ಜಗತ್ತಿನಲ್ಲೇ ಅತಿ ಹೆಚ್ಚು ಮಾನವ ಸಂಪತ್ತು ನಮ್ಮ ದೇಶದಲ್ಲಿದೆ, ಅದರಲ್ಲೂ 52 ಕೋಟಿಯಷ್ಟು ಯುವ ಮಾನವ ಸಂಪತ್ತು ಹೊಂದಿದ್ದೇವೆ ಅದು ನಮ್ಮ ಭಾಗ್ಯ, ಇಂತಹ ಯುವ ಮಾನವ ಸಂಪತ್ತು ಜಗತ್ತಿನ ಯಾವ ದೇಶದಲ್ಲೂ ಇಲ್ಲ ಆದರೆ ಇಷ್ಟು ಮಾನವ ಸಂಪತ್ತು ಇರುವ ನಮ್ಮ ದೇಶದಲ್ಲಿ ನಾವು ಬದುಕು ಕಟ್ಟಿಕೊಳ್ಳುವುದು ಸಹ ಅಷ್ಟೇ ಸೂಷ್ಮಾ ಎಂಬುದು ನಾವು ನೆನಪಿಟ್ಟುಕೊಳ್ಳಬೇಕು. ಗತಿಸಿಹೋದ ಕಾಲಕ್ಕೂ ಈಗಿನ ಕಾಲಕ್ಕೂ ಬಹಳಷ್ಟು ಸೂಷ್ಮತೆಗಳನ್ನು ನಾವು ಕಾಣುತ್ತಿದ್ದೇವೆ ಇಂತಹ ಸೂಷ್ಮತೆಗಳ ನಡುವೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ಸಹಿಷ್ಣುತೆಯಿಂದ, ಸೌಹಾರ್ತತೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಖ್ಯಸ್ಥರಾದ ಡಾ. ಎಂ ಮೋಹನ್ ಆಳ್ವಾರವರು ಹೇಳಿದರು.

ಅವರು ಇಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕುವೆಂಪು ಸಂಭಾಗಣದಲ್ಲಿ ನಡೆದ ಸೌಹಾರ್ದ ಸಿರಿ ಪ್ರಶಸ್ತಿ ಪ್ರಧಾನ ಸ್ವೀಕರಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ನಮ್ಮನ್ನು ಆಳುವ ಸರ್ಕಾರಗಳು ಅವರ ಓಟಿಗಾಗಿ, ಅಧಿಕಾರಕ್ಕಾಗಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವುದನ್ನು ನಾವು ಗಮನಿಸಿದ್ದೇವೆ. ಇದರಿಂದಾಗಿ ನಮ್ಮ ಇಡೀ ಸಮಾಜದ ನಡುವೆ ಕಂದಕ ಉಂಟಾಗುತ್ತಿದೆ. ಧರ್ಮಗಳ ಮಧ್ಯೆ ಮಾತ್ರವಲ್ಲದೆ, ಜಾತಿ ಮತಗಳ ನಡುವೆಯು ಕೆಲವೊಮ್ಮೆ ಕಂದಕ ಸೃಷ್ಟಿ ಮಾಡಿ ಬೇರ್ಪಡಿಸಿ ಮಾನವ ಕುಲದ ಕೋಟೆಯನ್ನೇ ಛಿದ್ರ ಛಿದ್ರ ಮಾಡುವಂತಹ ಇಂತಹ ಸಂದರ್ಭದಲ್ಲಿ ನಾವು ಬಹಳಷ್ಟು ಜಾಗೃತರಾಗಿರಬೇಕು ಈಗಿರುವ ಸಾಮಾಜಿಕ ತಾಣಗಳಲ್ಲಿ ಅವರವರ ಯೋಗ್ಯತೆ ಅನುಸಾರ ಪ್ರಸಾರ ಮಾಡುತ್ತಿರುತ್ತಾರೆ ಅದಕ್ಕೆ ನಾವು ಬಲಿಪಶರಾಗಬಾರದು ಅವೆಲ್ಲವೂ ಸತ್ಯವಲ್ಲ ಜಾಗೃತರಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಮುಸ್ಲಿಂ ಬಾಂಧವ್ಯ ವೇದಿಕೆಯವರು ಸೌಹಾರ್ದ ಸಿರಿ ಎಂಬ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದೀರಿ ಖಂಡಿತ ಇದು ನನ್ನ ಬದುಕಿನಲ್ಲಿ ಸುಧೀರ್ಘ ಎಪ್ಪತು ಮೂರು ವರ್ಷದ ಹೋರಾಟದಲ್ಲಿ ನಾನು ಬದುಕಿದ ರೀತಿ, ಪಾರದರ್ಶಕತೆ, ಮಾದರಿಯನ್ನು ನೋಡಿಕೊಂಡು ನನಗೆ ಸನ್ಮಾನಿಸಿದ್ದೀರಿ ಈ ಸಂದರ್ಭದಲ್ಲಿ ನನ್ನ ತಂದೆ ತಾಯಿಯನ್ನು ಸ್ಮರಿಸಿಕೊಳ್ಳಲೇ ಬೇಕು ಅವರ ಜೀವನವನ್ನು ನೋಡಿ ಬಾಳಿನುದ್ದಕೂ ಅದನ್ನು ಅಳವಡಿಸಿಕೊಂಡಿದ್ದೇನೆ ಎಲ್ಲರೊಂದಿಗೆ ಹೇಗೆ ಸೌಹಾರ್ತೆಯಿಂದ ಬದುಕಬೇಕು ಎಂಬುದನ್ನು ಕಲಿಸಿ ಕೊಟ್ಟದ್ದು ನನ್ನ ತಂದೆ ತಾಯಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಮಾಧ್ಯಮ ವಕ್ತಾರರಾದ ಮುಸ್ತಾಕ್ ಹೆನ್ನಾಬೈಲ್ ಜಗತ್ತಿನಲ್ಲಿ ಸಂಘರ್ಷ ನಡೆಯದ ಯಾವ ಕಾಲವೂ ಗತಿಸಿಲ್ಲ ಎಲ್ಲಾ ಕಾಲಗಳಲ್ಲಿಯೂ ದೇಶದ ಕಾರಣಕ್ಕಾಗಿ, ಬಣ್ಣದ ಕಾರಣಕ್ಕಾಗಿ, ಭಾಷೆಯ ಕಾರಣಕ್ಕಾಗಿ, ಪ್ರದೇಶದ ಕಾರಣಕ್ಕಾಗಿ ಹೀಗೆ ಅನೇಕ ರೀತಿಯ ಕಾರಣಕ್ಕಾಗಿ ಸಂಘರ್ಷಗಳು ನಡೆದಿದೆ ಆದರೆ ಈಗ ನಿರ್ಣಯಕ ಹಂತಕ್ಕೆ ಬಂದು ಧರ್ಮ ದಂಗಲ್ ನಂತಹ ಪರಿಸ್ಥಿತಿಗೆ ಬಂದು ತಲುಪಿದ್ದು ಈ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಇದು ಮುಂದುವರೆದರೆ ಮನುಕುಲ ಅಳಿವಿನಂಚಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗುತ್ತದೆ ಎಂದು ಹೇಳಿದರು.
ಜಗತ್ತಿನಲ್ಲಿರುವ ಧರ್ಮಗಳ ತತ್ವಗಳನ್ನು ಪ್ರಾಥಮಿಕವಾಗಿ ಅಧ್ಯಯನ ನಡೆಸಿದರೆ ಮತ್ತು ಆಯಾಯ ಧರ್ಮದ ಆಳ ಅಗಲದ ಬಗ್ಗೆ ಜಾಲಾಡಿದರೆ ಎಲ್ಲೂ ಸಹ ಜೀವ ತೆಗೆಯಿರಿ ಇನ್ನೊಬ್ಬರನ್ನು ಕೊಲ್ಲಿ ಎಂದು ಎಲ್ಲಿಯೂ ಹೇಳಿಲ್ಲ ಅದರ ಜೊತೆಗೆ ಎಲ್ಲಾ ಧರ್ಮಗಳಲ್ಲಿಯೂ ಮನುಕುಲದಿಂದ ಹೊರತಾದ ಸಂಬಂಧ ಎನ್ನುವುದು ಇಲ್ಲವೇ ಇಲ್ಲ ಹೀಗಿರುವಾಗ ಸಂಘರ್ಷ ಯಾಕೆ? ಮುಸ್ಲಿಮ್ ಬಾಂಧವ್ಯ ವೇದಿಕೆ ಕಳೆದ ಮೂರು ವರ್ಷದಿಂದ ಧರ್ಮ ಧರ್ಮಗಳನ್ನು ಬೆಸೆಯುವ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ ಇನ್ನೂ ಕೂಡ ಮುಂದುವರೆಸಲಿದೆ ಎಂದು ಹೇಳಿದರು.

ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸುಹೇಲ್ ಅಹ್ಮದ್ ಮರೂರ್, ಈ ಜಗತ್ತು ಕಂಡ ಮಹಾನ್ ಸಾಮ್ರಾಜ್ಯಗಳು ಪತನವಾಗಿದೆ, ವೈಭವದ ಭವ್ಯ ಅರಮನೆಗಳು ಪಾಳು ಬಿದ್ದಿವೆ, ದೊಡ್ಡ ದೊಡ್ಡ ತಿಜೋರಿಗಳು ಇಂದು ಬರಿದಾಗಿವೆ, ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿಗಳೆಲ್ಲಾ ಮಣ್ಣಾಗಿದ್ದಾರೆ ಆದರೆ ಇಂದಿಗೂ ಸಮಾಜ ಮಾತ್ರ ಜೀವವಿದೆ, ಅಸ್ತಿತ್ವದಲ್ಲಿದೆ ಮುಂದು ಕೂಡ ಇರುತ್ತದೆ ಅದಕ್ಕಾಗಿ ಬೇಕಾಗಿರುವುದು ಯುದ್ಧದ ನಂತರ ಹೇಗೆ ಮರು ಸಂಧಾನವೋ ಹಾಗೇಯೇ ಅವರು ಎಷ್ಟೇ ದ್ವೇಷ ಎಂಬ ರೋಗವನ್ನು ಹರಡಲಿ ನಾವು ಸೌಹಾರ್ದತೆಯೆಂಬ ಮದ್ದನ್ನು ನೀಡಬೇಕು ಎಂದು ಹೇಳಿದರು.

ಪೌರಾಣಿಕ ಅರ್ಥದಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಸಿರಿ ನುಡಿ ನುಡಿದರು, ನಿವೃತ್ತ ನ್ಯಾಯಮೂರ್ತಿಗಳಾದ ನಬಿರಸೂಲ್ ಮಹಮದಾಪುರ್, ವೇದಿಕೆಯ ಗೌರವಾಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್, ಅನುಪಮ ಮಾಸಿಕ ಸಂಪಾದಕಿ ಶಹನಾಝ್ ಎಂ, ಮಾತನಾಡಿದರು. ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಮಾಜಿ ಅಧ್ಯಕ್ಷರಾದ ಅನೀಸ್ ಪಾಷ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ಧನ್ಯವಾದ ವಿತ್ತರು. ಡಾ ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.


