಷ್ಯನ ಬಹುಮುಖಗಳನ್ನು ಅನಾವರಣಗೊಳಿಸುವ ರಾಮಾಯಣ ಕೃತಿ ಮಹರ್ಷಿ ವಾಲ್ಮೀಕಿ ಬರೆದಿದ್ದಾರೆ. ಭಾರತೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅದೊಂದು ವಿರಾಟ್ ಕಥನವಾಗಿದೆʼ ಎಂದರು.
ʼರಾಮಾಯಣ ಹಲವು ಮೌಲ್ಯಗಳ ಮೊತ್ತವಾಗಿದೆ. ಉತ್ತರ ಹಾಗೂ ದಕ್ಷಿಣದ, ಆರ್ಯ ಮತ್ತು ದ್ರಾವಿಡ ಸಾಂಸ್ಕೃತಿಕ ಸಂಘರ್ಷ, ಸರ್ವೋತ್ತಮನಾದ ರಾಮನು ಈ ದೇಶದ ಮಧ್ಯಮ ವರ್ಗದ ಹಾಗೂ ಕೂಡು ಕುಟುಂಬದ ಪ್ರತಿನಿಧಿಯಾಗಿ ಕಾಣುತ್ತಾನೆ. ರಾಮಾಯಣವು ನಮ್ಮ ದೇಶದ ಸಾಂಸ್ಕೃತಿಕ ಜಗತ್ತಿನ ಭಾಗವಾಗಿದೆ. ಅದರಲ್ಲಿ ಪ್ರಧಾನ ಸಂಸ್ಕೃತಿ, ಸಬಾಲ್ಟರ್ನ್, ಪರಿಸರವಾದಿ ನೆಲೆಗಳು, ಮಾನವತಾವಾದಿ ಆಲೋಚನೆಗಳು ಅಡಕವಾಗಿವೆʼ ಎಂದರು.
ಕನ್ನಡ ಅಧ್ಯಾಪಕ ಚೆನ್ನಬಸಪ್ಪ ಗೌರ ಮಾತನಾಡಿ , ʼಮಹರ್ಷಿ ವಾಲ್ಮೀಕಿ ಜಗತ್ತಿನ ಶ್ರೇಷ್ಠ ಕವಿಯಾಗಿದ್ದಾರೆ. ಅವರು ಸಾರಿದ ಸಂದೇಶ ಇಡೀ ಮಾನವ ಕುಲಕ್ಕೆ ದಾರಿದೀಪವಾಗಿವೆʼ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಗಂಗಾಧರ ಸಾಲಿಮಠ ಮಾತನಾಡಿ, ʼಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿದ್ದಾರೆ. ಅವರಲ್ಲಿ ಕವಿತ್ವ ಮತ್ತು ಋಷಿತ್ವಗಳಿದ್ದವುʼ ಎಂದರು.
ಈ ಸುದ್ದಿ ಓದಿದ್ದೀರಾ? ವಿಶ್ವಸಂಸ್ಥೆ ವರದಿ | ತೀವ್ರ ಬಡತನದಲ್ಲಿ ಬೇಯುತ್ತಿದ್ದಾರೆ 110 ಕೋಟಿ ಜನರು; ಭಾರತದಲ್ಲೇ ಹೆಚ್ಚು ಬಡವರು
ಶ್ರೀ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್, ಡಾ. ಬಸವರಾಜ ಖಂಡಾಳೆ, ಶ್ರೀನಿವಾಸ ಉಮಾಪುರೆ, ಅಶೋಕ ರೆಡ್ಡಿ ಗದಲೇಗಾಂವ, ಪವನ್ ಪಾಟೀಲ, ವಿವೇಕಾನಂದ ಶಿಂದೆ , ಪ್ರೇಮಾ ತಾಂಬೋಳೆ ಸೇರಿದಂತೆ ಹಲವರಿದ್ದರು. ಅಮರ ಸ್ವಾಮಿ ಸ್ವಾಗತಿಸಿದರು. ನಿಕಿತಾ ರಾಠೋಡ ನಿರೂಪಿಸಿದರು. ಜಯಶ್ರೀ ವಂದಿಸಿದರು.