ಎರಡು ಕಾರು ಮತ್ತು ಒಂದು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ – ಔರಾದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಧರಿ ಹನುಮಾನ ದೇವಾಸ್ಥಾನದ ಬಳಿ ಗುರುವಾರ ಸಂಜೆ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಔರಾದ ತಾಲೂಕಿನ ಧುಪತಮಹಾಗಾಂವ ಗ್ರಾಮದ ಸುಖದೇವ್ (38) ಹಾಗೂ ಲಾಧಾ ಗ್ರಾಮದ ಸಿದ್ದು ಮುಚಳಂಬೆ (40) ಮೃತಪಟ್ಟಿದ್ದಾರೆ.
ಸಾವನ್ನಪ್ಪಿದ ಇಬ್ಬರೂ ಜೆಸ್ಕಾಂ ಇಲಾಖೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಿಸಿ ಗ್ರಾಮದಿಂದ ಸಂತಪೂರ ಜೆಸ್ಕಾಂ ಕಚೇರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಎರಡು ಕಾರುಗಳ ಮುಖಾಮುಖಿಯಾಗಿ ಢಿಕ್ಕಿಯಾಗಿವೆ. ಈ ವೇಳೆ, ಬೈಕ್ಗೆ ಕಾರು ಅಪ್ಪಳಿಸಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಸಂತಪೂರ ಪೊಲೀಸರು, ಔರಾದ ಸಿಪಿಐ ರಘುವೀರ್ ಸಿಂಗ್ ಠಾಕೂರ್ ಹಾಗೂ ಪಿಇಎಸ್ ಮೆಹಬೂಬ್ ಅಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.