- ಹಿಂಸಾಚಾರ ತಡೆಯುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ.
- ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಸಿಐಡಿ ಮರುತನಿಖೆಗೆ ಆಗ್ರಹ
ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ವಿವಸ್ತ್ತಗೊಳಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದ ಘಟನೆ ಇಡೀ ಪ್ರಜ್ಞಾವಂತ ಸಮಾಜವೇ ತಲೆತಗ್ಗಿಸುವಂತಾಗಿದ್ದು, ಹಿಂಸಾಚಾರ ತಡೆಯುವಲ್ಲಿ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಭೀಮ್ ಆರ್ಮಿ ಏಕತಾ ಮಿಷನ್ ಹುಮನಾಬಾದ್ ತಾಲೂಕು ಘಟಕ ಖಂಡಿಸಿದೆ.
ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಹುಮನಾಬಾದ್ ಪಟ್ಟಣದಲ್ಲಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ಹಳೆ ತಹಸೀಲ್ ಕಚೇರಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ರಾಷ್ಟ್ರಪತಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲೂಕಾಡಳಿತಕ್ಕೆ ಸಲ್ಲಿಸಿದರು.
ಭೀಮ್ ಆರ್ಮಿ ತಾಲೂಕಾಧ್ಯಕ್ಷ ಅನೀಲ ದೊಡ್ಡಿ ಮಾತನಾಡಿ, “ಮಣಿಪುರ ರಾಜ್ಯ ಹಿಂಸಾಚಾರದಿಂದ ಹೊತ್ತು ಉರಿಯುತ್ತಿದ್ದರೂ ಅಲ್ಲಿನ ರಾಜ್ಯ ಸರ್ಕಾರ ಯಾವುದೇ ಚಕಾರ ಎತ್ತುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೆಗೂ ಆ ರಾಜ್ಯಕ್ಕೆ ಸೌಜನ್ಯಕ್ಕಾದರೂ ಭೇಟಿ ಕೊಡದೇ ಇರುವುದು ಖಂಡನೀಯವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಏಳು ದಲಿತ ಅಮಾಯಕರನ್ನು ನೀರಿನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವುದು ಖಂಡನೀಯವಾಗಿದೆ. ಅದಲ್ಲದೇ ರಾಜ್ಯದಲ್ಲಿ ಸುಕ್ಷೇತ್ರ ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆ ಪ್ರಕರಣ ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೀದರ ಜಿಲ್ಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾ, ಮೊರಾರ್ಜಿ ದೇಸಾಯಿ, ಜವಾಹರ ನವೋದಯ, ಆದರ್ಶ ವಿದ್ಯಾಲಯ ಮುಂತಾದ ಕಡೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹಾಗೂ ಮಹಿಳಾ ಸಿಬ್ಬಂದಿಯವರ ಜೊತೆ ಲೈಂಗಿಕ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ಖಂಡನೀಯವಾಗಿದೆ” ಎಂದು ಕಿಡಿಕಾರಿದರು.
“ಕನ್ನಡ ನಟ ಉಪೇಂದ್ರ ಅವರು ʼಊರು ಅಂದ್ಮೇಲೆ ಹೊಲಗೇರಿ ಇರುತ್ತೆʼ ಎಂದು ಹೇಳಿಕೆ ಜಾತಿನಿಂದನೆಯಾಗಿದೆ. ಈ ಕುರಿತು ಪ್ರಕರಣ ದಾಖಲಾದರೂ ನಟನಿಗೆ ಬಂಧಿಸದೇ ಇರುವುದು ಖಂಡನೀಯವಾಗಿದೆ. ಮಾಜಿ ಗ್ರಹ ಮಂತ್ರಿ ಅರಗ ಜ್ಞಾನೇಂದ್ರರವರು ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ಕಪ್ಪು ವರ್ಣದವರು ಎಂದು ಹೇಳಿಕೆ ಇಡೀ ಕಲ್ಯಾಣ ಕರ್ನಾಟಕ ಜನತೆಗೆ ಮಾಡಿರುವ ಅವಮಾನ”
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವೇ ಈಡೇರಿಸದೇ ಇದ್ದಲ್ಲಿ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಬೇಡಿಕೆಗಳು:
1. ಭಾಲ್ಕಿ ತಾಲೂಕಿನ, ನಿಟ್ಟೂರ (ಬಿ) ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು.
2. ಬಸವಕಲ್ಯಾಣ ತಾಲೂಕಿನ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲನನ್ನು ಅಮಾನತ್ತುಗೊಳಿಸಿ ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
3. ರಾಜ್ಯದ ಸುಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಸಿ.ಐ.ಡಿ. ಮರುತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು.
4. ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಕುಲ್ಲಕ ವಿಷಯಕ್ಕೆ 7 ದಲಿತ ಅಮಾಯಕರನ್ನು ನೀರಿನಲ್ಲಿ ವಿಷ ಬೆರೆಸಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಕ್ರಮವಹಿಸುವುದು.
5. ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿ ಅಪ್ರಾಪ್ತ ಮಗುವಿನೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ಕ್ರಮ ವಹಿಸುವುದು.
6. ಕನ್ನಡ ನಟ ಉಪೇಂದ್ರ ಅವರನ್ನು ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಬಂಧಿಸಿ, ಶಿಕ್ಷೆಗೆ ಗುರಿಪಡಿಸುವಂತೆ ಕ್ರಮ ವಹಿಸುವದು.
7. ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರರವರು ಖರ್ಗೆ ಅವರಿಗೆ ಕಪ್ಪು ವರ್ಣದವರೆಂದು ನೀಡಿದ ಹೇಳಿಕೆ ಪರಿಗಣಿಸಿ ದಲಿತ ದೌರ್ಜನ್ಯ ಆಯ್ಕೆ ಅಡಿಯಲ್ಲಿ ಬಂಧಿಸಿ, ಶಿಕ್ಷೆಗೆ ಗುರಿಪಡಿಸುವಂತೆ ಕ್ರಮ ವಹಿಸುವುದು.
ಈ ಸುದ್ದಿ ಓದಿದ್ದೀರಾ ? ಬೀದರ್ | ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು
ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಅನೀಲ ದೊಡ್ಡಿ, ಪ್ರಮುಖರಾದ ಎಂ.ಡಿ. ಬಾಬಾ ಪಟೇಶ್ ಅಧ್ಯಕ್ಷರು, ಬಸವರಾಜ ಮುಗದೂರ, ಮನೋಜಕುಮಾರ ಜಾನವೀರ , ವಿನಾಯಕ ಮೇಲ್ಕೇರಿ, ಯುವರಾಜ ಐಹೊಳ್ಳಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.