ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯಿತಿಯ ವೆಂಕಟಾಪುರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು ತಮ್ಮ ವೇತನವನ್ನು ಶಿಕ್ಷಣಕ್ಕಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಮನರೇಗಾ(MNREGA) ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ವಿದ್ಯಾರ್ಥಿನಿಯರು ಕೂಲಿ ಹಣವನ್ನು ತಮ್ಮ ಶಿಕ್ಷಣಕ್ಕಾಗಿ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದು, ತಮ್ಮ ಕುಟುಂಬದ ಕಿರಿಯ ಸದಸ್ಯರ ಶಿಕ್ಷಣದ ಖರ್ಚುಗಳನ್ನೂ ಕೂಡ ಭರಿಸುತ್ತಿರುವುದರಿಂದ ಪಟ್ಟಣದಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ವರ್ಷದ 100 ದಿನಗಳಲ್ಲಿ 37,000 ರೂಪಾಯಿಗಳನ್ನು ಗಳಿಸುತ್ತಾರೆ.
ವಿಜಯಲಕ್ಷ್ಮಿ ಶಿವಶಿಂಪಿಗರ್ ಅವರು ಕಳೆದ ವರ್ಷ MNREGA ಸಹಾಯದಿಂದ ತಮ್ಮ ಪದವಿ ಪಡೆದಿದ್ದಾರೆ. ಈಗ ತಮ್ಮ ಚಿಕ್ಕ ಸಹೋದರ ಬಿಎ ಪದವಿ ಪಡೆಯುವಂತೆ ಶುಲ್ಕ ಮತ್ತು ಇತರ ವೆಚ್ಚಗಳನ್ನು ಭರಿಸುತ್ತಿದ್ದಾರೆ. ನಾವು ಕುಟುಂಬದ ನಾಲ್ಕು ಸದಸ್ಯರು ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆಂದು ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.

ಚಂದ್ರಿಕಾ ಬಸವರಾಜ್ ಕಟಗೇರಿ ಗದಗದ ಖಾಸಗಿ ಕಾಲೇಜೊಂದರಲ್ಲಿ ಬಿಎ ಎರಡನೇ ಸೆಮಿಸ್ಟರ್ ಓದುತ್ತಿರುವುದಾಗಿ ಹೇಳಿಕೊಂಡಿದ್ದು, “ನಾನು ವಾರಾಂತ್ಯ, ಸಾಮಾನ್ಯ ಮತ್ತು ಬೇಸಿಗೆ ರಜಾದಿನಗಳಲ್ಲಿ ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತೇನೆ. ಇದರಿಂದ ನನ್ನ ಕಾಲೇಜು ಶುಲ್ಕ, ಪ್ರಯಾಣ ಹಾಗೂ ಇತರ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವ ನನ್ನ ಇಬ್ಬರು ಕಿರಿಯ ಸಹೋದರರ ಶೈಕ್ಷಣಿಕ ವೆಚ್ಚವನ್ನೂ ಕೂಡ ಭರಿಸುತ್ತಿದ್ದೇನೆ. ಇದರೊಂದಿಗೆ, ನಾವು ನಮ್ಮ ಕುಟುಂಬದ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದೇವೆ. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ವೈದ್ಯಕೀಯ ವೆಚ್ಚಕ್ಕೂ ನಾನು ದುಡಿದ ಮನರೇಗಾ ಕೂಲಿ ಸಹಾಯವಾಗಿದೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

“ಮನರೇಗಾ ಕೂಲಿ ಹಣದ ಸಹಾಯದಿಂದ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಈಗ ನಾನು ಉದ್ಯೋಗವನ್ನು ಹುಡುಕುತ್ತಿದ್ದು, ಖಾಸಗಿ ಕಂಪನಿಗಳಲ್ಲಿ ಕೆಲವು ಸಂದರ್ಶನಗಳಿಗೆ ಹಾಜರಾಗುತ್ತಿದ್ದೇನೆ. ಪ್ರಸ್ತುತ ನಾನು ನನ್ನ ಇಬ್ಬರು ಸೋದರಿಯರ ಶಾಲೆ ಮತ್ತು ಕಾಲೇಜಿನ ಶಿಕ್ಷಣ ವೆಚ್ಚವನ್ನೂ ಭರಿಸುತ್ತಿದ್ದೇನೆ. ಮನರೇಗಾ ಇಲ್ಲದಿದ್ದರೆ ಬಹುಷಃ ನಾವು ನಮ್ಮ ಶಿಕ್ಷಣವನ್ನು ಮುಂದುವರೆಸುತ್ತಿರಲಿಲ್ಲ” ಎಂದು ಶೋಭಾ ಗೋಣಿಸ್ವಾಮಿ ಹೇಳಿಕೊಂಡಿದ್ದಾರೆ.

“ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಪದವಿ ವಿದ್ಯಾರ್ಥಿಗಳು ಹಾಗೂ ಇನ್ನಿತರ ವಂಚಿತರನ್ನು ಆಕರ್ಷಿಸುತ್ತಿವೆ. ಮೂವರು ವಿದ್ಯಾರ್ಥಿನಿಯರು, ಅವರ ಮತ್ತು ತಮ್ಮ ಕುಟುಂಬದ ಕಿರಿಯ ಸಹೋದರರ ಶಿಕ್ಷಣಕ್ಕೂ ಮನರೇಗಾ ಕೂಲಿ ಹಣವನ್ನು ಬಳಸುತ್ತಿರುವುದು ಸಂತೋಷವನ್ನುಂಟುಮಾಡಿದೆ” ಎಂದು ಮುಂಡರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಾಂಗಾಲಾದ ರೈತರು
“ಯಾವುದೇ ಪದವಿ ವಿದ್ಯಾರ್ಥಿಗಳು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ, ಅವರು ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮನರೇಗಾ ಯೋಜನೆಯಡಿ ಕೆಲಸವನ್ನು ಪಡೆಯಬಹುದು” ಎಂದು ತಿಳಿಸಿದ್ದಾರೆ.
ವರದಿ : ಸಂಗಮೇಶ್ ಮೆಣಸಿನಕಾಯಿ, ಟೈಮ್ಸ್ ಆಫ್ ಇಂಡಿಯಾ
ಕನ್ನಡಕ್ಕೆ ಅನುವಾದ : ರೇಖಾ ಹಾಸನ