ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್(ಎಸ್ಐಓ) ಕರ್ನಾಟಕ ರಾಜ್ಯ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಶೈಕ್ಷಣಿಕ ಅನುದಾನ ಒದಗಿಸುವಂತೆ ಆಗ್ರಹಿಸಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಾಲಾ ವಿದ್ಯಾರ್ಥಿ ವೇತನ ಪೋರ್ಟಲ್ ಪೂರ್ವ-ಮ್ಯಾಟ್ರಿಕ್, ಪೋಸ್ಟ್-ಮ್ಯಾಟ್ರಿಕ್ ಹಾಗೂ ಮೌಲಾನಾ ಆಜಾದ್ ಫೆಲೋಶಿಪ್ ಮುಂತಾದ ಯೋಜನೆಗಳನ್ನು ರದ್ದುಪಡಿಸಿದ್ದು, ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಶಿಕ್ಷಣ ಮಧ್ಯದಲ್ಲೇ ಕೈಬಿಡುತ್ತಿದ್ದಾರೆ ಎಂದು ಎಸ್ಐಓ ಪತ್ರದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ವಿದ್ಯಾರ್ಥಿವೇತನ ಯೋಜನೆಗಳಿಗೆ ಅನುದಾನ ಒದಗಿಸಬೇಕು ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿರುವ ಅನುದಾನವನ್ನು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಎಸ್ಐಓ ಒತ್ತಾಯಿಸಿದೆ.
ಹಿಂದಿನ ವರ್ಷ ಪಿಎಚ್ಡಿ ವಿದ್ಯಾರ್ಥಿಗಳಿಗೆ ಕೇವಲ ₹10,000 ಸಹಾಯಧನ ನೀಡಲಾಗಿತ್ತು. ಆದರೆ ಈ ಮೊದಲು ₹25,000 ನೀಡಲಾಗುತ್ತಿತ್ತು. ಎಸ್ಐಓ ಈ ಮೊದಲು ನೀಡಿದ ಮೊತ್ತವನ್ನು ಮರಳಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಕೇಳಿಕೊಂಡಿದೆ.
AISHE 2021-22 ವರದಿಯ ಪ್ರಕಾರ, ಮುಸ್ಲಿಂ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಪ್ರಮಾಣ (GER) ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿರುವುದರಿಂದ, ಎಸ್ಐಓ ವಿಶೇಷ ತರಬೇತಿ ಯೋಜನೆಯನ್ನು ಪ್ರಸ್ತಾಪಿಸಿದೆ. ಇದರಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ CUET, GATE, IIT, IIM, NLSIU ಪ್ರವೇಶ ಪರೀಕ್ಷೆಗಳಿಗಾಗಿ ತರಬೇತಿ ನೀಡಲು ವಿಶೇಷ ಅನುದಾನ ಒದಗಿಸಬೇಕೆಂದು ಒತ್ತಾಯಿಸಲಾಗಿದೆ.
ಪ್ರೀ-ಮೆಟ್ರಿಕ್ ವಿದ್ಯಾರ್ಥಿವೇತನ ₹250 ಕೋಟಿ (15 ಲಕ್ಷ ವಿದ್ಯಾರ್ಥಿಗಳಿಗೆ), ಪೋಸ್ಟ್-ಮೆಟ್ರಿಕ್ ಮತ್ತು ಮೆರಿಟ್-ಕಮ್-ಮೀನ್ಸ್ ವಿದ್ಯಾರ್ಥಿವೇತನ ₹700 ಕೋಟಿ (10 ಲಕ್ಷ ವಿದ್ಯಾರ್ಥಿಗಳಿಗೆ), ಪಿಎಚ್ಡಿ ಫೆಲೋಶಿಪ್ ₹300 ಕೋಟಿ (1,000 ವಿದ್ಯಾರ್ಥಿಗಳಿಗೆ), ಶುಲ್ಕ ಮನ್ನಾ ₹150 ಕೋಟಿ (15,000 ವಿದ್ಯಾರ್ಥಿಗಳಿಗೆ), ಬಿ ಎಡ್, ಡಿಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ₹15 ಕೋಟಿ (3,000 ವಿದ್ಯಾರ್ಥಿಗಳಿಗೆ), ವಿದ್ಯಾಸಿರಿ ₹25 ಕೋಟಿ (15,000 ವಿದ್ಯಾರ್ಥಿಗಳಿಗೆ), ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ₹2 ಕೋಟಿ (1,000 ವಿದ್ಯಾರ್ಥಿಗಳಿಗೆ), ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಪ್ರೋತ್ಸಾಹಧನ ₹45 ಕೋಟಿ (1,500 ವಿದ್ಯಾರ್ಥಿಗಳಿಗೆ) ಮೀಸಲಿಡಲು ಎಸ್ಐಓ ಒತ್ತಾಯಿಸಿದೆ.
ಅರಿವು ಸಾಲ ಯೋಜನೆಯ ಕುರಿತು ಪ್ರಸ್ತಾಪಿಸಿರುವ ಎಸ್ಐಓ, ₹200 ಕೋಟಿ ಅನುದಾನವನ್ನು 20,000 ವಿದ್ಯಾರ್ಥಿಗಳಿಗೆ ಮಂಜೂರು ಮಾಡಬೇಕು ಹಾಗೂ ಈ ಯೋಜನೆಯ ಪ್ರಯೋಜನಗಳನ್ನು ಸಿಇಟಿ ವಿದ್ಯಾರ್ಥಿಗಳಷ್ಟೇ ಅಲ್ಲ, ಮೆನೇಜ್ಮೆಂಟ್ ಕೋಟಾದ ವಿದ್ಯಾರ್ಥಿಗಳಿಗೆ ಕೂಡಾ ವಿಸ್ತರಿಸಬೇಕು ಎಂದು ಒತ್ತಾಯಿಸಿದೆ.
ಉದ್ಯೋಗಗಳ ಕೊರತೆಯಿಂದ ಹಳೆಯ ವಿದ್ಯಾರ್ಥಿ ಸಾಲದ ಕಂತುಗಳನ್ನು ವಜಾಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಎಸ್ಐಓ ಕೇಳಿಕೊಂಡಿದೆ. ಈ ಪತ್ರವನ್ನು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿ ಅನೇಕ ಪ್ರಮುಖ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಮತ್ತೆ ಕೈಕೊಟ್ಟ ಆಸ್ತಿ ನೋಂದಣಿಯ ‘ಕಾವೇರಿ ವೆಬ್ಸೈಟ್’ ಸರ್ವರ್: ಸಾರ್ವಜನಿಕರ ಪರದಾಟ
ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಬಹುತೇಕ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದೆ. ಅವರ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದು ಅಗತ್ಯವೆಂದು ಎಸ್ಐಓ ಒತ್ತಾಯಿಸಿದೆ.
