ಸೊರಬ, ವ್ಯೆಯಕ್ತಿಕವಾಗಿ ನಮ್ಮ ಪರಿಶ್ರಮ ಹಾಗೂ ಬೆವರು ಸುರಿಸಿ ಉತ್ತಮ ಸ್ಥಾನಕ್ಕೆ ಏರಿದ್ದೇವೆ. ಆದರೆ ಸೈದ್ಧಾಂತಿಕ ನಿಲುವಿನೊಂದಿಗೆ ತಳ ಸಮುದಾಯದ ಪರವಾಗಿ ಹೋರಾಟ ಮಾಡುವುದು ಕೂಡ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಚಲನಚಿತ್ರ ನಟ ಚೇತನ್ ಹೇಳಿದರು.
ಪಟ್ಟಣದಲ್ಲಿ ದಲಿತ ಮುಖಂಡರು,ಸಮಾನ ಮನಸ್ಕರು ಹಾಗೂ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸಮಾನತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾನತೆ ಎನ್ನುವುದು ಲಿಂಗದ ದೃಷ್ಟಿಯಿಂದ, ಶೈಕ್ಷಣಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಪ್ರಮುಖವಾಗಿದೆ.ಆದರೆ ಪ್ರಭುತ್ವವು ಅಬಲರಿಗೆ ಸಿಗದಂತೆ ನೋಡಿಕೊಂಡಿದೆ. ಈ ವಿಚಾರಧಾರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಆಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಬೇಕಿರುವುದು ಸಂಪೂರ್ಣವಾದ ಪರಿವರ್ತನೆ. ಅದು ಅಹಿಂಸವಾದದ ರೀತಿ ಆಗಿರಬೇಕು.ಆ ಕ್ರಾಂತಿಯೇ ಸಮ ಸಮಾಜ.ದಲಿತರ ಶತೃ ಅನ್ಯಾಯದ ವ್ಯವಸ್ಥೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಈ ಹೋರಾಟವನ್ನು ಮುನ್ನಡೆಸಲು ರಾಜ್ಯದ ೬ ಕೋಟಿ ಜನರು ಕೈಜೋಡಿಸಿದಾಗ ಸಮಾನತೆ ಕಾಣಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಭಾರತ ದೇಶವು ಪ್ರತಿಯೊಬ್ಬ ಪ್ರಜೆಗೆ ಮನೆ ಇದ್ದಂತೆ. ನಾವು ಒಂದೇ ಕುಟುಂಬದ ಸದಸ್ಯರು. ಹೀಗಿರುವಾಗ ದೇಶದಲ್ಲಿನ ಆಸ್ತಿ,ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಉಳ್ಳವರ ಪಾಲಾಗಿರುವ ಬಂಡವಾಳ ಎಲ್ಲರಿಗೂ ಸೇರಬೇಕು ಎಂದರು.
ಗುರುರಾಜ್,ನಾಗಪ್ಪ ಮೇಷ್ಟ್ರು, ಬಸವರಾಜಪ್ಪ, ಮೆಹಬೂಬ್, ರೆಹಮಾನ್ ಸಾಬ್, ಶ್ರೀಕಾಂತ್ ಚಿಕ್ಕಶಕುನ, ರತ್ನಮ್ಮ,ಶೇಖರಮ್ಮ,ರುದ್ರಪ್ಪ,ನಾಗರಾಜ್ ಸೇರಿದಂತೆ ಸಮಾನ ಮನಸ್ಕರು ಉಪಸ್ಥಿತರಿದ್ದರು.