ಸಂವಿಧಾನವನ್ನು ಪಾಲನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಬೇಕು. ಆಗ ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕರಾದ ಸಿ.ಎಸ್.ವೆಂಕಟೇಶ್ ಅಭಿಪ್ರಾಯ ಪಟ್ಟರು.
ಅವರು ಸಂವಿಧಾನ ಸಮರ್ಪಣಾ ದಿನ ಮತ್ತು ರಾಷ್ಟ್ರೀಯ ಕಾನೂನು ದಿನಾಚರಣೆ ಪ್ರಯುಕ್ತ ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಎದುರಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಂವಿಧಾನ ಪ್ರಸ್ತಾವನೆಗೆ ‘ಸಮಾಜವಾದಿ’ ‘ಜಾತ್ಯಾತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ್ದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದು ಖುಷಿ ಪಡುವ ವಿಚಾರ ಎಂದರು.

ನಂತರ ಪ್ರಜ್ಞಾವಂತರ ವೇದಿಕೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ, ಶ್ರೀರಂಗಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಸಂವಿಧಾನ ಪೀಠಿಕೆಯ ಮೆರವಣಿಗೆಗೆ ಆಶಾ ಪುಟ್ಟೇಗೌಡ ಚಾಲನೆ ನೀಡಿದರು. ಕುವೆಂಪು ವೃತ್ತದಿಂದ ಹೊರಟ ಸಂವಿಧಾನ ಪೀಠಿಕೆಯ ಮೆರವಣಿಗೆ ಶ್ರೀರಂಗಪಟ್ಟಣದ ಪೇಟೆಯ ಮುಖ್ಯ ಬೀದಿಗಳ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ನಂತರ ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ವಿಜಯ ಮಂಗಳೂರು ಮಾತನಾಡಿ, ಇವತ್ತು ಎಲ್ಲ ಭಾರತೀಯರಿಗೆ ಬಹಳ ಮುಖ್ಯವಾದ ದಿನ. ಇವತ್ತು ಸಂವಿಧಾನ ಅಂತಿಮಗೊಂಡ ದಿನ. ನಮ್ಮ ಸಂವಿಧಾನವು 1950ರ ಜನವರಿ 26 ರಿಂದ ಜಾರಿಗೆ ಬರಲಿದೆ ಎಂದು ತೀರ್ಮಾನಗೊಂಡ ದಿನ. ನಾವೆಲ್ಲರೂ ಸಂವಿಧಾನ ರಚನಾ ಸಭೆ ಹೇಗೆ ಕೆಲಸ ಮಾಡಿತು ಅಂತ ತಿಳಿಯಬೇಕು. ಯಾರು ಏನು ಮಾತನಾಡಿದರು, ಅದಕ್ಕೆ ಏನು ಉತ್ತರ ಕೊಟ್ಟರು, ಕೊಟ್ಟ ಉತ್ತರ ಎಲ್ಲರಿಗೂ ಸಮಾಧಾನ ತಂದಿತಾ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.

ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಒಂದೇ ಭಾಷೆ, ಧರ್ಮ ಮತ್ತು ಆಚರಣೆಗಳು ಇರುತ್ತವೆ. ಅಲ್ಲಿಗೆ ಸಂವಿಧಾನ ರಚಿಸುವುದು ಬಲು ಸುಲಭ. ಆದರೆ ಭಾರತ ಬಹಳ ದೊಡ್ಡ ಒಕ್ಕೂಟ. ಇಲ್ಲಿ ಅನೇಕ ರೀತಿಯ ಭಾಷೆ, ಧರ್ಮ ಹಾಗೂ ಪ್ರದೇಶಗಳಿವೆ. ಇಲ್ಲಿ ಎಲ್ಲರೂ ಒಪ್ಪುವ ಸಂವಿಧಾನ ರಚನೆ ಬಲು ಸಂಕೀರ್ಣ. ಇದನ್ನು ಸಾಧಿಸಿದವರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶ್ಲಾಘಿಸಿದರು.
ಸಂವಿಧಾನ ಇದೆ. ಸಂವಿಧಾನ ವಿಧಿ ವಿಧಾನಗಳ ಅಡಿಯಲ್ಲಿ ಆಡಳಿತ ನಡೆಯುತ್ತಿದೆ. ಆದರೂ, ನಮ್ಮಗಳ ಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಇನ್ನೂ ಸಾಕಷ್ಟು ಸೌಲಭ್ಯಗಳು ತಲುಪಬೇಕಿದೆ. ಇನ್ನು ನ್ಯಾಯ ಸರಿಯಾಗಿ ಸಿಗುತ್ತಿಲ್ಲ. ಸಂವಿಧಾನ ಇದ್ದಾಗ ಈ ರೀತಿ ಆದರೆ ಇನ್ನೂ ಸಂವಿಧಾನ ಇಲ್ಲದಿದ್ದಾಗ ನಮ್ಮಗಳ ಬದುಕು ಹೇಗೆ ನೆನಪಿಸಿಕೊಳ್ಳಿ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಹೆಣ್ಣು ಭ್ರೂಣ ಹತ್ಯೆಯಾಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿ ಸೂಚನೆ
ನನಗೀಗ 75 ವರ್ಷ. ನಾನು ಚಿಕ್ಕವನಾಗಿದ್ದಾಗ ನಮ್ಮ ಗುಡಿಸಲು ಹಂದಿಗಳನ್ನು ಕೂಡಿ ಹಾಕಿದಂತಿತ್ತು. ನನಗೆ ಈಗಲೂ ನೆನಪಿದೆ ಅಲ್ಲೇ ಐದಾರು ಅಣ್ಣ-ತಮ್ಮಂದಿರ ಸಂಸಾರವೆಲ್ಲ ಇತ್ತು. ಈಗ ನಮ್ಮ ಪರಿಸ್ಥಿತಿ ಸಾಕಷ್ಟು ಬದಲಾವಣೆ ಕಂಡಿದೆ ಎಂದು ತಮ್ಮ ಬಾಲ್ಯ ಕಾಲವನ್ನು ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಚಂದ್ರಣ್ಣ ಕ್ಯಾತನಹಳ್ಳಿ, ರೈತ ಸಂಘದ ಪಾಂಡು, ಜಯರಾಮೇಗೌಡ, ಚಿಕ್ಕತಮ್ಮೇಗೌಡ, ಸರ್ವೋದಯ ಪಕ್ಷದ ರಮೇಶ್, ಸವೆರ ಸ್ವಾಮಿ, ಡಿಎಸ್ಎಸ್ನ ಕುಬೇರಪ್ಪ, ಟಿಪ್ಪು ಚಂದ್ರು, ಸಂಜಯ ಪ್ರಕಾಶನದ ಶಿವಕುಮಾರ್, ಕಡತನಾಳು ಜಯಶಂಕರ್, ಪ್ರಿಯಾ ರಮೇಶ್, ಸೌಹಾರ್ದ ವೇದಿಕೆಯ ಅಕ್ಬರ್, ಪಾಂಡವಪುರ ವಿಜಯ್ ಕುಮಾರ್, ಕೃಷ್ಣಮೂರ್ತಿ ಇನ್ನೂ ಮುಂತಾದವರು ಹಾಜರಿದ್ದರು.