ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಗಿನಾ ನದಿಯ ದಡದಲ್ಲಿರುವ ಮಳಖೇಡ (ಮಾನ್ಯಖೇಟಾ) ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಇದು ಕಲಬುರಗಿ ನಗರದಿಂದ 45 ಕಿಮೀ ದೂರದಲ್ಲಿದೆ.
ಬಾದಾಮಿಯ ಚಾಲುಕ್ಯರ ನಂತರ ಕರ್ನಾಟಕವನ್ನು ಆಳಿದ ರಾಜಮನೆತಗಳಲ್ಲಿ ರಾಷ್ಟ್ರಕೂಟರು ಪ್ರಮುಖರಾಗಿದ್ದಾರೆ. ಇವರು ಸುಮಾರು ಎರಡೂವರೆ ಶತಮಾನಗಳ ಕಾಲ ರಾಜ್ಯಭಾರ ನಡೆಸಿದ ಇತಿಹಾಸ ಇದೆ. ಚಾಲುಕ್ಯರ ಸಾಮಂತರಾಗಿದ್ದ ಇವರು, ಚಾಲುಕ್ಯರ ಅವನತಿಯ ನಂತರ ಸ್ವತಂತ್ರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಇವರು ತಮ್ಮನ್ನು ‘ಲಟ್ಟಲೂರ ಪುರವರಾಧೀಶ್ವರ’ ರೆಂದು ಗುರುತಿಸಿಕೊಂಡಿದ್ದಾರೆ. ರಾಷ್ಟ್ರಕೂಟರ ರಾಜಧಾನಿ ಮಳಖೇಡವಾಗಿತ್ತು ಹಾಗೂ ಲಾಂಛನ ‘ಗರುಡ’ ವಾಗಿತ್ತು.
ಕ್ರಿ.ಶ. 735ರಿಂದ 756ರ ವರೆಗೆ ಆಳ್ವಿಕೆ ನಡೆಸಿದ ‘ದಂತಿದುರ್ಗನು’ ರಾಷ್ಟ್ರಕೂಟ ರಾಜ್ಯದ ಸ್ಥಾಪಕ. ಬಾದಾಮಿ ಚಾಲುಕ್ಯರ ಸಾಮಂತನಾಗಿದ್ದ ಈತ, ಕ್ರಿ. ಶ. 752-53ರಲ್ಲಿ ಚಾಲುಕ್ಯರ ಕೊನೆಯ ಅರಸ ಎರಡನೇ ಕೀರ್ತಿವರ್ಮಾನನ್ನು ಸೋಲಿಸಿ ಸ್ವತಂತ್ರ ರಾಜ್ಯ ಸ್ಥಾಪನೆ ಮಾಡಿದನಲ್ಲದೇ, ಮಾಳವ, ಗುಜರಾತ್ ಪ್ರದೇಶಗಳನ್ನು ಆಕ್ರಮಿಸಿಕೊಂಡು ಆ ನಂತರ ಕಂಚಿಯ ಪಲ್ಲವರು, ಮಧುರೈಯ ಪಾಂಡ್ಯರನ್ನು ಸೋಲಿಸಿ ರಾಷ್ಟ್ರಕೂಟರ ಸಾಮ್ರಾಜ್ಯ ಬೆಳೆಸಿದ್ದ.

ಕ್ರಿ. ಶ. 821ರಲ್ಲಿ ಸಿಂಹಾಸನವೇರಿ ಅಧಿಕಾರ ವಹಿಸಿಕೊಂಡಿದ್ದ ರಾಷ್ಟ್ರಕೂಟರ ರಾಜ ಅಮೋಘ ವರ್ಷನು ಅವಿಧೇಯರಾಗಿದ್ದ ಅನೇಕ ಸಾಮಂತರನ್ನು ಬಗ್ಗು ಬಡಿದನಲ್ಲದೆ, ಚಾಲುಕ್ಯರ ದೊರೆ ಗುಣಗ ವಿಜಯಾದಿತ್ಯವನ್ನು ಸೋಲಿಸಿದನು. ಈತನು ಧರ್ಮನಿಷ್ಠನೂ, ಶಾಂತಪ್ರಿಯನೂ ಮತ್ತು ಸ್ವತಃ ಕವಿಯೂ ಆಗಿದ್ದನು. ಅಮೋಘವರ್ಷನಿಗೆ ‘ವೀರನಾರಾಯಣ’ ಎಂಬ ಬಿರುದು ಇತ್ತು. ಕನ್ನಡದ ಮೊದಲ ಕೃತಿ ಎನಿಸಿರುವ ‘ಕವಿರಾಜಮಾರ್ಗ’ ಕೃತಿ ರಚಿಸಿ ಪ್ರಸಿದ್ಧ ದೊರೆ.
ಕ್ರಿ. ಶ. 851ರಲ್ಲಿ ಅರೇಬಿಯಾದ ಪ್ರವಾಸಿ ಸುಲೇಮಾನ್ ಅಮೋಘ ವರ್ಷನ ಆಸ್ಥಾನಕ್ಕೆ ಭೇಟಿ ನೀಡಿದ್ದನು. ಅಮೋಘವರ್ಷ ಅಳ್ವಿಕೆಯಲ್ಲಿ ರಾಷ್ಟ್ರಕೂಟರ ರಾಜಧಾನಿಯನ್ನು ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಮಾನ್ಯಖೇಟಕ್ಕೆ ಸ್ಥಳಾಂತರಿಸಿದಾಗ ಮಾನ್ಯಖೇಟವು 814 ರಿಂದ 968 ಎಡಿ ವರೆಗೆ ಪ್ರಾಮುಖ್ಯತೆಗೆ ಏರಿತು. ಸುಮಾರು 64 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಅಮೋಘವರ್ಷನು ಕ್ರಿ. ಶ. 878ರಲ್ಲಿ ನಿಧನ ಹೊಂದಿದ್ದ.
ಅಮೋಘವರ್ಷನ ನಂತರ ಸಿಂಹಾಸನವೇರಿದ ಯಾವ ರಾಷ್ಟ್ರಕೂಟ ದೊರೆಗಳೂ ಅಷ್ಟು ಪ್ರಬಲರಾಗಿರಲಿಲ್ಲ. ರಾಷ್ಟ್ರಕೂಟರ ಕೊನೆಯ ದೊರೆ ಇಮ್ಮಡಿ ಕರ್ಕನನ್ನು ಕ್ರಿ. ಶ. 973 ರಲ್ಲಿ ಕಲ್ಯಾಣ ಚಾಲುಕ್ಯ ದೊರೆ ಎರಡನೇ ತೈಲಪನು ಸೋಲಿಸಿ ಕಲ್ಯಾಣದ ಚಾಲುಕ್ಯರ ಆಳ್ವಿಕೆಗೆ ತಳಹದಿ ಹಾಕಿದರು.
ಮಾನ್ಯಖೇಟವು ರಾಷ್ಟ್ರಕೂಟರ ಅವನತಿಯ ನಂತರ ಕಲ್ಯಾಣಿ ಚಾಲುಕ್ಯರು ಅಥವಾ ಪಶ್ಚಿಮ ಚಾಲುಕ್ಯರ ರಾಜಧಾನಿಯಾಗಿತ್ತು. ಅಂದಿನ ಪ್ರಮುಖ ಮಳಖೇಡ ಕೋಟೆ ಇಂದು ಅವನತಿಯತ್ತ ತಲುಪಿದೆ.

ಐತಿಹಾಸಿಕ ಚರಿತ್ರೆಯುಳ್ಳ ಮಳಖೇಡ ಕೋಟೆಯನ್ನು 2016-18ರ ಅವಧಿಯಲ್ಲಿ ಅಂದಿನ ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ ಅವರು ₹5 ಕೋಟಿ ಅನುದಾನ ನೀಡಿ ಜೀರ್ಣೋದ್ದಾರ ಮಾಡಿಸಿದ್ದರು. ಜೊತೆಗೆ ಆಗಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ₹1 ಕೋಟಿ ಅನುದಾನ ನೀಡಿದ್ದರು.
ಈ ಕೋಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 4 ಹಾಗೂ 5ರಂದು ರಾಷ್ಟ್ರಕೂಟ ಉತ್ಸವ-2018 ಬಹಳ ವಿಜೃಂಭಣೆಯಿಂದ ಜರುಗಿತ್ತು.
2018ರಲ್ಲಿ ಜೀರ್ಣೋದ್ದಾರದ ಬಳಿಕ ಹಳೆ ಗೋಡೆಗಳು ಬಿದ್ದಿಲ್ಲ. ಆದರೆ, ಜೀರ್ಣೋದ್ದಾರ ಮಾಡಿದ ಗೋಡೆಯೇ ಬಿದ್ದಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

ಐತಿಹಾಸಿ ಮಹತ್ವವುಳ್ಳ ಕೋಟೆಗೆ ಇಂದು ಭದ್ರತೆಯೇ ಎಂಬುದು ಇಲ್ಲದಂತಾಗಿದೆ. ಕೋಟೆಯ ಜೀರ್ಣೋದ್ಧಾರಕ್ಕೆ ಸರಕಾರವು ಅನುದಾನ ಬಿಡುಗಡೆ ಮಾಡಿತ್ತು. ಅಭಿವೃದ್ಧಿ ಮಾಡಿದ ಕೇವಲ ಎಂಟು ತಿಂಗಳಲ್ಲಿ ಕೋಟೆ ಸ್ವಲ್ಪ ಮಳೆ ಬಂದ ಕೂಡಲೇ ಕುಸಿತಕ್ಕೆ ಒಳಗಾಗಿದೆ. ಇದೇ ರೀತಿ ಕೋಟೆಯನ್ನು ಕೈ ಬಿಟ್ಟರೆ ಸಂಪೂರ್ಣ ಭುಕುಸಿತಕ್ಕೆ ಒಳಗಾಗುವುದು ಖಂಡಿತ ಎಂಬುದು ಇಲ್ಲಿನ ಜನರ ಅಭಿಪ್ರಾಯ ಆಗಿದೆ.
ಸರ್ಕಾರ ಸರಿಯಾದ ಕ್ರಮ ಕೈಗೊಂಡು, ಐತಿಹಾಸಿಕ ಸ್ಮಾರಕವನ್ನು ಉಳಿಸಬೇಕೆಂಬುದು ಜನರ ಮನವಿ. ಜಿಲ್ಲೆಯ ಇಬ್ಬರು ಸಚಿವರಾದ ಶರಣಪ್ರಕಾಶ ಪಾಟೀಲ ಹಾಗೂ ಪ್ರಿಯಾಂಕ್ ಖರ್ಗೆಯವರು ಇದಕ್ಕೆ ಯಾವ ರೀತಿಯ ಸ್ಪಂದನೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.