ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳು ಮಕ್ಕಳ ಸುಂದರ ಭವಿಷ್ಯವನ್ನು ನರಕವನ್ನಾಗಿಸುತ್ತಿವೆ. ಮಕ್ಕಳಿಗೆ ಪೌಷ್ಠಿಕ ಆಹಾರ ಕೊರತೆ ಎದುರಾಗುತ್ತಿದೆ. ಇವು ಮಕ್ಕಳ ಸಂಸತ್ನಲ್ಲಿ ಪ್ರತಿಧ್ವನಿಸಿದ ಪ್ರಮುಖ ಮಕ್ಕಳ ಸಮಸ್ಯೆಗಳಾಗಿವೆ. ಈ ಎಲ್ಲ ಸಮಸ್ಯೆಗಳನ್ನು ‘ಬಾಲ ಜನಪ್ರತಿನಿಧಿ’ಗಳೇ ಮಂಡಿಸಿದ್ದು, ಅವುಗಳನ್ನು ಪರಿಹಾರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಜಯಪುರದ ಶಾಂತಿನಗರದಲ್ಲಿ ವಿದ್ಯಾರ್ಥಿಗಳು ‘ಮಕ್ಕಳ ಸಂಸತ್’ ನಡಸಿದ್ದಾರೆ. ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚಿಕ್ಕಮಕ್ಕಳು ಅನುಭವಿ ಸಂಸದರಂತೆ, ಜನಪ್ರತಿನಿಧಿಗಳಂತೆ ವಿವಿಧ ವಿಷಯಗಳ ಕುರಿತು ತರ್ಕಬದ್ಧವಾಗಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ.
ಮಕ್ಕಳು ಎದುರಿಸುತ್ತಿರುವ ರಕ್ತಹೀನತೆ ಸಮಸ್ಯೆ, ಪೌಷ್ಠಿಕ ಆಹಾರದ ಕೊರತೆ, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮೊದಲಾದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಜೊತೆಗೆ ಅದಕ್ಕೆ ಪೂರಕವಾದ ಚಾರ್ಟರ್ಗಳನ್ನು, ಅಂಕಿ ಅಂಶಗಳನ್ನು ಹಾಗೂ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದ್ದಾರೆ.
ವಿಜಯಪುರದ 15 ಶಾಲೆಗಳಿಂದ 30 ಮಕ್ಕಳು ಹಾಗೂ ಶಿಕ್ಷಕರು ಈ ಸಂಸತ್ತಿನಲ್ಲಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು. ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಕೊನೆಗಾಣಿಸುವ ಕುರಿತಾಗಿ ಹಾಗೂ ಸಾರ್ವತ್ರಿಕ ರೋಗ ನಿರೋಧಕಗಳು ಹಾಗೂ ಹದಿಹರೆಯದ ಮಕ್ಕಳ ಸಮಸ್ಯೆಗಳ ಕುರಿತು ಸುದೀರ್ಘವಾದ ಚರ್ಚೆ ನಡೆಸಿದ್ದಾರೆ.
ಅರ್ಥಪೂರ್ಣವಾಗಿ ವಾದ ಮಂಡಿಸಿದ ಬಿಎಲ್ಡಿಇ ಬಾಲಕಿಯರ ಪ್ರೌಢಶಾಲೆಯ ಲಕ್ಷ್ಮೀ ಐಹೊಳಿ ಹಾಗೂ ಎಸ್ಎಸ್ ಪ್ರೌಢಶಾಲೆಯ ವಿನಾಯಕ ಕಬಾಡೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯುವ ಮಕ್ಕಳ ಸಂಸತ್ಗೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ಪೌಷ್ಠಿಕ ಆಹಾರವನ್ನು ಸೇವಿಸಿ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು. ವ್ಯಾಯಾಮದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಿಕೊಂಡರೆ, ಓದಿನ ಹಂಬಲ ಹೆಚ್ಚುತ್ತದೆ. ಮೊಬೈಲ್ ಬಳಕೆಯನ್ನು ಅವಶ್ಯಕತೆಗಿಂತ ಹೆಚ್ಚು ಬಳಸಬಾರದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ವಾಸುದೇವ ತೋಳಬಂದಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ದಾನೇಶ ಅವಟಿ, ಉಜ್ವಲ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.