ಸಂವಿಧಾನದ ಅಡಿಯಲ್ಲಿ ಕಾರ್ಯಗತ ಮಾಡುವುದಕ್ಕೆ ಅನೇಕ ಕಾನೂನುಗಳನ್ನು ರಚನೆ ಮಾಡಲಾಗಿದೆ. ಆದರೆ ಎಲ್ಲವನ್ನೂ ಕಾನೂನಿನಿಂದ ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಮನಸುಗಳು ಸುಧಾರಣೆಯಾಗಬೇಕು ಎಂದು ನ್ಯಾ. ಎಚ್ ಎನ್ ನಾಗಮೋಹನ್ ದಾಸ್ ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಲಹಳ್ಳಿಯ ರುದ್ರಮ್ಮ ನಾಗರಾಜರ ಮನೆಯಲ್ಲಿ ಏರ್ಪಡಿಸಿದ್ದ ದಲಿತರೊಂದಿಗಿನ ಸಹಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಭಾರತಕ್ಕೆ ಒಂದು ಸಂವಿಧಾನವಿದೆ. ಆ ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ನಿಷೇಧ ಮಾಡಲಾಗಿದೆ. ಅಸ್ಪೃಶ್ಯತೆಯನ್ನು ಆಚರಣೆ ಮಾಡಿದರೆ ದಂಡನೆ ನೀಡಲಾಗುತ್ತದೆಂದು ನಮ್ಮ ಸಂವಿಧಾನದಲ್ಲಿ ಪ್ರಸ್ತಾಪನೆ ಮಾಡಲಾಗಿದೆ. ಕಾನೂನಿನಿಂದ ಒಂದಷ್ಟು ಬದಲಾವಣೆಯಾಗಿದೆ. ಇನ್ನೂ ಬಹಳಷ್ಟು ಸುಧಾರಣೆಯಾಗುವುದು ಬಾಕಿ ಉಳಿದಿದೆ. ಪ್ರತಿಯೊಂದು ಕಾನೂನು ಕಾನೂನಿನಿಂದ ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಮನಸುಗಳು, ಬುದ್ಧಿ, ಚಿಂತನೆಗಳು ಸುಧಾರಣೆಯಾಗಬೇಕು. ಈ ದಿಸೆಯಲ್ಲಿ ಯಾವುದೇ ಸಂಘರ್ಷವಿಲ್ಲದೆ, ಶಾಂತಿಯುತವಾಗಿ ಅಸ್ಪೃಶ್ಯತೆಯ ನಿವಾರಣೆ ಕೆಲಸವಾಗಬೇಕು” ಎಂದು ತಿಳಿಸಿದರು.

ಮೈಸೂರಿನ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥ ಕೆ ನರಸಿಂಹಮೂರ್ತಿ ಮಾತನಾಡಿ, “ಮನೆಗೆದ್ದು ಮಾರುಗೆಲ್ಲು ಎನ್ನುವ ಗಾದೆ ಮಾತಿನಂತೆ ಅಸ್ಪೃಶ್ಯತೆ ನಿವಾರಣೆಯ ಮೊದಲ ಪ್ರಯತ್ನ ಅರಿವು ಶಿವಪ್ಪರ ಮನೆಯಿಂದಲೇ ಶುರುವಾಯಿತು. ನಾವು ಕೇವಲ ಮಾತನಾಡುತ್ತೇವೆ. ಆದರೆ ನಮ್ಮ ಮನೆಗಳಲ್ಲಿ ಆಚರಣೆಯಲ್ಲಿರುವುದಿಲ್ಲ. ದಲಿತರ ಗೃಹಪ್ರವೇಶ ಕಾರ್ಯಕ್ರಮಕ್ಕೆ ದಲಿತರು ಶಿವಪ್ಪನವರ ಮನೆಗೆ ಬಂದು ತತ್ವಪದ ಹಾಡಿ ಊಟ ಮಾಡಿ ಹೋದ ಘಟನೆ ಹೊಸ ಬದಲಾವಣೆಗೆ ನಾಂದಿ ಹಾಡಿತು” ಎಂದರು.
ಕಾಳೇಗೌಡ ನಾಗವಾರ ಮಾತನಾಡಿ, “ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಇನ್ನೂ ಕೂಡಾ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಮಂಡ್ಯ ಜಿಲ್ಲೆಯ ಹನಕೆರೆಯಲ್ಲಿ ದಲಿತರನ್ನು ಗುಡಿಗೆ ಸೇರಿಸದಿರುವುದು ತುಂಬಾ ನೋವುಂಟು ಮಾಡಿದ ಘಟನೆಯಾಗಿದೆ. ಹಿಂದಿನ ಕಾಲದಲ್ಲಿ ದಲಿತರ ಬಹಿಷ್ಕಾರಗಳು ಹೆಚ್ಚಾಗಿ ನಡೆಯುತ್ತಿದ್ದವು, ನಾನು ಮತ್ತು ಬಿಸಗರಹಳ್ಳಿ ರಾಮಣ್ಣ ಜಂಟಿಯಾಗಿ ಡಿಸಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸುತ್ತಿದ್ದೆವು” ಎಂದು ಹಳೆಯ ಘಟನೆ ನೆನೆಪಿಸಿಕೊಂಡರು.

ಅಂತರಂಗ ಚಳವಳಿಯ ವಿವೇಕಾನಂದ ಹೆಚ್ ಕೆ ಮಾತನಾಡಿ, “ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಮ್ಮೆಯೋ, ಬೇಸರವೋ, ನಾಚಿಕೆಯೋ ಗೊತ್ತಿಲ್ಲ. ಆದರೆ ಅನಿವಾರ್ಯವಂತೂ ಖಂಡಿತ ಇದೆ. ಕರ್ನಾಟಕದಲ್ಲಿ ದಲಿತ ಚಳವಳಿ ಜನ ಮನ್ನಣೆ ಪಡೆದು 50 ವರ್ಷ ಆಗುತ್ತಿದ್ದು, ಇಂಥ ಸಂದರ್ಭದಲ್ಲಿ ಚಳವಳಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಯಾರು ಹೊರಬೇಕು? ಅಸ್ಪೃಶ್ಯತೆ ನಿವಾರಣೆ ಮಾಡುವವರು ಯಾರು? ಎಂಬುದು ತಿಳಿದಿಲ್ಲ, ಇನ್ನೂ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗಿಲ್ಲ” ಎಂದರು.
ಸದಾಶಿವ ಕೆ ಮಾತನಾಡಿ, “ಅಸ್ಪೃಶ್ಯತೆ ಆಚರಣೆಯ ಬಗ್ಗೆ ಇತಿಹಾಸದಲ್ಲಿ ಮೊಟ್ಟಮೊದಲು ಕಂಡು ಬರೋದು ಜಾತಕ ಕಥೆಗಳಲ್ಲಿ. ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಐತಿಹಾಸಿಕ ವಿದ್ಯಮಾನಗಳನ್ನು ಜಾತಕ ಕಥೆಗಳು ಉಲ್ಲೇಖಿಸುತ್ತದೆ. ಅಸ್ಪೃಶ್ಯತೆ ಆಚರಣೆ ಘಟನೆ ನಡೆದ ಬಗ್ಗೆ ಉಲ್ಲೇಖವಿದೆ. ಮಾತಂಗ ಮುನಿಯ ವಿರುದ್ಧ ನಡೆದ ಅಸ್ಪೃಶ್ಯತೆ ಆಚರಣೆ ಎದುರು ಹೋರಾಟ ಮಾಡುತ್ತಾನೆ” ಎಂದು ಇತಿಹಾಸವನ್ನು ತಿಳಿಸಿದರು.

ಈ ಸಹಬೋಜನ ಕಾರ್ಯಕ್ರಮದಲ್ಲಿ ಪಾಲಹಳ್ಳಿ ಗ್ರಾಮದ ರುದ್ರಮ್ಮ ನಾಗರಾಜ್ರವರಿಗೆ ಗ್ರಾಮರತ್ನ ಪ್ರಶಸ್ತಿಯನ್ನು ಕಾಳೇಗೌಡ ನಾಗವಾರ ಪ್ರಧಾನ ಮಾಡಿದರು.
ಇದನ್ನು ಓದಿದ್ದೀರಾ? ಕೆಆರ್ಪೇಟೆ | ವಾಟ್ಸಾಪ್ ಯುನಿವರ್ಸಿಟಿ ತಿರುಚಿದ ಇತಿಹಾಸ ಹೇಳುತ್ತಿದೆ: ಪ್ರೊ ಎಸ್ ಜಿ ಸಿದ್ದರಾಮಯ್ಯ
ಅಭಿಯಾನದ ರೂವಾರಿ ಅರಿವು ಶಿವಪ್ಪ, ಡಾ. ರುದ್ರೇಶ್ ಅದರಂಗಿ, ಡಾ. ಚಿನ್ನಸ್ವಾಮಿ ಸೋಸಲೆ, ಜಾಣ ಜಾಣೆಯರು ಜಗದೀಶ್, ಮಹಮ್ಮದ್ ಇಲಿಯಾಜ್, ಪಾಲಹಳ್ಳಿ ಪ್ರಸನ್ನ, ಅಬ್ಬಣಿ ಶಿವಪ್ಪ, ನಗರಕೆರೆ ಜಗದೀಶ್, ಪ್ರಜಾವಾಣಿಯ ಗಣಂಗೂರು ನಂಜೇಗೌಡ, ಕಡತನಾಳು ಜಯಶಂಕರ್, ಎಚ್ಡಿ ಕೋಟೆಯ ಹಾಡಿ ವಾಸಿಗಳು, ಪಾಲಹಳ್ಳಿ ಹಾಗೂ ಶ್ರೀರಂಗಪಟ್ಟಣದ ಪ್ರಜ್ಞಾವಂತರು ಇದ್ದರು.
ಸೂಪರ್